ಮಕ್ಕಳು ಶಾಲೆಗೆ ಹೋಗಲಿಲ್ಲಾಂದ್ರೆ, ಇನ್ಯಾವುದೋ ಚಟ ಕಲೀತಾರೆ: ಸಿದ್ದರಾಮಯ್ಯ
ಕೊಪ್ಪಳ, ಜೂನ್ 3: ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಿಸಿದಾಗ, ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ, ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಐದನೇ ಹಂತದ ಲಾಕ್ ಡೌನ್ ಮುಂದುವರೆಯುತ್ತಿದ್ದು, ಉಳಿದ ಕಡೆ ನಿಯಮಗಳು ಸಡಿಲಗೊಂಡಿವೆ.
ಜುಲೈ ತಿಂಗಳಿನಿಂದ ಶಾಲೆಗಳನ್ನು ಪುನರಾರಂಭ ಮಾಡುವ ಬಗ್ಗೆ ಕರ್ನಾಟಕದಲ್ಲಿ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಜೂನ್ 10 ರಿಂದ 12 ರವರೆಗೂ ಕರ್ನಾಟಕ ಶಿಕ್ಷಣ ಇಲಾಖೆ ಪೋಷಕರ ಜೊತೆ ಸಭೆ ನಡೆಸಲಿದೆ.
ಶಾಲೆ ತೆರೆಯವ ವಿಚಾರ; ಜೂ.10ರಿಂದ ಪೋಷಕರ ಸಭೆ
ಶಾಲೆ ತೆರೆಯುವ ಬಗ್ಗೆ ಕರ್ನಾಟಕ ಸರ್ಕಾರ ಇನ್ನೂ ಖಚಿತ ನಿರ್ಧಾರ ಕೈಗೊಂಡಿಲ್ಲ. ಆದರೆ, ''ಇನ್ನೂ ಎರಡು ತಿಂಗಳ ಬಳಿಕವಷ್ಟೇ ಶಾಲೆಗಳನ್ನು ಪ್ರಾರಂಭ ಮಾಡಿ. ಶಾಲೆಗಳನ್ನು ತೆರೆಯಲೇ ಬೇಕು. ಇಲ್ಲಾಂದ್ರೆ, ಮಕ್ಕಳು ಇನ್ಯಾವುದೋ ಚಟ ಕಲಿತು ಬಿಡ್ತಾರೆ'' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ''ಎರಡು ತಿಂಗಳು ಕಳೆದ ಬಳಿಕ ಶಾಲೆಗಳನ್ನು ಪ್ರಾರಂಭ ಮಾಡಬೇಕು. ಸುರಕ್ಷತಾ ಕ್ರಮಗಳ ಕುರಿತು ಸಕಲ ಸಿದ್ಧತೆ ಮಾಡಿಕೊಂಡ ಬಳಿಕವಷ್ಟೇ ಶಾಲೆಗಳನ್ನು ಪ್ರಾರಂಭಿಸಬೇಕು. ಇರುವ ವಿದ್ಯಾರ್ಥಿಗಳನ್ನೇ ದೂರ ದೂರ ಕೂರಿಸಿ, ಬೆಳಗ್ಗೆ ಒಂದು ಸೆಷನ್, ಮಧ್ಯಾಹ್ನ ಇನ್ನೊಂದು ಸೆಷನ್ ರೀತಿ ತರಗತಿ ನಡೆಸಬೇಕು'' ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಜೊತೆಗೆ, ''ಶಾಲೆಗಳನ್ನು ನಡೆಸಲೇಬೇಕು. ಒಂದು ವರ್ಷ ಶಾಲೆಗೆ ಹೋಗಲಿಲ್ಲ ಅಂದ್ರೆ, ಮಕ್ಕಳು ಇನ್ಯಾವುದೋ ಚಟ ಕಲಿಯುತ್ತಾರೆ. ಶಾಲೆಗೆ ಹೋಗಲಿಲ್ಲ ಅಂದರೆ ಮಕ್ಕಳು ಸುಮ್ಮನೆ ಇರ್ತಾರಾ.? ಶಾಲೆ ಡಿಸ್ ಕನ್ಟಿನ್ಯೂ ಆದ್ಮೇಲೆ ನಾನು ಓತಿಕ್ಯಾತ ಹೊಡೆಯೋಕೆ ಹೋಗುತ್ತಿದ್ದೆ'' ಅಂತ್ಹೇಳಿ ಸಿದ್ಧರಾಮಯ್ಯ ನಕ್ಕರು.
''ಜುಲೈ ತಿಂಗಳಿನಿಂದಲೇ ಶಾಲೆ ಓಪನ್ ಮಾಡಬೇಕು ಅಂತ ನಿಯಮ ಏನೂ ಇಲ್ಲ. ಆನ್ ಲೈನ್ ಶಿಕ್ಷಣ ಅಷ್ಟೊಂದು ಯಶಸ್ವಿ ಆಗಿಲ್ಲ. ಬೇರೆ ದಾರಿಯೇ ಇಲ್ಲದಾಗ.. ಅದನ್ನೇ ಮುಂದುವರೆಸಬೇಕಾಗುತ್ತದೆ'' ಎಂದರು ಸಿದ್ದರಾಮಯ್ಯ.