ಕೊಪ್ಪಳ ಕಾರು ಅಪಘಾತ: ಮೂವರು ಮಕ್ಕಳನ್ನು ಅನಾಥ ಮಾಡಿ ಅಟ್ಟಹಾಸ ಮೆರದ ವಿಧಿ!
ಕೊಪ್ಪಳ, ಜುಲೈ, 25: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಭಾನಾಪುರ ಬಳಿ ನಡೆದ ಸ್ಕಾರ್ಪಿಯೋ ಕಾರು ಅಪಘಾತದಲ್ಲಿ ಮಕ್ಕಳಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಕಳೆದುಕೊಂಡ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಮಕ್ಕಳ ಪಾಲಿಗೆ ದೇವರಿಗೆ ಕರುಣೆಯೇ ಇಲ್ಲವೇ ಎನ್ನುವ ದು:ಖದ ಮಾತುಗಳು ಪ್ರತಿಧ್ವನಿಸುತ್ತಿವೆ. ಯಾಕೆಂದರೆ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳಿಬ್ಬರ ಪಾಲಿಗೆ ತಾಯಿಯೂ ಇಲ್ಲದಂತಾಗಿದೆ. ಇದನ್ನು ಮಕ್ಕಳು ಹೇಗೆ ಅರಗಿಸಿಕೊಳ್ಳುತ್ತಾರೋ ಎಂದು ಸಂಬಂಧಿಕರು, ಅಲ್ಲಿನ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ಹಿಂತಿರುಗುವಾಗ ಹೋಗುತ್ತಿದ್ದಾಗ ಘಟನೆ ನಡೆದಿದೆ. ಭಾನಾಪುರ ಬಳಿ ರಾತ್ರಿ ಸ್ಕಾರ್ಪಿಯೋ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 5 ಜನರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು. ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಪುಟ್ಟರಾಜ ಹಾಗೂ ಭೂಮಿಕಾ ಎಂಬ ಮಕ್ಕಳ ತಾಯಿ ಪಾರವ್ವ ಎಂಬುವವರು ಘಟನೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಈ ಮಕ್ಕಳ ಬೀರಪ್ಪ ತಂದೆಯನ್ನು ಒಂದು ವರ್ಷದ ಹಿಂದೆ ಕಳೆದುಕೊಂಡಿದ್ದರು.
ಈಗ ಅಪಘಾತದಲ್ಲಿ ತಾಯಿಯೂ ಸಾವನ್ನಪ್ಪುವ ಮೂಲಕ ಮಕ್ಕಳನ್ನು ಅನಾಥರಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟಿರುವ ಪಾರವ್ವಳಿಗೆ ಮೂವರು ಮಕ್ಕಳಿದ್ದಾರೆ. ಆ ಮೂವರು ಮಕ್ಕಳನ್ನು ನಿನ್ನೆ ಕೊಪ್ಪಳದಲ್ಲಿನ ಸಂಬಂಧಿಕರ ಮಗುವೊಂದರ ಹುಟ್ಟುಹಬ್ಬಕ್ಕೆ ಕರೆದುಕೊಂಡು ಬಂದಿದ್ದಳು.
ಪಾರವ್ವಳ ಮೂವರು ಮಕ್ಕಳ ಪೈಕಿ ಬಸವರಾಜ ಎಂಬ ಮಗ ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನಿಬ್ಬರು ಮಕ್ಕಳಾಗಿದ್ದ ಪುಟ್ಟರಾಜ ಮತ್ತು ಮೂರೂವರೆ ವರ್ಷದ ಭೂಮಿಕಾ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ತಾಯಿ ಮೃತಪಟ್ಟಿರುವ ವಿಷಯ ಆ ಮಕ್ಕಳಿಗೆ ಇನ್ನು ತಿಳಿದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸ್ಥಿತಿಯನ್ನು ಕಂಡು ಸಂಬಂಧಿಕರು, ಜನರು ಕಣ್ಣೀರಿಟ್ಟಿದ್ದಾರೆ. ಒಂದೇ ವರ್ಷದಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅನಾಥರಾದರಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಕ್ಕಳ ದೊಡ್ಡಪ್ಪನಾದ ರುದ್ರಪ್ಪ ಮಾತನಾಡಿ, "ಘಟನೆ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಅಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳು ಅನಾಥವಾಗಿರುವ ಸ್ಥಿತಿಯನ್ನು ಕೇಳಿ ದುಃಖ ವ್ಯಕ್ತಪಡಿಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು," ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಸಚಿವ ಹಾಲಪ್ಪ ಆಚಾರ್ ಮಾತನಾಡಿ, "ಏನೂ ಅರಿಯದ ವಯಸ್ಸಿನ ಆ ಕಂದಮ್ಮಗಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಸ್ಥಿತಿ ಯಾವ ಮಕ್ಕಳಿಗೂ ಬರುವುದು ಬೇಡ," ಎಂದು ದುಃಖಿತರಾದರು.
Recommended Video