ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆ ರದ್ದು
ಕೊಪ್ಪಳ, ಡಿಸೆಂಬರ್ 19: ಕೊಪ್ಪಳದ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವು ಈ ಬಾರಿ ರದ್ದಾಗಿದ್ದು, ದೇಗುಲದ ಆವರಣಕ್ಕೆ ಸೀಮಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದೇ ಕರೆಸಿಕೊಳ್ಳುತ್ತಿದ್ದ ಈ ಜಾತ್ರೆಯಲ್ಲಿ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಿದ್ದರು. ಆದರೆ ಕೊರೊನಾ ಸೋಂಕಿನ ಕಾರಣವಾಗಿ ಈ ಬಾರಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಲಕ್ಷಾಂತರ ಜನರ ಸಮಾಗಮದಲ್ಲಿ ನಾಳೆಯಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ
ಜನವರಿ 30ರಂದು ಜಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಜಾತ್ರೆಗೆ ಅನುಮತಿ ನೀಡುವಂತೆ ಮಠ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಕೊರೊನಾ ಕಾರಣವಾಗಿ ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುಮಾರು ಮೂರು ವಾರಗಳ ಕಾಲ ನಡೆಯುತ್ತಿದ್ದ ಈ ಜಾತ್ರೆಯಲ್ಲಿ ದಾಸೋಹ ನಡೆಯುತ್ತಿತ್ತು. "ಅನ್ನದ ಜಾತ್ರೆ" ಎಂದೂ ಕರೆಯಲಾಗುತ್ತಿತ್ತು. ವಿಶೇಷ ದಾಸೋಹಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ದವಸ ಧಾನ್ಯಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ಜಾತ್ರೆ ರದ್ದಾಗಿರುವುದು ಭಕ್ತರಲ್ಲಿ ನಿರಾಸೆ ಉಂಟು ಮಾಡಿದೆ.
ಜಾತ್ರೆ ರದ್ದಾಗಿರುವ ಕುರಿತು ಮಠದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಜಾತ್ರೆ ನಡೆಸುವಂತೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದಷ್ಟೇ ತಿಳಿದುಬಂದಿದೆ.
ಕೊಪ್ಪಳದಲ್ಲಿ ಕೊರೊನಾ ಪ್ರಕರಣ; ಕೊಪ್ಪಳ ಜಿಲ್ಲೆಯಲ್ಲಿ ಡಿ.19ರ ವರದಿಯಂತೆ ಒಟ್ಟು 13803 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 13439 ಮಂದಿ ಬಿಡುಗಡೆಯಾಗಿದ್ದಾರೆ. 85 ಸಕ್ರಿಯ ಪ್ರಕರಣಗಳಿದ್ದು, 279 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.