ಡಿ.ಕೆ ಶಿವಕುಮಾರ್ ಅವರನ್ನು ನಾವು ಕುಗ್ಗಿಸುತ್ತಿಲ್ಲ, ಸಿಬಿಐ: ಕೆ.ಎಸ್ ಈಶ್ವರಪ್ಪ
ಕೊಪ್ಪಳ, ಅಕ್ಟೋಬರ್ 8: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ನಾವು ಕುಗ್ಗಿಸುತ್ತಿಲ್ಲ, ಸಿಬಿಐ ಅವರನ್ನು ಕುಗ್ಗಿಸುತ್ತಿದೆ. ಇದಕ್ಕೆ ಬಿಜೆಪಿ ಹೊಣೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೊಪ್ಪಳದಲ್ಲಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬಿಜೆಪಿಯ ಬೆದರಿಕೆಗೆ ಬಗ್ಗುವುದಿಲ್ಲ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಡಿಕೆಶಿ ನಿಷ್ಕಳಂಕರಾಗಿ ಸಿಬಿಐ ಪ್ರಕರಣದಿಂದ ಹೊರ ಬರಲಿ: ಸಚಿವ ಈಶ್ವರಪ್ಪ
ಸಿಬಿಐ, ಆದಾಯ ತೆರಿಗೆ ತನಿಖೆಯಲ್ಲಿ ಹವಾಲಾ ಹಣ ಸಿಕ್ಕಿತು. ಕಪ್ಪು ಹಣ ಸಿಕ್ಕಿದ್ದರಿಂದಲೇ ಜೈಲಿಗೆ ಹೋಗಿ ಬಂದರು. ಇಷ್ಟೆಲ್ಲ ಆದರೂ ಬುದ್ಧಿ ಬಂದಿಲ್ಲ. ನಾವೇನೂ ಮಾಡಿಲ್ಲ, ಎಲ್ಲ ಸಿಬಿಐ ಮಾಡಿದೆ. ಸಿಬಿಐನವರು ಏನು ದಾಖಲೆ ಕೇಳುತ್ತಾರೋ ಅವನ್ನು ಕೊಡಲಿ ಎಂದರು.
ಇದೇ ವೇಳೆ ಶಾಲೆ ಪ್ರಾರಂಭ ಗೊಂದಲದ ಬಗ್ಗೆ ಮಾತನಾಡಿದ ಈಶ್ವರಪ್ಪ, ಸದ್ಯಕ್ಕೆ ಶಾಲೆಯನ್ನು ಆರಂಭ ಮಾಡುವುದಿಲ್ಲ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.
Recommended Video
ವಿಧಾನ ಪರಿಷತ್ ಮತ್ತು ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಚುನಾವಣೆ ಎಂದರೆ ಬಿಜೆಪಿ ಎನ್ನುವಂತಾಗಿದೆ. ಯಾವುದೇ ಚುನಾವಣೆ ಬರಲಿ ಬಿಜೆಪಿ ಗೆಲುವು ನಿಶ್ಚಿತ, ಈಗಾಗಲೇ ಲೋಕಸಭಾ ಚುನಾವಣೆ ಇದಕ್ಕೆ ಉತ್ತರ ಕೊಟ್ಟಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ಎರಡು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.