ಕೊಪ್ಪಳ : ಮಾವು ಮೇಳ, 100ಕ್ಕೂ ಅಧಿಕ ಬಗೆಯ ಹಣ್ಣು ಸವಿಯಿರಿ
ಕೊಪ್ಪಳ, ಮೇ 06 : ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್, ಚಿನ್ನರಸಂ, ಪೆದ್ದರಸಂ ಮುಂತಾದ ತಳಿಗಳ ಮಾವಿನ ಹಣ್ಣುಗಳ ರುಚಿ ನೋಡಲು ಕೊಪ್ಪಳಕ್ಕೆ ಬನ್ನಿ.
ಹೌದು, ಕೊಪ್ಪಳದಲ್ಲಿ ಮಾವು ಮೇಳ ಮತ್ತೆ ಬಂದಿದೆ. ಮೇ. 8 ರಿಂದ 15 ರವರೆಗೆ ಕೊಪ್ಪಳ ನಗರದ ಎಲ್ಐಸಿ ಆಫೀಸ್ ಮುಂಭಾಗವಿರುವ ತೋಟಗಾರಿಕೆ ಇಲಾಖೆ ಕಛೇರಿ ಆವರಣದಲ್ಲಿ ಮಾವಿನ ಮೇಳವನ್ನು ಆಯೋಜನೆ ಮಾಡಲಾಗಿದೆ.
'ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ' ಎಂದು ಕೊಪ್ಪಳ ತೋಟಗಾರಿಕೆ ಇಲಾಖಾ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಹೇಳಿದ್ದಾರೆ.
ಮಾವು ಪ್ರದರ್ಶನ ಮೇಳವನ್ನು ಕೊಪ್ಪಳ ತೋಟಗಾರಿಕೆ (ಜಿಪಂ) ಇಲಾಖೆ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ನಿಯಮಿತ (ನಿ), ಇವರ ಸಂಯುಕ್ತಾಶ್ರಯದಲ್ಲಿಆಯೋಜನೆ ಮಾಡಲಾಗಿದೆ.
ರೈತರಿಂದ ಗ್ರಾಹಕರಿಗೆ ನೇರವಾಗಿ ಉತ್ತಮ ಗುಣಮಟ್ಟದ ಮತ್ತು ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ತಲುಪಿಸುವುದು. ಕ್ಯಾಲ್ಸಿಯಂ ಕಾರ್ಬೈಡ್ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ಇರುವ ಮತ್ತು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಸುಮಾರು 100 ಕ್ಕೂ ಹೆಚ್ಚು ಪ್ರಮುಖ ಮಾವಿನ ತಳಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ರೈತರು ಮಾವಿನ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವುದು ಮೇಳದ ಉದ್ದೇಶವಾಗಿದೆ.
ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಗಿಸುವಿಕೆಯಿಂದಾಗುವ ದುಷ್ಪರಿಣಾಮ ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ರೈತರಿಗೆ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೂ ಅರಿವು ಮೂಡಿಸುವುದಾಗಿದೆ.
ಈ ವರ್ಷದ ಮೇಳದ ವಿಶೇಷತೆ ಎಂದರೆ ಮಾವಿನ ಹಣ್ಣಿನ ಸಂಸ್ಕರಿಸಿದ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ ಹಾಗೂ ಇತರೆ ಉತ್ಪನ್ನಗಳ ಬಗ್ಗೆ ರೈತರಿಗೂ ಹಾಗೂ ಸಾರ್ವಜನಿಕರಿಗೂ ಮಾಹಿತಿ ನೀಡುವುದು.
ಮಾವು ಮಂಡಳಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳು/ ಪ್ರಯೋಜನಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ 30ಕ್ಕೂ ಹೆಚ್ಚಿನ ರೈತರು ತಮ್ಮ ಹೆಸರನ್ನು ಈ ಮೇಳಕ್ಕೆ ನೋಂದಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಪ್ರಮುಖ ಮಾವಿನ ತಳಿಗಳಾದ ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್, ಚಿನ್ನರಸಂ, ಪೆದ್ದರಸಂ ಮುಂತಾದ ತಳಿಗಳನ್ನು ರೈತರು ನೇರವಾಗಿ ಗ್ರಾಹಕರಿಗೆ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಗೆ ಮಾರಾಟಮಾಡಲು ಅವಕಾಶ ಕಲ್ಪಿಸಲಾಗಿದೆ.