ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ: ಅಶೋಕ
ಕೊಪ್ಪಳ, ಸೆ. 17: ಇಲ್ಲಿನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ ಅವರು ಪಿಂಚಣಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರದಿಂದ ಜಾರಿಗೆ ಬರಲಿರುವ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಅಲ್ಲದೆ ಬೆಳೆ ಪರಿಹಾರ, ಪಿಂಚಣಿ ಸೌಲಭ್ಯ, ಸ್ಮಶಾನ ಭೂಮಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಿಸಿದ ಎಲ್ಲಾ ಬಾಕಿ ಉಳಿದ ಕೆಲಸಗಳು ಇನ್ನು ಎರಡು ವಾರಗಳೊಳಗೆ ಪೂರ್ಣಗೊಳ್ಳಬೇಕು ಮತ್ತು ಆ ಕುರಿತು ಜಿಲ್ಲಾ ಮಂತ್ರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಜಿ ಹಾಕದಿದ್ದರೂ ಕೈಸೇರಲಿದೆ ಪಿಂಚಣಿ; ಆರ್ ಅಶೋಕ್
ಸಾಮಾಜಿಕ ಭದ್ರತೆ ಯೋಜನೆಯಡಿ ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ ಮುಂತಾದವುಗಳನ್ನು ಪ್ರಸ್ತುತ ಬ್ಯಾಂಕ್ ಮತ್ತು ಪೋಸ್ಟ್ ಆಫೀಸುಗಳಿಂದ ಪಾವತಿ ಮಾಡಲಾಗುತ್ತಿದೆ. ಆದರೆ ಪೋಸ್ಟ್ ಆಫೀಸುಗಳಿಂದ ಪಾವತಿಯಾಗುತ್ತಿರುವ ಪಿಂಚಣಿಯು ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದರಲ್ಲಿ ಅನರ್ಹರೂ ಪಿಂಚಣಿ ಪಡೆಯುತ್ತಿದ್ದಾರೆ.
ಪೋಸ್ಟ್ಮೆನ್ ಕುರಿತು ಅನೇಕ ದೂರುಗಳು
ಪಿಂಚಣಿ ತಲುಪಿಸುವ ಪೋಸ್ಟ್ಮೆನ್ ಕುರಿತು ಅನೇಕ ದೂರುಗಳು ಬಂದಿವೆ. ಇವುಗಳನ್ನು ಪರಿಗಣಿಸಿ ಇನ್ನುಮುಂದೆ ಯಾವುದೇ ಪೋಸ್ಟ್ ಆಫೀಸುಗಳಿಂದ ಪಿಂಚಣಿ ಪಾವತಿಗೆ ಅವಕಾಶ ನೀಡದೆ, ಪಿಂಚಣಿ ಪಡೆಯುವ ಪ್ರತಿಯೊಬ್ಬ ಫಲಾನುಭವಿಯೂ ಹತ್ತಿರದ ಬ್ಯಾಂಕ್ನಲ್ಲಿ ಖಾತೆ ತೆಗೆಯಬೇಕು. ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಫಲಾನುಭವಿಗಳು ಬ್ಯಾಂಕ್ನಿAದ ಹಣ ಸೆಳೆದುಕೊಳ್ಳಬಹುದು ಎಂದರು.
ಸರ್ಕಾರದಿಂದ ಹೊಸ ಯೋಜನೆ
ಪಿಂಚಣಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರದಿಂದ ಹೊಸ ಯೋಜನೆ ರೂಪಿಸುತ್ತಿದ್ದು, ಬಳ್ಳಾರಿ ಹಾಗೂ ಉಡುಪಿಯಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ವೃದ್ಧರು ಪಿಂಚಣಿಗಾಗಿ ಅರ್ಜಿಯನ್ನು ಸಲ್ಲಿಸುವಂತಿಲ್ಲ. ವೃದ್ದಾಪ್ಯ ಪಿಂಚಣಿ ಪಡೆಯುವ ಫಲಾನುಭವಿಯ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿ ನಮೂದಿಸಿರುವ ವಯಸ್ಸಿನ ಆಧಾರದಲ್ಲಿ ಫಲಾನುಭವಿಯನ್ನು ತಹಶೀಲ್ದಾರ ಕಚೇರಿಯಿಂದ ನೇರವಾಗಿ ಸಂಪರ್ಕಿಸಿ ಅವರಿಗೆ ಪಿಂಚಣಿಯನ್ನು ತಲುಪಿಸಬೇಕು. ಹಾಗೂ ಪಿಂಚಣಿಯು ಬ್ಯಾಂಕ್ ಖಾತೆ ಮೂಲಕ ಪಾವತಿಯಾಗಬೇಕು.
ಖಾತೆಯು ತನ್ನಿಂದ ತಾನೇ ನಿಷ್ಕ್ರಿಯಗೊಳ್ಳುತ್ತದೆ
ಒಂದು ವೇಳೆ ಸತತ ಆರು ತಿಂಗಳು ಆ ಖಾತೆಯಿಂದ ಯಾವುದೇ ಹಣದ ಸೆಳೆಯುವಿಕೆ ಪ್ರಕ್ರಿಯೆ ನಡೆಯದಿದ್ದರೆ ಖಾತೆಯು ತನ್ನಿಂದ ತಾನೇ ನಿಷ್ಕ್ರಿಯಗೊಳ್ಳುತ್ತದೆ. ಆ ಕುರಿತ ಸಂದೇಶ ಕಂದಾಯ ಇಲಾಖೆಗೆ ತಲುಪುತ್ತದೆ. ತಾಂತ್ರಿಕ ಕಾರಣಗಳಿದ್ದಲ್ಲಿ ಮತ್ತೆ ಖಾತೆಯನ್ನು ಚಾಲ್ತಿಗೊಳಿಸಲಾಗುತ್ತದೆ. ಒಂದು ವೇಳೆ ಪಿಂಚಣಿ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಪಿಂಚಣಿ ಪಾವತಿ ಸ್ಥಗಿತಗೊಳ್ಳುತ್ತದೆ.
Recommended Video
ಇನ್ನೊಬ್ಬ ಅರ್ಹ ಫಲಾನುಭವಿಗೆ ತಲುಪಿಸಬಹುದು
ಈ ಯೋಜನೆಯಿಂದ ಮರಣ ನಂತರವೂ ಫಲಾನುಭವಿಯ ಹೆಸರಿನಲ್ಲಿ ಪಿಂಚಣಿ ಪಾವತಿಯಾಗುವುದನ್ನು ತಪ್ಪಿಸಿ ಅದನ್ನು ಇನ್ನೊಬ್ಬ ಅರ್ಹ ಫಲಾನುಭವಿಗೆ ತಲುಪಿಸಬಹುದು ಎಂದು ಅವರು ಹೊಸ ಯೋಜನೆಯನ್ನು ಜಾರಿಗೊಳಿಸುವ ಕುರಿತು ಕಂದಾಯ ಸಚಿವ ಆರ್ ಅಶೋಕ ಅವರು ಮಾಹಿತಿ ನೀಡಿದರು.
ಈ ಯೋಜನೆಯಡಿಯಲ್ಲಿ ಈಗಾಗಲೇ ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುಮಾರು 10 ಸಾವಿರ ಮಂದಿಗೆ ನೀಡಿದ್ದು, ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.