ಕೊಪ್ಪಳ; ಕುರಿಗಾಯಿಗಳನ್ನು ಎನ್ಡಿಆರ್ಎಫ್ ರಕ್ಷಿಸಿದ ರೋಚಕ ಕಥೆ!
ಕೊಪ್ಪಳ, ಆಗಸ್ಟ್, 12: ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಕುರಿಗಾಯಿಗಳು ನೂರಾರು ಕುರಿಗಳನ್ನು ಮೇಯಿಸಲು ಹೋಗಿದ್ದರು. ಭಾರೀ ಮಳೆ ಕಾರಣ ನದಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರವಾಗಿತ್ತು. ಬರಬರುತ್ತಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕುರಿಗಾಯಿಗಳು ನಡುಗಡ್ಡೆಯಲ್ಲಿ ಸಿಲುಕಿ ನಲುಗಿದರು. ಕುರಿಗಾಯಿಗಳನ್ನು ರಕ್ಷಣೆ ಮಾಡಲು ಕೊನೆಗೆ ಎನ್ಡಿಆರ್ಎಫ್ ತಂಡವೇ ಬರಬೇಕಾಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದೇವಘಾಟ್ ಬಳಿಯ ನದಿಪಾತ್ರದ ನಡುಗಡ್ಡೆಯಲ್ಲಿ ಇಬ್ಬರು ಕುರಿಗಾಯಿಗಳು ಸಿಲುಕಿಕೊಂಡಿದ್ದರು. ಇವರ ಜೊತೆಗೆ 120 ಕುರಿಗಳು, ಎರಡು ನಾಯಿ, ಒಂದು ಹಸು, ಕರುವನ್ನು ಎನ್ಡಿಆರ್ಎಫ್ ತಂಡ ಹಾಗೂ ಅಗ್ನಿಶಾಮಕದಳ ತಂಡದವರು ರಕ್ಷಿಸಿದ್ದಾರೆ.
ಕೊಪ್ಪಳ: ಎರಡು ಗುಂಪಿನ ನಡುವೆ ಮಾರಾಮಾರಿ, ಇಬ್ಬರು ಸಾವು
ಲಿಂಗಸೂರಿನ ಎನ್ಡಿಆರ್ಎಫ್ ತಂಡ ಹಾಗೂ ಅಗ್ನಿಶಾಮಕದಳ, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಕುರಿಗಾರರ ರಕ್ಷಣೆ ಕಾರ್ಯಾಚರಣೆ ನಡೆಸಿ, ಅವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.
ಕಳೆದ ಒಂದು ವಾರದ ಹಿಂದೆ ನದಿಗೆ ನೀರು ಕಡಿಮೆ ಇದ್ದ ಕಾರಣ ಗಂಗಾವತಿ ತಾಲೂಕಿನ ವಿರುಪಾಪುರ ಗ್ರಾಮದ ಹನುಮಂತಪ್ಪ ಹಾಗೂ ಹನುಮೇಶ್ ಎಂಬುವವರು ಕುರಿ ಮೇಯಿಸಲು ಇಲ್ಲಿಗೆ ಬಂದಿದ್ದರು. ತಮಗೆ ಅಗತ್ಯ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬರಲು ದೇವಘಾಟ್ ನದಿಯ ಆಚೆಗೆ ಹೋಗಿದ್ದರು.
ಅದೇ ಸಂದರ್ಭದಲ್ಲಿ ತುಂಗಭದ್ರಾ ಜಲಾಯಶಕ್ಕೆ ಅಪಾರ ನೀರು ಹರಿಸಲಾಗಿತ್ತು. ಇದರಿಂದ ನದಿಯ ನಡುಗಡ್ಡೆಯಲ್ಲೇ ಕುರಿಗಾಯಿಗಳು ಸಿಲುಕಿಕೊಂಡು ಒಂದು ದಿನವನ್ನು ಕಳೆದಿದ್ದಾರೆ. ನಂತರ ಇವರು ಹಸಿವು ತಾಳಲಾರದೆ ಊಟಕ್ಕಾಗಿ ಪರದಾಡಿದ್ದಾರೆ. ಅಲ್ಲಿಂದಲೇ ಸ್ಥಳೀಯರಿಗೆ ಕರೆ ಮಾಡಿ ತಮ್ಮನ್ನು ರಕ್ಷಣೆ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ.
ಇವರು ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡ ವಿಷಯ ತಿಳಿದ ಕೂಡಲೇ ಕೊಪ್ಪಳ ಉಪವಿಭಾಗಧಿಕಾರಿ ಬಸವಣ್ಣೆಪ್ಪ, ತಹಶೀಲ್ದಾರ್ ಯು. ನಾಗರಾಜ ಗಂಗಾವತಿ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ರಕ್ಷಣೆ ಕಾರ್ಯಾಚರಣೆಗೆ ಮುಂದಾಗಿದ್ದರು.
ನದಿಯಲ್ಲಿ ಬೃಹತ್ ಬಂಡೆ, ಕಲ್ಲುಗಳು, 1.70ಲಕ್ಷ ಕ್ಯುಸೆಕ್ ನೀರು ಹರಿಯುತ್ತಿರುವ ಕಾರಣ ಬೋಟ್ ಬಿಡಲು ಸಾಧ್ಯವಾಗಿಲ್ಲ. ಇನ್ನು ನದಿಯಲ್ಲಿ 1ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ ಇಳಿಕೆ ಆಗುತ್ತಿದಂತೆ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ನಡಿಸಿ ಅವರನ್ನು ಸುರಕ್ಷಿತವಾಗಿ ದಡ ಸೇರಿಸಿದರು.
ಎನ್ಡಿಆರ್ಎಫ್ ತಂಡದ ಸಾಹಸ ರಕ್ಷಣೆ ಕಾರ್ಯಾಚರಣೆಯಿಂದ ಎರಡು ಜೀವಗಳು ಉಳಿದಿವೆ. ಕುರಿಗಾಯಿಗಳು ಮಾತನಾಡಿ, "ನಮ್ಮನ್ನು ಕಾಪಾಡಿದ ರಕ್ಷಣಾ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ" ಎಂದರು.
ನೀರಿನ ರಭಸ, ಕಲ್ಲು-ಬಂಡೆಗಳ ಮಧ್ಯೆ ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಕುರಿ, ಹಸು, ನಾಯಿ, ಕುರಿಗಾಯಿಗಳನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದ ಎನ್ಡಿಆರ್ಎಫ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.