ಕೊಪ್ಪಳ: ಸರ್ಕಾರಿ ಪ್ರೌಢಶಾಲೆಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಪವರ್ ಸ್ಟಾರ್
ಕೊಪ್ಪಳ, ಅಕ್ಟೋಬರ್ 29: ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ಹಾಗೂ ಜೇಮ್ಸ್ ಚಿತ್ರತಂಡ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಸರ್ಕಾರಿ ಶಾಲೆಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.
ಈ ಕುರಿತು ಧನ್ಯವಾದ ತಿಳಿಸಿರುವ ಮಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ""ಕನ್ನಡದ ವರನಟ ಡಾ.ರಾಜಕುಮಾರ್ ಅವರ ಸುಪುತ್ರರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಜೇಮ್ಸ್ ಚಿತ್ರತಂಡವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ನಮ್ಮ ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹವನ್ನು ನೀಡುವ ಉದೇಶದಿಂದ 1 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡಿರುತ್ತಾರೆ.
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಪಿಯುಸಿ ಪಾಸಾದವರು ಅರ್ಜಿ ಹಾಕಿ
ಈ ಕಾರಣ ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಗ್ರಾಮದವರು ತಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ತಮ್ಮ ಅಭಿನಯದ ಜೇಮ್ಸ್ ಚಿತ್ರತಂಡಕ್ಕೆ ಯಶಸ್ಸು ಸಿಗಲೆಂದು ಶುಭ ಕೋರುತ್ತೇವೆ'' ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಕೊಪ್ಪಳದಲ್ಲಿ ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ತಿಳಿದ ಪೊಲೀಸರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದ್ದರು.
ಸಿನಿಮಾ ಶೂಟಿಂಗ್ ಮಧ್ಯೆ ಇದು ಕೂಡ ನನ್ನ ಕರ್ತವ್ಯ ಎಂದು ಅಷ್ಟೇ ಖುಷಿಯಿಂದ ಅಪ್ಪು ಕಾರ್ಯಕ್ರಮದಲ್ಲಿ ಹಾಜರಾಗಿ ಜನರಿಗೆ ಕೊರೊನಾ ಬಗ್ಗೆ ತಿಳಿ ಹೇಳಿದ್ದರು. ಕೊರೊನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು.
ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ನಟ ಪುನೀತ್ ರಾಜಕುಮಾರ್, ಕೊರೊನಾ ಲಾಕ್ ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.