ಕೊಪ್ಪಳ: ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಮನಸೋಇಚ್ಛೆ ಥಳಿಸಿದ ಪಿಎಸ್ಐ
Recommended Video
ಕೊಪ್ಪಳ, ಜನವರಿ 05: ಸಿಗ್ನಲ್ ಜಂಪ್ ಮಾಡಿದರು ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ಪಿಎಸ್ಐ ಒಬ್ಬರು ಮನಸೋಇಚ್ಛೆ ಥಳಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗವಿಮಠ ಜಾತ್ರೆಗೆಂದು ಕೊಪ್ಪಳಕ್ಕೆ ಆಗಮಿಸಿದ್ದ ಇಬ್ಬರು ಯುವಕರು ಆತುರದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾರೆ, ಅಲ್ಲೇ ಇದ್ದ ಪೊಲೀಸರು ಯುವಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಮೇಲೆ ದೌರ್ಜನ್ಯ ನಡೆಸಿರುವ ಪ್ರಬೋಷೆನರಿ ಪಿಎಸ್ಐ ಒಬ್ಬರು ಯುವಕರನ್ನು ಮನಸೋ ಇಚ್ಛೆ ಥಳಿಸಿದ್ದಾರೆ.
ಪಿಎಸ್ಐ ಅವರು ಯುವಕರನ್ನು ಹೊಡೆಯುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಡೆಯಿಂದ ಪಿಎಸ್ಐ ಗೂಂಡಾ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಜಾತ್ರೆಯ ಬಂದೋಬಸ್ತ್ಗೆಂದು ಬೇರೆಡೆಯಿಂದ ಆಗಮಿಸಿದ್ದ ಪ್ರಬೋಷೆನರಿ ಪಿಎಸ್ಐ ಈ ಕೃತ್ಯ ಮಾಡಿದ್ದು, ಆತನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಜಾತ್ರೆಯಲ್ಲಿಯೂ ಟ್ರಾಫಿಕ್, ಪ್ರಸಾದ ಕೌಟಂರ್, ದೇವಸ್ಥಾನಗಳ ಬಳಿ ಭಕ್ತಾದಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ವರದಿಯಾಗಿದೆ.