ಕಲ್ಲಂಗಡಿ ಬೆಳೆದು ಲಕ್ಷ-ಲಕ್ಷ ಸಂಪಾದಿಸಿದ ಕೊಪ್ಫಳ ರೈತ
ಕೊಪ್ಪಳ, ಮಾರ್ಚ್ 06 : ಕೃಷಿಯನ್ನು ನಂಬಿದವರಿಗೆ ಭೂಮಿ ತಾಯಿ ಎಂದೂ ಕೈ ಕೊಡುವುದಿಲ್ಲ. ಕೊಪ್ಪಳದ ಅಶೋಕ ಹಾಗೂ ವೆಂಕನಗೌಡ ಮೇಟಿ ಅವರ ಕುಟುಂಬ ಇದಕ್ಕೆ ಸಾಕ್ಷಿಯಾಗಿದೆ. ವಿವಿಧ ಬೆಳೆಗಳನ್ನು ಬೆಳೆದು ಲಕ್ಷ-ಲಕ್ಷ ಸಂಪಾದನೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಟುಗನಹಳ್ಳಿ ಗ್ರಾಮದ ಅಶೋಕ ಹಾಗೂ ವೆಂಕನಗೌಡ ಅವರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಶಾಲಾ ಸಮಯದ ನಂತರ ಮತ್ತು ಬಿಡುವಿನ ವೇಳೆಯಲ್ಲಿ ಕೃಷಿಯಲ್ಲೇ ಕಾಲ ಕಳೆಯುತ್ತಾರೆ.
ರೈತ ಸ್ನೇಹಿ ಟಿಟ್ಟಿಬ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?
ಕಿರಿಯರಾದ ಅಶೋಕ ಅವರು ಕೂಡಾ ಕೃಷಿ ಪದವೀಧರರಾಗಿದ್ದು ಯಾವುದೇ ನೌಕರಿಗೆ ಸೇರದೆ ತಮ್ಮ ಜಮೀನಿನಲ್ಲಿಯೇ ದುಡಿಯುತ್ತಿದ್ದಾರೆ. 47 ಎಕರೆ ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇವರ ಒಟ್ಟು 47 ಎಕರೆ ಜಮೀನಿನಲ್ಲಿ 12 ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಮಾವು, 2 ಸಾವಿರ ಚ.ಮೀ. ವಿಸ್ತೀರ್ಣದ 1 ಪಾಲಿಮನೆ ಮತ್ತು 1 ನೆರಳು ಪರದೆ ಮಾಡಿಕೊಂಡಿದ್ದಾರೆ.
ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ
ದೊಡ್ಡ ಕೃಷಿ ಹೊಂಡವನ್ನು ಮಾಡಿಕೊಂಡಿರುತ್ತಾರೆ. ಇವರ ಜಮೀನಿನಲ್ಲಿ ಮೂರು ಕೊಳವೆ ಬಾವಿಗಳಿವೆ. ವರ್ಷದುದ್ದಕ್ಕೂ ತರಕಾರಿ, ಪುಷ್ಪ ಕೃಷಿ, ಜೇನು ಕೃಷಿ ಮತ್ತು ಬಹು ವಾರ್ಷಿಕ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ. 2019-20ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಯೋಜನೆಯಡಿ ಫಲಾನುಭವಿ ಯಾಗಿ ಆಯ್ಕೆಯಾದ ಇವರು 5 ಎಕರೆ ವಿಸ್ತೀರ್ಣದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ.
2 ರುಪಾಯಿಗೆ ಒಂದು ಬುಟ್ಟಿ ಟೊಮೆಟೋ, ನೊಂದ ರೈತ ಮಾಡಿದ್ದೇನು?
ನಾಟಿ ಮಾಡುವ ವಿಧಾನ
ಕೃಷಿ ಪದವೀಧರರಾದ ಅಶೋಕ, ನಾಟಿ ಮಾಡುವ ಮುಂಚೆ ಆರು ಅಡಿ ಅಂತರದಲ್ಲಿ ಏರು ಮಡಿ ಮಾಡಿ ನಂತರ ಹನಿಕೆಗಳನ್ನು ಎಳೆದು 2 ಅಡಿ ಅಂತರದಲ್ಲಿ ತ್ರಿಕೋನಾಕೃತಿಯಲ್ಲಿ ಬೀಜ ಬಿತ್ತನೆ ಮಾಡಿರುತ್ತಾರೆ. ಬಿತ್ತನೆ ಮೊದಲು ಬೀಜೋಪಚಾರ ಮಾಡಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ 5 ಕಿಲೊ ಟ್ರೆಂಕೋಗ್ರಾಮದಿಂದ ಉಪಚರಿಸಿ ಬಿತ್ತನೆ ಮಾಡಿರುತ್ತಾರೆ. ಹೋಬಳಿ ಅಧಿಕಾರಿ ಕೃಷ್ಣಮೂರ್ತಿ ಪಾಟೀಲ್ ಮತ್ತು ವಿಷಯ ತಜ್ಞ ವಾಮನ ಮೂರ್ತಿರವರ ಮಾರ್ಗದರ್ಶನದಲ್ಲಿ ಅಲ್ಪಾವಧಿ ಬೆಳೆಯಾದ ಕಲ್ಲಂಗಡಿ ಬೆಳೆಯನ್ನು ಡಿಸೆಂಬರ್ನಲ್ಲಿ 23 ರಂದು ಖಾಸಗಿ ಕಂಪನಿಯ ಹೈಬ್ರಿಡ್ ತಳಿ ತಂದು ಬಿತ್ತನೆ ಮಾಡಿರುತ್ತಾರೆ.
ಗೊಬ್ಬರ ಬಳಸುವ ವಿಧಾನ
ಬಿತ್ತನೆ ಮಾಡಿದ 15 ನೇ ದಿನದಿಂದ ಶಿಫಾರಸ್ಸಿನಂತೆ ನೀರಿನಲ್ಲಿ ಕರಗುವ ಗೊಬ್ಬರಗಳ ಜೊತೆಗೆ ಲಘು ಪೋಷಕಾಂಶಗಳನ್ನು ನೀಡಿರುತ್ತಾರೆ. ಇದಲ್ಲದೇ ಕ್ಯಾಲ್ಸಿಯಂ ನೈಟ್ರೆಂಟ್ ಉಪಯೋಗ ಮಾಡಿರುತ್ತಾರೆ. ತಜ್ಞರ ಸಲಹೆಯಂತೆ ಎಕರೆಗೆ 10 ಹಳದಿ ಅಂಟು ಕಾರ್ಡುಗಳು ಮತ್ತು ಮೋಹಕ ಬಲೆಗಳಲ್ಲದೇ ಸೌರಶಕ್ತಿ ಚಾಲಿತ ದೀಪಾಕರ್ಷಕ ಬಲೆಗಳನ್ನು ಬಳಸಿರುತ್ತಾರೆ. ವೈಜ್ಞಾನಿಕ ರೀತಿಯಲ್ಲಿ ಆರಂಭ ಹಂತದಿಂದಲೂ ಶಿಫಾರಿತ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳ ಜೊತೆಗೆ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳಾದ ಬೇವಿನ ಎಣ್ಣೆ ಬಳಸಿ ಸಸ್ಯ ಸಂರಕ್ಷಣೆ ಮಾಡಿರುತ್ತಾರೆ.
63 ನೇ ದಿನಕ್ಕೆ ಕಟಾವು
ನಿಖರ ಬೇಸಾಯ ಪದ್ದತಿಯ ಎಲ್ಲಾ ವಿಧಾನಗಳನ್ನು ವಿಜ್ಞಾನಿಗಳ, ತಜ್ಞರ ಸಲಹೆ ಪಡೆದು ತಮ್ಮ ಸ್ವಂತಿಕೆಯನ್ನು ಉಪಯೋಗಿಸಿ ಬೆಳೆದ ಕಲ್ಲಂಗಡಿ ಬೆಳೆ ಬಿತ್ತಿದ 63 ನೇ ದಿನಕ್ಕೆ ಕಟಾವಿಗೆ ಬಂದಿದೆ. ಮೊದಲೇ ಇವರ ಬೆಳೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮುಂಬೈ ನಗರದ ಖರೀದಿದಾರರು ರೂ. 9 ಪ್ರತಿ ಕೆ.ಜಿ.ಯಂತೆ ಮೊದಲ ಕಟಾವಿನ ಸುಮಾರು 30 ಟನ್ಗಳಷ್ಟು ಹಣ್ಣುಗಳನ್ನು ಖರೀದಿಸಿದ್ದಾರೆ. ಎಕರೆ ಒಂದಕ್ಕೆ ಇವರು ಮಾಡಿರುವ ಖರ್ಚು ರೂ. 30 ಸಾವಿರಗಳು ಹಾಗೂ ಇಳುವರಿ ಸರಾಸರಿ 20 ಟನ್. ಹೀಗೆ ಉತ್ತಮ ಇಳುವರಿ ಹಾಗೂ ಆದಾಯ ಪಡೆದ ಅಶೋಕ ಮೇಟಿ ರವರ ಸಾಧನೆ ಇತರರಿಗೂ ಸ್ಪೂರ್ತಿಯಾಗಿದೆ.
1.50 ಲಕ್ಷ ರೂ. ಆದಾಯ
ಎರಡು ಸಾರಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡು ನಷ್ಟ ಅನುಭವಿಸಿದ್ದ ರೈತರು ಇಲಾಖಾ ಅಧಿಕಾರಿಗಳು ಹಾಗೂ ಇತರೆ ತಜ್ಞರು ಮಾರ್ಗದರ್ಶನದಂತೆ ಕಲ್ಲಂಗಡಿ ಬೆಳೆದು ಉತ್ತಮವಾಗಿ ಇಳುವರಿ ಪಡೆದರು. ಎಕರೆಗೆ 1.50 ಲಕ್ಷ ರೂ. ರಷ್ಟು ನಿವ್ವಳ ಆದಾಯ ಕೇವಲ 65 ದಿನಗಳಲ್ಲಿ ಪಡೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಶೋಕ ಮೇಟಿ ಮೊಬೈಲ್ ಸಂಖ್ಯೆ 9980553099 ಹಾಗೂ ವೆಂಕನಗೌಡ ಮೇಟಿ ಅವರ ಮೊಬೈಲ್ ಸಂಖ್ಯೆ 9845509277 ಗೆ ಸಂಪರ್ಕಿಸಬಹುದು.