ಫೋಟೋಗ್ರಾಫಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗಂಗಾವತಿ ಇಂಜಿನೀಯರ್
ಕೊಪ್ಪಳ, ಜೂನ್ 25: ಕೊಪ್ಪಳ ಜಿಲ್ಲೆ ಗಂಗಾವತಿಯ ಹವ್ಯಾಸಿ ಛಾಯಾಚಿತ್ರಕಾರ ಶ್ರೀನಿವಾಸ್ ಎಣ್ಣಿ ಅವರಿಗೆ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದರೂ ಕೂಡ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಒಂದು ಫೋಟೋ ಸಾವಿರ ಪದಗಳಿಗೆ ಸಮವಾಗಿರುತ್ತದೆ ಎನ್ನುತ್ತಾರೆ. ಫೋಟೋದಲ್ಲಿನ ಭಾವ ನೂರಾರು ಕಥೆ ಹೇಳುತ್ತದೆ. ಇದರಿಂದಾಗಿ ಫೋಟೋಗ್ರಾಫರ್ಗಳು ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ವಿಶ್ವದಲ್ಲಿ ಹಲವರು ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಹವ್ಯಾಸಕ್ಕಾಗಿ ಫೋಟೋಗ್ರಾಫಿ ಮಾಡುವ ಕೊಪ್ಪಳದ ಇಂಜನೀಯರ್ ಕೆಲವೇ ದಿನಗಳಲ್ಲಿ ನೂರಾರು ಪದಕ ಗಳಿಸಿದ್ದು, ಇದರಲ್ಲಿ ತಿಂಗಳ ಹಿಂದೆ ಅಂತರಾಷ್ಟ್ರೀಯ ಚಿನ್ನದ ಪದಕ ಪಡೆದಿದ್ದಾರೆ.
ಬಿಡುವಿನ ವೇಳೆ ಫೋಟೋಗ್ರಾಫಿ ಹವ್ಯಾಸ
ಮೂಲತಃ ಕೊಪ್ಪಳದ ಗಂಗಾವತಿಯವರಾಗಿರುವ ಶ್ರೀನಿವಾಸ್ ಎಣ್ಣಿ, ಓದಿದ್ದು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್. ಗಂಗಾವತಿಯಲ್ಲಿ ಕೆಪಿಟಿಸಿಎನ್ನಲ್ಲಿ ಟ್ರಾನ್ಸಮಿಷನ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ, ಓದಿನ ಜೊತೆ ಫೋಟೋಗ್ರಾಫಿಯನ್ನು ಇಷ್ಟಪಟ್ಟಿದ್ದಾರೆ. ದೇಶ, ವಿದೇಶದ ಫೋಟೊಗ್ರಾಫರ್ಗಳ ಬಗ್ಗೆ ಮಾಹಿತಿ ಪಡೆದಿರುವ ಶ್ರೀನಿವಾಸ್ ಅವರಂತೆ ತಾನು ಫೋಟೋಗಳನ್ನು ತೆಗೆಯಬೇಕೆನ್ನುವ ತುಡಿತ ಹೊಂದಿದ್ದರು. ಅದಕ್ಕಾಗಿ ಒಂದು ಕ್ಯಾಮೆರಾ ಖರೀದಿಸಿ, ಪ್ರಕೃತಿಯಲ್ಲಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ಅವರ ರಸ್ತೆಯಲ್ಲಿ ಹೋಗುವಾಗ ನೋಡಿರುವ ದೃಷ್ಠಿಕೋನ, ಸಭೆ ಸಮಾರಂಭಗಳು, ಉತ್ಸವಗಳಲ್ಲಿ ಕಂಡಿರುವ ದೃಶ್ಯಗಳನ್ನು ತಾಳ್ಮೆಯಿಂದ ಕ್ಲಿಕ್ ಮಾಡಿದ್ದಾರೆ. ನಿತ್ಯ ಸರ್ಕಾರಿ ವೃತ್ತಿ ಕಚೇರಿಯ ನಂತರ ಬಿಡುವಿನ ವೇಳೆಯನ್ನು ಅವರ ಫೋಟೋಗ್ರಾಫಿ ಹವ್ಯಾಸಕ್ಕಾಗಿ ಬಳಸಿಕೊಂಡಿರುವುದು ವಿಶೇಷ.
ಎಲ್ಲಿಯೇ ಉತ್ಸವ ನಡೆದರೂ ಹೋಗುತ್ತಾರೆ
ಕಳೆದ ಆರು ವರ್ಷಗಳ ಹಿಂದೆಯೇ ರಘು ರಾಯ್, ರಘುಬೀರಸಿಂಗ್, ಅಶೋಕ ಸರವಣಂ ಫೋಟೋಗ್ರಾಫಿಯಿಂದ ಉತ್ತೇಜನಗೊಂಡ ಶ್ರೀನಿವಾಸ್, ಫೋಟೋಗಳನ್ನು ತೆಗೆಯುವ ಹವ್ಯಾಸ ಬಳಸಿಕೊಂಡಿದ್ದಾರೆ. ರಾಜ್ಯದಲ್ಲಿ ಎಲ್ಲಿಯಾದರೂ ಉತ್ಸವಗಳು ನಡೆದರೆ ಅಲ್ಲಿ ಹೋಗಿ ತಮ್ಮ ಕಲ್ಪನೆಗೆ ತಕ್ಕಂತೆ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.
48 ದೇಶಗಳ 450ಕ್ಕೂ ಹೆಚ್ಚು ಫೋಟೋಗ್ರಾಫರ್ಗಳು
ಕಳೆದ ಎರಡು ತಿಂಗಳ ಹಿಂದೆ ಭಾರತ, ಗಲ್ಫ್ ಸಮೂಹ, ಬಹ್ರೈನ್, ಸೌದಿ ಅರೇಬಿಯಾ, ಕುವೈತ್ ರಾಷ್ಟ್ರಗಳ ಫೋಟೋಗ್ರಾಫಿ ಸೊಸೈಟಿಯಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ 48 ದೇಶಗಳ 450ಕ್ಕೂ ಹೆಚ್ಚು ಫೋಟೋಗ್ರಾಫರ್ಗಳು ಭಾಗವಹಿಸಿದ್ದರು. ಅದರಲ್ಲಿ ಶ್ರೀನಿವಾಸ್ ಎಣ್ಣಿಯವರ ಟ್ರಾವೆಲ್ ವಿಭಾಗದಲ್ಲಿ ನಾಲ್ಕು ಫೋಟೋಗಳಿಗೆ ಪ್ರಶಸ್ತಿ ಬಂದಿದ್ದು, ಚಿನ್ನದ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಫೋಟೋಗ್ರಾಫರ್ಗಳಾದ ಓಲಾ ಅಲ್ಡೌಜ್, ಶಫೀಕ್ ಅಲ್ ಶಫೀಕ್, ಅಮ್ಮರ್ ಅಲಾವರ್, ನಜೌತ್ ಪರ್ಸಾನ ತೀರ್ಪುಗಾರರಾಗಿದ್ದರು.
ಶ್ರೀನಿವಾಸ್ ಎಣ್ಣಿ ನೋಡುವ ದೃಷ್ಠಿಕೋನವೇ ವಿಭಿನ್ನ
ಶ್ರೀನಿವಾಸ್ ಆರು ವರ್ಷಗಳಲ್ಲಿ ದೇಶ- ವಿದೇಶಗಳಲ್ಲಿ ಫೋಟೋಗಳನ್ನು ಸ್ಪರ್ಧೆಗಾಗಿ ಕಳುಹಿಸಿದ್ದು, ಈಗಾಗಲೇ 100ಕ್ಕೂ ಅಧಿಕ ಪದಕ, ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ. ನಾಡಿನ ಬಹುತೇಕ ಡಿಜಿಟಲ್ ವಿಭಾಗದಲ್ಲಿ ಸಾಕಷ್ಟು ಫೋಟೋಗಳು ಪ್ರಕಟವಾಗಿವೆ. ದೇಶದ ವಿವಿಧ ಫೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರು ಕೂಡಾ ಆಗಿದ್ದಾರೆ.
ಪರಿಸರ, ಜನರ ಬದುಕು, ಉತ್ಸವ, ಸಭೆ ಸಮಾರಂಭಗಳನ್ನು ಎಲ್ಲರೂ ನೋಡುವ ದೃಷ್ಠಿಕೋನ ಒಂದಾದರೆ, ಶ್ರೀನಿವಾಸ್ ಎಣ್ಣಿ ನೋಡುವ ದೃಷ್ಠಿಕೋನವೇ ವಿಭಿನ್ನ. ಅವರ ಸಾವಿರಾರು ಸುಂದರ ಫೋಟೋಗಳನ್ನು ಇನ್ನಷ್ಟು ಕ್ಲಿಕ್ಕಿಸಿ ಇನ್ನಷ್ಟು ಜನ ಮನ್ನಣೆ ಸಿಗಲಿ ಎಂಬುವುದು ಅವರ ಹಿತೈಷಿಗಳ ಆಶಯವಾಗಿದೆ.