ಕೊಪ್ಪಳ: ವಯಸ್ಸಾದ ತಾಯಿಯನ್ನು ದೇವಸ್ಥಾನದಲ್ಲೇ ಬಿಟ್ಟು ಪರಾರಿಯಾದ ಮಗ
ಕೊಪ್ಪಳ, ಆಗಸ್ಟ್, 04: ದುರುಳ ಮಗನೊಬ್ಬ ಕಾಸಿಂಬಿ ಎಂಬ ವಯಸ್ಸಾದ ತಾಯಿಯನ್ನು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ. ಪೋಷಕರು ಮಕ್ಕಳನ್ನು ಎಷ್ಟೇ ಕಷ್ಟ ಬಂದರೂ ಕೈ ಬಿಡುವುದಿಲ್ಲ. ಇಂತದರಲ್ಲಿ ನೀಚ ಮಗನೊಬ್ಬ ತಾಯಿಯನ್ನು ಬೀದಿ ಪಾಲು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ತಮಗೆ ಎಂತಹದ್ದೆ ಕಷ್ಟವಿದ್ದರೂ ತಂದೆ ತಾಯಿ ತಮ್ಮ ಮಕ್ಕಳನ್ನು ಯಾವುದೇ ತೊಂದರೆಯಾಗದಂತೆ ಸಾಕಿ ಸಲುವುತ್ತಾರೆ. ಆದರೆ ಕೆಲ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಂದೆ, ತಾಯಿಯನ್ನು ಪೋಷಿಸದೆ ಬೀದಿಗೆ ಬಿಡುತ್ತಿದ್ದಾರೆ. ಇಂತಹದ್ದೆ ಒಂದು ಘಟನೆ ಕೊಪ್ಪಳದಲ್ಲಿ ನಡೆದಿದೆ. ಮಗನೊಬ್ಬ ಅಂದಾಜು 80 ರಿಂದ 85 ವರ್ಷ ವಯಸ್ಸಾಗಿರುವ ತನ್ನ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ.
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಗನೊಬ್ಬ ತನ್ನ ವಯಸ್ಸಾದ ತಾಯಿಯನ್ನು ಬಿಟ್ಟು ಹೋಗಿದ್ದಾನೆ. ಆ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಉಜ್ಜಯಿನಿ ಗ್ರಾಮದವರು ಎಂದು ಗುರುತಿಸಲಾಗಿದ್ದು, ವೃದ್ಧೆಯ ಹೆಸರು ಕಾಸಿಂಬಿ ಎಂದು ತಿಳಿದು ಬಂದಿದೆ. ಕಾಸಿಂಬಿಯನ್ನು ಆಕೆಯ ಮಗ ಎರಡು ದಿನದ ಹಿಂದೆ ತಮ್ಮೂರಿನಿಂದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾನೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.
ಮಗ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗುವಾಗ ಅವರ ಕೈಯಲ್ಲಿ ಕಾಲಿ ಡಬ್ಬಿಯಂತಹ ಮೊಬೈಲ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ತನ್ನ ನಂಬರ್ ಇದೆ ಎಂದು ಖಾಲಿ ಹಾಳೆಯನ್ನು ವೃದ್ಧೆ ಕೈಯಲ್ಲಿಟ್ಟು ಯಾಮಾರಿಸಿದ್ದಾನೆ. ನಾನು ಇಲ್ಲೇ ಹೋಗಿ ಬರುತ್ತೇನೆ ಇಲ್ಲಿಯೇ ಇರು ಎಂದು ಹೇಳಿಹೋದ ಆ ವ್ಯಕ್ತಿ ವಾಪಾಸ್ ಬರಲೇ ಇಲ್ಲ. ವೃದ್ಧೆ ತನ್ನ ಮಗ ಆಗ ಬರುತ್ತಾನೆ.. ಈಗ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದ್ದಾರೆ. ಆದರೆ ಸಂಜೆ ಆದರೂ ಹೋದ ಮಗ ಹಿಂತಿರುಗಿ ಬರಲೇ ಇಲ್ಲ ಎಂದು ತಾಯಿ ಕಣ್ಣೀರಿಟ್ಟಿದ್ದಾಳೆ.
ದೇವಸ್ಥಾನದ ಬಳಿ ಒಬ್ಬೊಂಟಿಯಾಗಿ ಕುಳಿತು ಅಳುತ್ತಿದ್ದ ವೃದ್ಧೆಯನ್ನು ಗಮನಿಸಿದ ಸ್ಥಳೀಯರು ಅವರನ್ನು ವಿಚಾರಿಸಿದ್ದಾರೆ. ಅವರಿಗೆ ಊಟ, ಆಶ್ರಯ ಪಡೆಯಲು ರಗ್ಗು ನೀಡಿದ್ದಾರೆ. ಬಳಿಕ ಅಲ್ಲಿದ್ದ ಸ್ಥಳೀಯರು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಿಬ್ಬಂದಿ ವೃದ್ಧೆಯನ್ನು ಕೊಪ್ಪಳ ನಗರದ ಹೂವಿನಾಳ ರಸ್ತೆಯಲ್ಲಿರುವ ಸುರಭಿ ವೃದ್ಧಾಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿದ್ದಾರೆ.
ಅಜ್ಜಿಗೆ ತುಂಬಾ ವಯಸ್ಸಾಗಿದ್ದು, ಅವರು ಭಿನ್ನ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಜ್ಜಿಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಅವರ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕಷ್ಟಪಟ್ಟು ಮಕ್ಕಳನ್ನು ಪಾಲನೆ ಮಾಡಿ ಅವರ ಅಭಿವೃದ್ದಿಯಲ್ಲಿಯೇ ತಂದೆ, ತಾಯಿ ಸಂತೋಷ ಪಡುತ್ತಾರೆ. ಆದರೆ ಪೋಷಕರು ವೃದ್ಧರಾಗುತ್ತಿದ್ದಂತೆ ಅವರನ್ನು ಮಕ್ಕಳು ಬೀದಿಗೆ ತಂದು ನಿಲ್ಲಿಸಿಬಿಡುತ್ತಾರೆ ಎನ್ನುವುದು ದುರಂತದ ಸಂಗತಿಯಾಗಿದೆ.