ವಿರುಪಾಪುರಗಡ್ಡೆ: ನಡುಗಡ್ಡೆಯಲ್ಲಿ ಸಿಲುಕಿದ್ದ 14 ವಿದೇಶಿಗರ ರಕ್ಷಣೆ
ಕೊಪ್ಪಳ, ಆಗಸ್ಟ್ 12 : ತುಂಗಭದ್ರಾ ಜಲಾಶಯದ ನೀರನ್ನು ನದಿ ಪಾತ್ರಗಳಿಗೆ ಹರಿಸಿದ ಪರಿಣಾಮ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ್ದ 350 ಹೆಚ್ಚು ಜನರ ರಕ್ಷಣೆಗೆ ಎನ್ ಡಿಅರ್ ಎಫ್ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ವಿರುಪಾಪುರ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವ ಕಾರ್ಯ ಬಿರುಸಾಗಿ ನಡೆಯುತ್ತಿದೆ.
ಜರ್ಮನಿಯ 11, ಫ್ರಾನ್ಸ್ 5, ಸ್ವಿಟ್ಜರ್ಲೆಂಡ್ 1, ಅಮೆರಿಕ-1 ಸೇರಿದಂತೆ 19 ವಿದೇಶಿಗರು ನಡುಗಡ್ಡೆಯಲ್ಲಿ ಸಿಲುಕಿದ್ದು, ಈವರೆಗೂ ಎನ್ ಡಿಆರ್ ಎಫ್ ತಂಡ 14 ವಿದೇಶಿಗರು, 10 ಭಾರತೀಯ ನಿವಾಸಿಗಳನ್ನು ರಕ್ಷಿಸಿದೆ.
ಎಚ್ಚರ: ತುಂಗಭದ್ರಾ ಅಣೆಕಟ್ಟೆಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ
ನೀರಿನ ಹರಿವು ಹೆಚ್ಚಿದ್ದರೂ 10 ಜನರ ತಂಡ ಜನರ ರಕ್ಷಣೆಗೆ ಅವಿರತ ಶ್ರಮಿಸುತ್ತಿದೆ. ಸದ್ಯಕ್ಕೆ ಒಂದೇ ಬೋಟ್ ನಲ್ಲಿ ರಕ್ಷಣಾ ಕಾರ್ಯ ಸಾಗುತ್ತಿದೆ. ಕೊಪ್ಪಳ ಡಿಸಿಪಿ ಸುನೀಲ್ ಕುಮಾರ ಸ್ಥಳದಲ್ಲೇ ಉಳಿದು ರಕ್ಷಣಾ ಕಾರ್ಯದ ಪ್ರಗತಿಯನ್ನು ವೀಕ್ಷಿಸುತ್ತಿದ್ದಾರೆ.
ಉಕ್ಕಡಗಾತ್ರಿ ದೇವಾಲಯಕ್ಕೆ ಈಗ ಜಲದಿಗ್ಬಂಧನದ ಭೀತಿ
ವಿರುಪಾಪುರ ಗಡ್ಡೆಯಲ್ಲಿ 350ಕ್ಕೂ ಹೆಚ್ಚು ಜನರಿದ್ದ ಕಾರಣ ಬೇರೆಡೆಯಿಂದ ಹೆಚ್ಚುವರಿ ಮೂರು ಬೋಟ್ ಕರೆ ತರಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ವಿದೇಶಿಗರು ಸೇರಿದಂತೆ ಸ್ಥಳೀಯ ಜನರ ರಕ್ಷಣಾ ಕಾರ್ಯದ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.