ಕೊಪ್ಪಳ: ದಲಿತ ಬಾಲಕ ದೇವಾಲಯ ಪ್ರವೇಶಿಸಿದ್ದಕ್ಕೆ ದಂಡ
ಕೊಪ್ಪಳ, ಸೆಪ್ಟೆಂಬರ್ 21: ದಲಿತ ಸಮುದಾಯದ ಬಾಲಕ ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.
ದಲಿತ ಸಮುದಾಯದ ಮಗುವೊಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದೀಕರಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿದೆ.
ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದ್ದು ಚನ್ನದಾಸರ ಸಮುದಾಯದ ಮಗುವೊಂದು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ. ಅಂದು ಮಗುವಿನ ಜನ್ಮದಿನದ ಹಿನ್ನೆಲೆ ಮಗು ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದವರಿಗೆ ಎಚ್ಚರಿಕೆ ನೀಡಿ, ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ. ಆದರೆ ಘಟನೆ ಬಳಿಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕರಣವನ್ನು ದಾಖಲಿಸಿಕೊಳ್ಳದೇ ಸುಮ್ಮನಿರುವುದು ಸರಿಯಲ್ಲ ಎಂದು ದಲಿತ ಪರ ಸಂಘಟನೆಗಳು ಒತ್ತಾಯಿಸಿದ್ದಾರೆ.
ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್ ಆಗಿ ದೇವಾಲಯ ಪ್ರವೇಶ ಮಾಡಿದ್ದೇ ತಪ್ಪಾಯ್ತು. ಇದಕ್ಕಾಗಿ ಮಗುವಿನ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಗೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮೇಲ್ಜಾತಿಯ ಮುಖಂಡರು ಷರತ್ತು ವಿಧಿಸಿ ಅಮಾನವೀಯತೆ ಮೆರೆದಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಜಾಗೃತಿ ಸಭೆ ನಡೆಸಿದ್ದು ದಂಡ ವಿಧಿಸಿದವರಿಗೆ ಶಿಕ್ಷೆ ವಿಧಿಸುವ ಬದಲು ಕೇವಲ ತರಾಟೆಗೆ ತೆಗೆದುಕೊಂಡು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ.
ಇದನ್ನು ಖಂಡಿಸಿರುವ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಸ್ಪೃಶೃತಾ ನಿವಾರಣೆಯ ಜಾಗೃತಿ ಸಭೆ ನಡೆಸಿ, ಅಸ್ಪೃಶೃತೆ ಸಂಪೂರ್ಣವಾಗಿ ತೊಲಗಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ.
ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಪೃಶೃತೆ ಆಚರಣೆ ಮಾಡುವುದು ಅಕ್ಷಮ್ಯ ಅಪರಾಧ, ಇನ್ನು ಮುಂದೆ ಗ್ರಾಮದಲ್ಲಿ ಈ ರೀತಿ ಚಟುವಟಿಕೆ ನಡೆದರೆ ಕಾನೂನು ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಕೆ ನೀಡಿ ಭಾಷಣ ಬಿಗಿದು ಹೋಗಿದ್ದಾರೆ.
ಈ ವೇಳೆ ತಹಸೀಲ್ದಾರ್ ಎಂ.ಸಿದ್ದೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್.ಆರ್, ಪಿಎಸ್ಐಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಪಿಡಿಒ ವೆಂಕಟೇಶ ನಾಯ್ಕ್ ಇದ್ದರು.
ಬಿಜೆಪಿ ತನ್ನ ಆಡಳಿತದಲ್ಲಿ ದಲಿತ ವಿರೋಧಿ ವಾತಾವರಣ ನಿರ್ಮಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತರ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹೆತ್ತವರಿಗೆ ದಂಡ ವಿಧಿಸಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
'ದಲಿತರಿಗೆ ಮೂತ್ರ ಕುಡಿಸುವುದರಿಂದ ಹಿಡಿದು ಬಹಿಷ್ಕಾರ, ಹಲ್ಲೆಯ ಪ್ರಕರಣಗಳು ಹೆಚ್ಚುತ್ತಿವೆ. ಮನುವಾದಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರಿಗೆ ನೆಮ್ಮದಿಯ ಬದುಕಿಲ್ಲದಂತಾಗಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಕಟ್ಟಲು ಹೊರಟ ಹಿಂದೂರಾಷ್ಟ್ರದ ಅಡಿಗಲ್ಲು ಇದೇನಾ!?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
#ದಲಿತವಿರೋಧಿಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಮನುಸ್ಮೃತಿಯನ್ನು ನಂಬಿರುವ ಬಿಜೆಪಿ ತನ್ನ ಗುಪ್ತ ಅಜೆಂಡಾವಾದ ದಲಿತ ವಿರೋಧಿ ವಾತಾವರಣವನ್ನು ವ್ಯವಸ್ಥಿತವಾಗಿ
Recommended Video
ಸ್ಥಾಪಿಸುತ್ತಿರುವ ಪರಿಣಾಮದಿಂದಲೇ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ' ಎಂದು ಆರೋಪಿಸಿದೆ. 'ಕೇಸರಿ ಪಕ್ಷ ತನ್ನ ಸಂಪುಟದಲ್ಲಿ ದಲಿತರಿಗೆ ಅವಕಾಶ ನೀಡದೆ ತನಗಿರುವ ದಲಿತರ ಮೇಲಿನ ಅಸಹನೆಯನ್ನು ಬಹಿರಂಗಪಡಿಸಿದೆ' ಅಂತಾ ಕಾಂಗ್ರೆಸ್ ಕುಟುಕಿದೆ.