ಭಾರತಮಾಲಾ ಯೋಜನೆಯಡಿ ಕೊಪ್ಪಳದಲ್ಲಿ ಬೈ-ಪಾಸ್ ನಿರ್ಮಾಣ
ಕೊಪ್ಪಳ, ಜೂನ್ 27 : 'ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್ಹೆಚ್ 50 ಹಾಗೂ ಎನ್ಹೆಚ್ 63 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ ಬೈಪಾಸ್ ರಸ್ತೆಯು ದೂರದೃಷ್ಟಿ ಯೋಜನೆಯಾಗಿದೆ' ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹೇಳಿದರು.
ಕೊಪ್ಪಳದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೊಪ್ಪಳ-ಇರಕಲ್ಲಗಡ-ಮೆತಗಲ್ ಬೈಪಾಸ್ ರಸ್ತೆ ಯೋಜನೆಯ ಡಿಪಿಆರ್ ತಯಾರಿಕೆ ಕುರಿತಂತೆ ಸಭೆ ನಡೆಯಿತು.
ಶಿರಾಡಿ ಘಾಟ್ ರಸ್ತೆ ಜುಲೈ 15ಕ್ಕೆ ವಾಹನಗಳಿಗೆ ಮುಕ್ತವಾಗಲ್ಲ?
ಸಭೆಯಲ್ಲಿ ಮಾತನಾಡಿದ ಸಂಸದರು, 'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್ಹೆಚ್ 50 ಹಾಗೂ ಎನ್ಹೆಚ್ 63 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ 28.01 ಕಿ.ಮೀ. ಬೈಪಾಸ್ ರಸ್ತೆಯನ್ನು ನಿರ್ಮಿಸಲು ಯೋಜಿಸಿದ್ದು, ಕೇಂದ್ರ ಸರ್ಕಾರದ ಈ ಯೋಜನೆ ಕುರಿತು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ' ಎಂದರು.
'ಇಂತಹ ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳುವಾಗ, ರೈತರು, ಸಾರ್ವಜನಿಕರ ಭೂಮಿ, ಆಸ್ತಿ-ಪಾಸ್ತಿಯನ್ನು ತ್ಯಾಗ ಮಾಡಬೇಕಾಗುತ್ತದೆ. ಆದರೆ, ಯಾವುದೇ ರೈತರು ಅಥವಾ ಸಾರ್ವಜನಿಕರಿಗೆ ಆರ್ಥಿಕವಾಗಿ ನಷ್ಟವನ್ನು ಮಾಡುವುದಿಲ್ಲ. ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಲಾಗುತ್ತದೆ. ರೈತರು ಪರಿಹಾರವನ್ನು ಪಡೆದು, ಪರ್ಯಾಯವಾಗಿ ಭೂಮಿಯನ್ನು ಖರೀದಿಸಿ, ತಮ್ಮ ವ್ಯವಸಾಯವನ್ನು ಮುಂದುವರೆಸಿಕೊಂಡು ಹೋಗಬೇಕು' ಎಂದು ಅವರು ಕರೆ ನೀಡಿದರು.
ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಇಂಧನ, ಅರಣ್ಯ ಇಲಾಖೆ ಅಡ್ಡಿ
'ಭಾರತಮಾಲ ಯೋಜನೆಯಡಿ ರಾಜ್ಯದಲ್ಲಿ ಪ್ರಮುಖ ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ನೀಡಿದ್ದು, ಈ ಪೈಕಿ ಕೊಪ್ಪಳ ಜಿಲ್ಲೆಯದ್ದೂ ಒಂದಾಗಿದೆ. 28.1 ಕಿ.ಮೀ. ಕಾರಿಡಾರ್ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸುಮಾರು 600 ಕೋಟಿ ರೂ. ಗೂ ಹೆಚ್ಚಿನ ವೆಚ್ಚವಾಗಲಿದೆ. ಹಿರಿಯರು ಮಾಡಿದ ಆಸ್ತಿಯನ್ನು ಕಳೆದುಕೊಳ್ಳಬೇಕಾಗುವುದು ನೋವಿನ ಸಂಗತಿಯಾದರೂ, ಅಭಿವೃದ್ಧಿಯ ವಿಷಯದಲ್ಲಿ ತ್ಯಾಗ ಮಾಡಬೇಕಾಗುತ್ತದೆ' ಎಂದರು.
'ಭೂಮಿ, ಆಸ್ತಿ ಕಳೆದುಕೊಂಡ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವುದರಿಂದ, ಈ ಪರಿಹಾರದ ಹಣದಲ್ಲಿ ಬೇರೆ ಕಡೆ ಭೂಮಿಯನ್ನು ಖರೀದಿ ಮಾಡಬಹುದು. ಅಲ್ಲದೆ ರಸ್ತೆಯ ಅಕ್ಕ-ಪಕ್ಕದಲ್ಲಿ ಉಳಿಯಬಹುದಾದ ಭೂಮಿಯಲ್ಲಿ ವಾಣಿಜ್ಯ ವ್ಯವಹಾರವನ್ನು ಕೂಡ ಮುಂದುವರೆಸಬಹುದು. ರೈತರು, ಸಾರ್ವಜನಿಕರು ತಮ್ಮ ಅಭಿಪ್ರಾಯ, ಕುಂದುಕೊರತೆಗಳನ್ನು ಹಂಚಿಕೊಳ್ಳುವ ಸಲುವಾಗಿಯೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ' ಎಂದು ತಿಳಿಸಿದರು.
ಪುತ್ತೂರು-ಉಪ್ಪಿನಂಗಡಿ ನಡುವೆ 4 ಪಥದ ರಸ್ತೆ ನಿರ್ಮಾಣ
'ಯೋಜನೆಯ ಕುರಿತಂತೆ ಪ್ರಾಥಮಿಕವಾಗಿ ದದೇಗಲ್, ಓಜನಹಳ್ಳಿ, ಇರಕಲ್ಲಗಡ ಮತ್ತು ಚಿಲಕಮುಖಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಸಾರ್ವಜನಿಕರು, ರೈತರು ನೀಡುವ ಅಭಿಪ್ರಾಯಗಳಿಗೂ ಮನ್ನಣೆ ನೀಡಲಾಗುವುದು. ಹೀಗಾಗಿ ಇಂತಹ ಅಭಿವೃದ್ಧಿಪರ ಯೋಜನೆಗೆ ರೈತರು, ಸಾರ್ವಜನಿಕರು ಸಹಕಾರ ನೀಡುವ ಮೂಲಕ ಯೋಜನೆ ಸಾಕಾರಕ್ಕೆ ನೆರವಾಗಬೇಕು' ಎಂದು ಸಂಸದರು ಮನವಿ ಮಾಡಿದರು.
ಯೋಜನೆಯ ಮಾಹಿತಿ : ಭಾರತಮಾಲಾ ಲಾಟ್ 3, ಪ್ಯಾಕೇಜ್-2 ಕಾರ್ಯಕ್ರಮದಡಿ ಎನ್ಹೆಚ್ 50 ಹಾಗೂ ಎನ್ಹೆಚ್ 64 ಅನ್ನು ಸಂಪರ್ಕಿಸುವ ಕೊಪ್ಪಳ-ಇರಕಲ್ಲಗಡ-ಮೆತಗಲ್ ವರೆಗಿನ ಬೈಪಾಸ್ ರಸ್ತೆ ಇದಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜನೆಯನ್ನು ಕಾರ್ಯಗತಗೊಳಿಸಲಿದೆ.
ದದೇಗಲ್, ಹಲಗೇರಿ, ಯತ್ನಟ್ಟಿ, ಓಜನಹಳ್ಳಿ, ಟಣಕನಕಲ್, ಲೇಬಗೇರಾ, ಹಟ್ಟಿ, ತಾಡಕನಕಾಪುರ, ಯಲಮಗೇರಾ, ಇರಕಲ್ಲಗಡ, ಕೊಡದಾಳ, ಚಾಮಲಾಪುರ, ಚಿಲಕಮುಖಿ, ಸಿಡಗನಹಳ್ಳಿ, ಹಿರೇಸೂಳಿಕೆರಿ ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.
ಯೋಜನೆಯ ಒಟ್ಟು ಉದ್ದ 28.1 ಕಿ.ಮೀ., ಯೋಜನೆಯ ವ್ಯಾಪ್ತಿಯಲ್ಲಿ ಯಾವುದೇ ಅರಣ್ಯ ಪ್ರದೇಶ ಬರುವುದಿಲ್ಲ. ನಾಲ್ಕು ಪಥದ ರಸ್ತೆ ಇದಾಗಲಿದ್ದು, 70 ಮೀ. ವ್ಯಾಪ್ತಿಯಲ್ಲಿ ಇರಲಿದೆ. ಯೋಜನೆಗೆ ಸುಮಾರು 195 ಎಕರೆ ಹೆಚ್ಚುವರಿ ಜಮೀನಿನ ಭೂಸ್ವಾಧೀನ ಅವಶ್ಯಕತೆ ಇದ್ದು, 11.12 ಕಿ.ಮೀ. ಸರ್ವಿಸ್ ರಸ್ತಗೆ ನಿರ್ಮಾಣವಾಗಲಿದೆ.
ಯೋಜನೆಯ ಒಟ್ಟಾರೆ ಉದ್ದ ಒಟ್ಟು 28. 01 ಕಿ.ಮೀ. ಗಳಾಗಿದ್ದು, ಬೈಪಾಸ್ ರಸ್ತೆಯ ಉದ್ದ ಸುಮಾರು 17. 37 ಕಿ.ಮೀ. ಆಗಿದ್ದು, ಇದರಲ್ಲಿ ಕೊಪ್ಪಳ ಬೈಪಾಸ್ ಉದ್ದ -9. 4 ಮೀ., ಟಣಕನಕಲ್ ಬೈಪಾಸ್-1.3 ಕಿ.ಮೀ., ಇರಕಲ್ಲಗಡ ಬೈಪಾಸ್- 2. 6 ಕಿ.ಮೀ., ಕೊಡದಾಳ ಬೈಪಾಸ್- 1. 8 ಕಿ.ಮೀ., ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾ.ಹೆ. 50 ಕೂಡುವ ಪ್ರಮುಖ ಜಂಕ್ಷನ್ಗೆ ಕ್ಲೋವರ್ ಲೀಫ್ ಇಂಟರ್ಚೇಂಜ್ ವ್ಯವಸ್ಥೆ ರೂಪಗೊಳ್ಳಲಿದೆ.
ಉದ್ದೇಶಿತ ಈ ಬೈಪಾಸ್ ರಸ್ತೆಯಲ್ಲಿ ವಾಹನಗಳ ಕೆಳಸೇತುವೆ- 04, ಮೇಲು ಸೇತುವೆ- 02, ಸಣ್ಣ ವಾಹನಗಳ ಕೆಳಸೇತುವೆ- 03, ಲಘು ವಾಹನಗಳ ಕೆಳ ಸೇತುವೆ- 06, ರೈಲು ಮೇಲ್ಸೇತುವೆ- 01, ಪಾದಚಾರಿಗಳ ಮೇಲ್ಸೇತುವೆ- 01, ಹೊಸ ಬಸ್ ತಂಗುದಾಣಗಳು- 09, ಲಾರಿ ವಿಶ್ರಾಂತಿ ಸ್ಥಳ-01 ಹಾಗೂ 01 ಟೋಲ್ ಪ್ಲಾಜಾ ಇರಲಿವೆ.
ಕೊಪ್ಪಳ ವ್ಯಾಪ್ತಿಯಲ್ಲಿ ಸುಮಾರು 1150 ಆಸ್ತಿ-ಭೂಮಿ ಬಾಧಿತಗೊಳ್ಳಲಿದ್ದು, ಈ ಪೈಕಿ ವಾಣಿಜ್ಯ ಆಸ್ತಿ ಹೆಚ್ಚು ಇವೆ. ಟಣಕನಕಲ್ ಗ್ರಾಮ ವ್ಯಾಪ್ತಿಯಲ್ಲಿ ಸುಮರು 87 ಖಾಸಗಿ ಆಸ್ತಿ ಇದ್ದು, ವಸತಿ ಕಟ್ಟಡಗಳು ಹೆಚ್ಚಿವೆ. ಇರಕಲ್ಲಗಡ ವ್ಯಾಪ್ತಿಯಲ್ಲಿ ಸುಮಾರು 274 ಆಸ್ತಿ ಇದ್ದು, ಈ ಪೈಕಿ ರಸ್ತೆಯ ಇಕ್ಕೆಲಗಳಲ್ಲಿನ ಆಸ್ತಿ ಹಾಗೂ ವಾಣಿಜ್ಯ ಆಸ್ತಿಗಳಿವೆ.