ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲ
ಲಂಡನ್, ಜುಲೈ 19: ಆರ್ಥಿಕ ವಂಚಕ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ.
ಭಾರತಕ್ಕೆ ಹಸ್ತಾಂತರ ಮಾಡುವ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಂಡನ್ ಹೈಕೋರ್ಟ್ನಲ್ಲಿ ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ.
ಭಾರತೀಯ ಬ್ಯಾಂಕುಗಳಿಗೆ ಹತ್ತಾರು ಸಾವಿರ ಕೋಟಿ ರೂ ವಂಚನೆ ಮಾಡಿರುವ ಆರೋಪದಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ನಿನ ವೆಸ್ಟ್ ಮಿನಿಸ್ಟರ್ ಕೋರ್ಟ್ ಆದೇಶ ನೀಡಿತ್ತು.
ಈ ಆದೇಶ ಪ್ರಶ್ನಿಸಿ ಮಲ್ಯ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ರಾಯಲ್ ಕೋರ್ಟ್ ಆಫ್ ಜಸ್ಟೀಸ್ ಒಪ್ಪಿಗೆ ನೀಡಿತ್ತು.
ವಿಜಯ್ ಮಲ್ಯ ಹಸ್ತಾಂತರ ವಿರುದ್ಧದ ಮೇಲ್ಮನವಿಗೆ ಕೋರ್ಟ್ ಒಪ್ಪಿಗೆ
ಈ ಒಪ್ಪಿಗೆ ದೊರೆತರೆ ಮಾತ್ರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ. ಇತ್ತೀಚಿನ ಕಾನೂನು ಹೋರಾಟದಲ್ಲಿ ಮಲ್ಯಗೆ ದೊರೆತ ಮೊದಲ ಜಯ ಇದಾಗಿತ್ತು. ಲಂಡನ್ ಹೈಕೋರ್ಟ್ ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 11ರಿಂದ ಮೂರು ದಿನಗಳ ಕಾಲ ನಿರಂತರ ವಿಚಾರಣೆ ನಡೆಯಲಿದೆ.
ಹೈಕೋರ್ಟ್ನಲ್ಲಿಯೂ ಅರ್ಜಿ ತಿರಸ್ಕೃತವಾದರೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅವಕಾಶವಿದೆ. ಹೀಗಾಗಿ ಭಾರತಕ್ಕೆ ಮಲ್ಯ ಹಸ್ತಾಂತರ ಪ್ರಕ್ರಿಯೆಯಲ್ಲಿ ಇನ್ನೂ ಒಂದೆರೆಡು ವರ್ಷ ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ 14ಕ್ಕೂ ಅಧಿಕ ಬ್ಯಾಂಕ್ಗಳಿಗೆ ಮಲ್ಯ 9 ಸಾವಿರ ಕೋಟಿ ರೂ ಸಾಲ ಮರುಪಾವತಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಸಾವಿರ ಕೋಟಿ ರೂ ಗಳಿಗೂ ಆಸ್ತಿ ಜಪ್ತಿ ಮಾಡಲಾಗಿದೆ.
ಭಾರತಕ್ಕೆ ಹಸ್ತಾಂತರ ಆದೇಶ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಲಂಡನ್ ಹೈಕೋರ್ಟ್ 2020ರ ಫೆಬ್ರವರಿಯಲ್ಲಿ ವಿಚಾರಣೆ ನಡೆಸಲಿದೆ.
ಈ ಹಿಂದೆ ಸಾಲ ತೆಗೆದುಕೊಂಡು ಪಾವತಿಸದೆ ದೇಶ ದೊರೆದಿರುವ ವಿಜಯ್ ಮಲ್ಯರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಇಡಿ ವಾದಿಸಿತ್ತು.
ಇದಕ್ಕೆ ಮಲ್ಯ ಪರ ವಕೀಲರು ಇಡಿ ಸುಳ್ಳು ಆರೋಪ ಮಾಡಿದ್ದು ಸಾಲ ಮರುಪಾವತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.