ಬೆಳೆಹಾನಿ ಪರಿಶೀಲನೆಗೆ ಬಾರದ ಜಿಲ್ಲಾಧಿಕಾರಿ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಗರಂ
ಕೊಪ್ಪಳ, ಏಪ್ರಿಲ್ 9: ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯುಂಟಾಗಿತ್ತು. ಬೆಳೆಹಾನಿಯಾಗಿರುವ ರೈತರ ಜಮೀನಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಭೇಟಿ ನೀಡಲಿಲ್ಲ. ಪರಿಶೀಲನೆಯೂ ನಡೆಸಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಪಿ.ಸುನೀಲ್ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಗರಂ ಆದರು.
ಇಂದು ಬೆಳಿಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್, ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ, ಸಿಂಗನಾಳ, ಸಿಂಗನಾಳ ಕ್ಯಾಂಪ್, ಜಿರಾಳ ಕಲ್ಲಗುಡಿ ರೈತರ ಹೊಲಗಳಿಗೆ ಭೇಟಿ ನೀಡಿದ್ದರು.
ಆತ್ಮಹತ್ಯೆ ಪರಿಹಾರವಲ್ಲ, ಅನ್ನದಾತರೆ ಆತ್ಮಸ್ಥೈರ್ಯದಿಂದಿರಿ: ಬಿ.ಸಿ.ಪಾಟೀಲ
ಈ ವೇಳೆ ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಚಿವ ಬಿ.ಸಿ.ಪಾಟೀಲ್ ಜೊತೆಗೆ ಬೆಳೆಹಾನಿ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಮಾತ್ರ ಬಂದಿರಲಿಲ್ಲ.
ಜಿಲ್ಲಾಡಳಿತ ಭವನದಲ್ಲಿ ಸಭೆಗೆ ಆಗಮಿಸಿದ ಸಚಿವ ಬಿ.ಸಿ.ಪಾಟೀಲ್, ಅಲ್ಲಿದ್ದ ಜಿಲ್ಲಾಧಿಕಾರಿಗಳಿಗೆ, ''ಬೆಳೆಹಾನಿ ವೀಕ್ಷಣೆಗೆ ಏಕೆ ಬರಲಿಲ್ಲ?'' ಎಂದು ಪ್ರಶ್ನಿಸಿದರು. ಆಗ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ''ಬೇರೆ ಕೆಲಸದ ನಿಮಿತ್ತ ಬರಲಾಗಲಿಲ್ಲ'' ಎಂದರು.
ಲಾಕ್ ಡೌನ್; ಕೃಷಿ ಚುಟವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ
ಜಿಲ್ಲಾಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ಸಚಿವ ಬಿ.ಸಿ.ಪಾಟೀಲ್, ''ಅಲ್ಲಿ ರೈತರ ಬೆಳೆ ನಾಶವಾಗಿದೆ. ರೈತರು ಸಂಕಟ ಪಡುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ಏನು ಮಾಡುತ್ತೀರಾ? ಇದೇನಾ ನಿಮ್ಮ ಜವಾಬ್ದಾರಿ? ಉಳಿದ ಕೆಲಸ ಬಿಟ್ಟು ಮೊದಲು ರೈತರ ಕೆಲಸ ಮಾಡಿ'' ಎಂದು ಸೂಚಿಸಿದರು.