ಕೊಪ್ಪಳ: ಎರಡು ಗುಂಪಿನ ನಡುವೆ ಮಾರಾಮಾರಿ, ಇಬ್ಬರು ಸಾವು
ಕೊಪ್ಪಳ, ಆಗಸ್ಟ್, 11: ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ.
ಗುರುವಾರ ಎರಡು ಗುಂಪುಗಳ ಮಧ್ಯೆ ಗಲಾಟೆ ಸಂಭವಿಸಿದೆ. ಹುಲಿಹೈದರದ ನಾಯಕ ಸಮಾಜದ ಯುವಕನೊಬ್ಬ ಮುಸ್ಲಿಂ ಜನಾಂಗದ ಯುವತಿಯನ್ನು ಓಡಿಸಿಕೊಂಡು ಹೋಗಿರುವ ಮಾಹಿತಿ ಬಹಿರಂಗವಾಗಿದೆ. ಹಾಗೂ ವಾಲ್ಮೀಕಿ ಮಹರ್ಷಿಗಳ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ಗ್ರಾಮದಲ್ಲಿ ನಾಯಕ ಹಾಗೂ ಇತರ ಸಮಾಜದವರೊಂದಿಗೆ ವಿವಾದವಿದೆ.
ಈ ವಿವಾದ ಗುರುವಾರ ಭುಗಿಲೆದ್ದಿದ್ದು, ಏಕಾಏಕಿಯಾಗಿ ದೊಣ್ಣೆ, ಲಾಂಗು, ಮಚ್ಚುಗಳಿಂದ ಎರಡು ಗುಂಪಿನವರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಯಂಕಪ್ಪ ಹಾಗೂ ಪಾಷಾವಲಿ ಎಂಬುವವರು ಸಾವನ್ನಪ್ಪಿದ್ದಾರೆ.
ಇನ್ನು ಧರ್ಮರಾಜ್ ಹರಿಜನ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಕನಕಗಿರಿ ಹಾಗೂ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಕ ಸಮುದಾಯದವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮತ್ತೊಂದು ಸಮುದಾಯದ ಜನರು ಆರೋಪ ಮಾಡಿದ್ದಾರೆ.
ಅವರು ಏಕಾಏಕಿ ಬಂದು ನಮ್ಮ ನಾಯಕ ಸಮುದಾಯದ ಜನರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ನಮ್ಮ ಸಮುದಾಯದ ಯಂಕಪ್ಪ ಎಂಬುವವರು ಸಾವನ್ನಪ್ಪಿದ್ದಾರೆ. ಇದರಿಂದ ನಮಗೆ ಭಯವಾಗಿದ್ದು, ಹೇಗೆ ಬದುಕಬೇಕು ನಾವು? ಎಂದು ಜನರು ಆತಂಕ ವ್ತಕ್ತಪಡಿಸಿದರು.
ಈ ಘಟನೆಯ ನಂತರ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕೆಎಸ್ಆರ್ಪಿ ತುಕಡಿ, 70 ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ.
ಗ್ರಾಮ ಹಾಗೂ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗುರುವಾರದಿಂದ ಆಗಸ್ಟ್ 20ರವರೆಗೂ ಕಲಂ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಘಟನೆಗೆ ಕಾರಣರಾದವರನ್ನು ಮತ್ತು ಘಟನೆಯಲ್ಲಿ ಪಾಲ್ಗೊಂಡವರನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸಲಾಗಿದೆ.
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಮೃತರಿಗೆ ನ್ಯಾಯ ಸಿಗಬೇಕು ಎಂದು ಎರಡು ಕುಟುಂಬದವರು ಆಗ್ರಹಿಸಿದರು. ಗ್ರಾಮದಲ್ಲಿ ಕಲ್ಲು ತೂರಾಟ ನಡೆದಿದ್ದು, ಬೈಕ್ಗಳು ಕೂಡ ಜಖಂಗೊಂಡಿವೆ.
Recommended Video