ಸೋಮಣ್ಣ ಯಾವ ಆರ್ಥಿಕ ತಜ್ಞಾರಿ? ಸಿದ್ದರಾಮಯ್ಯ ಸಿಡಿಮಿಡಿ.!
ಕೊಪ್ಪಳ, ಜೂನ್ 3: ''ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಾಳು ಮಾಡಿದ್ದರು'' ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದರು. ವಿ.ಸೋಮಣ್ಣ ರವರ ಈ ಮಾತಿಗೆ ಇಂದು ಕೊಪ್ಪಳದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
''ವಸತಿ ಸಚಿವ ಸೋಮಣ್ಣ ಅವರಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಅಜ್ಞಾನವಿದೆ. ನಮ್ಮ ಕಾಲದಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿತ್ತು. ಸೋಮಣ್ಣ ರಾಜಕೀಯಕ್ಕಾಗಿ ಏನೇನೋ ಮಾತಾಡ್ತಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞಾರಿ?'' ಎನ್ನುವ ಮೂಲಕ ವಿ.ಸೋಮಣ್ಣ ವಿರುದ್ದ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಸಿದ್ಧರಾಮಯ್ಯ ಆಡಿದ ಮಾತಿನ 'ಒಳಮರ್ಮ'ವೇನು.?
''ರಾಜ್ಯದ ಆರ್ಥಿಕ ಸ್ಥಿತಿ ಈಗ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇದು ಕರ್ನಾಟಕದ ಕಥೆ ಮಾತ್ರವಲ್ಲ, ಇಡೀ ದೇಶದ ಸ್ಥಿತಿಯೇ ಹೀಗಾಗಿದೆ. ಕೊರೊನಾ ವೈರಸ್ ಬರುವುದಕ್ಕಿಂತ ಮುಂಚಿನಿಂದಲೂ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಸೋಮಣ್ಣನವರಿಗೆ ಸಂಸ್ಕೃತಿ ಇಲ್ಲ. ಬಿಜೆಪಿಯವರ ಹಾಗೆ ನಾನು ಕೀಳುಮಟ್ಟಕ್ಜೆ ಇಳಿಯಲ್ಲ'' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇದೇ ವೇಳೆ, ''ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅತ್ಯುತ್ತಮ ಬಾಂಧವ್ಯ, ಸಂಬಂಧ ಇದೆ. ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.