ಕೀನ್ಯಾದಲ್ಲಿ ಉಪನ್ಯಾಸ ನೀಡಲಿದ್ದಾರೆ ಕೊಪ್ಪಳ ಸಿಇಒ ವೆಂಕಟ್ ರಾಜಾ
ಕೊಪ್ಪಳ, ಜುಲೈ 7: ಸ್ವಚ್ಛತೆ ಮತ್ತು ಆರೋಗ್ಯ ಕುರಿತಂತೆ ಕೀನ್ಯಾದಲ್ಲಿ ಜುಲೈ 9 ರಿಂದ 13ರವರೆಗೆ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ಯಶಸ್ವಿ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಕ್ರಾಂತಿ ಕುರಿತು ವಿಶೇಷ ಉಪನ್ಯಾಸ ನೀಡಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ತೆರಳಲಿದ್ದಾರೆ.
ಅವರು ಕೀನ್ಯಾದ ಲೊಗ್ಬೊರೋ ವಿಶ್ವವಿದ್ಯಾಲಯದಲ್ಲಿ ನಡೆಯುವ ಯುನಿಸೆಫ್ನ 41 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ, ದಕ್ಷಿಣ ಭಾರತದಲ್ಲೇ ಹುಣಸೂರಿಗೆ ಅಗ್ರಸ್ಥಾನ
ಇದರಿಂದ ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಲವು ಬಗೆಯ ತಂತ್ರಗಳನ್ನು ಅನುಸರಿಸಿ, ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಪ್ಪಳ ಜಿಲ್ಲೆಗೆ ಇದೀಗ ಮತ್ತೊಂದು ಗರಿ ಮೂಡಿದಂತಾಗಿದೆ.
ಇಂಗ್ಲೆಂಡ್ನ ಲೊಗ್ಬೊರೊ ವಿಶ್ವವಿದ್ಯಾಲಯ ಪ್ರತಿ ವರ್ಷ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುತ್ತದೆ. ಇದು 41 ನೆಯ ಸಮ್ಮೇಳನವಾಗಿದೆ.
ಕೊಪ್ಪಳ : ಮಾದರಿ ಘನ ತ್ಯಾಜ್ಯ ಘಟಕಕ್ಕೆ ಪರಮೇಶ್ವರ ಭೇಟಿ
ಐದು ದಿನಗಳ ಸಮ್ಮೇಳನದಲ್ಲಿ ಸುಮಾರು 40 ದೇಶಗಳಿಂದ 400 ವಿವಿಧ ತಜ್ಞರು, ವಿಷಯ ಪರಿಣಿತರು ವಿಷಯ ಮಂಡಿಸಲಿದ್ದಾರೆ.
ಕೊಪ್ಪಳದ ಸಾಧನೆಗಳ ವಿವರಣೆ
ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರ ಮತ್ತು ಆಡಳಿತ ವರ್ಗವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ಹೇಗೆ ಜಾಗೃತಿ ಮೂಡಿಸುವಲ್ಲಿ ಯಶಸ್ಸು ಕಂಡಿದೆ, ಇದಕ್ಕೆ ಎದುರಾದ ಸವಾಲುಗಳು ಯಾವುವು, ಕೈಗೊಂಡ ಕ್ರಮಗಳೇನು ಎನ್ನುವುದರ ಕುರಿತು ಸಿಇಒ ವೆಂಕಟ್ ರಾಜಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಗಂಗಾವತಿ ತಾಲೂಕಿನ ಢಣಾಪುರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮ, ಶೌಚಾಲಯಕ್ಕಾಗಿ ಉಪವಾಸ ಕುಳಿತು ಹಠ ಸಾಧಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದರು. ಕೊಪ್ಪಳ ಜಿಲ್ಲೆಯ ಹೆಸರು, ಇಡೀ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ತೀವ್ರ ಸಂಚಲನ ಉಂಟು ಮಾಡಿತ್ತು.
ವ್ಯಾಪಕ ಪ್ರಚಾರ
ಶೌಚಾಲಯದ ನಿರ್ಮಾಣ ಹಾಗೂ ಅದರ ಮಹತ್ವ ಕುರಿತಂತೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಹಾಗೂ ಅನುಸರಿಸಿದ ತಂತ್ರಗಾರಿಕೆ ಅಷ್ಟಿಷ್ಟಲ್ಲ.
ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳು, ಸದಸ್ಯರು, ತಾ.ಪಂ., ಗ್ರಾ.ಪಂ. ಗಳನ್ನು ಮೊದಲುಗೊಂಡು ಎಲ್ಲ ಹಂತಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹ ಜನಜಾಗೃತಿಗೆ ಸಾಕಷ್ಟು ಬೆಂಬಲಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಹುದ್ದೆಗೇರಿದ್ದ ಟಿ. ಜನಾರ್ಧನ ಹುಲಿಗಿ ಅವರು ಈ ದಿಸೆಯಲ್ಲಿ ಮುಂಚೂಣಿಯಲ್ಲಿ ನಿಂತು ಜನಜಾಗೃತಿಗೆ ಹಲವು ಬಗೆಯ ತಂತ್ರಗಾರಿಕೆ ಅನುಸರಿಸಿದ್ದು, ರಾಷ್ಟ್ರಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ಹೆಸರು ಕೇಳಿ ಬರಲು ಪ್ರಾರಂಭವಾಯಿತು.
ಅವರು ಬೆಳ್ಳಂಬೆಳಿಗ್ಗೆ ಗ್ರಾಮಗಳಿಗೆ ತೆರಳಿ, ಬಯಲು ಬಹಿರ್ದೆಸೆಗೆ ಹೋಗುವವರ ಕಾಲಿಗೆರಗಿ, ದಯವಿಟ್ಟು ಬಯಲು ಶೌಚಕ್ಕೆ ಹೋಗಬೇಡಿ, ಶೌಚಾಲಯ ಕಟ್ಟಿಸಿಕೊಳ್ಳಿ, ಇದಕ್ಕೆ ಬೇಕಾದ ಅನುದಾನ ಸರ್ಕಾರವೇ ಕೊಡಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು, ರಾಷ್ಟ್ರ ಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ಬಗ್ಗೆ ಚರ್ಚೆ ಪ್ರಾರಂಭ ಮಾಡುವಂತಾಯಿತು.
ಇದಾದ ಬಳಿಕ, ವಿಷಲ್ ಅಭಿಯಾನ ಕೂಡ ಜನ ಜಾಗೃತಿ ಮೂಡಿಸಲು ಅಷ್ಟೇ ಪರಿಣಾಮವನ್ನು ಬೀರಿತು. ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾದ, ಕೊಪ್ಪಳ ಜಿಲ್ಲೆಯಲ್ಲಿ ಜನರ ಮನಸ್ಥಿತಿಯನ್ನು ಬದಲಾಯಿಸಿ, ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು ನಿಜಕ್ಕೂ ಸವಾಲಿನ ಸಂಗತಿ.
ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನವೊಲಿಸಿ, ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡುವುದಕ್ಕೆ ಹಲವು ಜನಪ್ರತಿನಿಧಿಗಳು, ನೌಕರರು, ಅಧಿಕಾರಿಗಳು ಅನೇಕ ಆಂದೋಲನಗಳನ್ನೇ ಕೈಗೊಳ್ಳಬೇಕಾಯಿತು.
ಮಾನವ ಸರಪಳಿ ದಾಖಲೆ
ಈ ಪೈಕಿ ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ ಚಳುವಳಿ, ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ಮಾನವ ಸರಪಳಿ ನಿರ್ಮಿಸಿ ದಾಖಲೆ ಕೈಗೊಂಡಿದ್ದು, ಮಿಷನ್ 200 ಹೆಸರಿನಲ್ಲಿ 200 ಗಂಟೆಗಳಲ್ಲಿ 20 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಕಠಿಣ ಸವಾಲನ್ನು ಹಾಕಿಕೊಂಡು, ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಯಿತು.
ಇತ್ತೀಚೆಗಷ್ಟೇ ಕೊಪ್ಪಳ ಜಿಲ್ಲೆಯನ್ನು ಬೇಸ್ ಲೈನ್ ಸಮೀಕ್ಷೆಯನ್ವಯ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಕೊಪ್ಪಳ ತಾಲೂಕಿನ ಹೊಸಳ್ಳಿ-ಹುಲಿಗಿ ಬಳಿ ನಿರ್ಮಿಸಲಾಗಿರುವ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕ ಇಂದು ರಾಜ್ಯದಲ್ಲಿಯೇ ಒಂದು ಮಾದರಿ ಘಟಕವಾಗಿ ರೂಪುಗೊಂಡಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತಿಯ ಜನಪ್ರತಿನಿಧಿಗಳು ಈ ಘಟಕಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ ಭೇಟಿ
ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರು ಕೂಡ ಘಟಕಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಸುಮಾರು 110 ಗ್ರಾಮಗಳಿಗೆ ಇಂತಹ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ರೂಪಿಸುವುದಾಗಿ ಆಶಯ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಹಲವಾರು ಮುಂದುವರಿದ ಜಿಲ್ಲೆಗಳು ಇನ್ನೂ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿ ಘೋಷಣೆಯಾಗಲು ಪರದಾಡುತ್ತಿರುವಾಗ, ಹಿಂದುಳಿದಂತಹ ಕೊಪ್ಪಳ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿತಗೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ವಿವಿಧೆಡೆ ಉಪನ್ಯಾಸ
ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ಸ್ವಚ್ಛತೆ ಕುರಿತಂತೆ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡ ಹಲವು ಬಗೆಯ ಕಾರ್ಯಕ್ರಮಗಳು, ಆಂದೋಲನಗಳ ಕುರಿತು ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಗೆ ಹೆಸರನ್ನು ತಂದುಕೊಟ್ಟಿದೆ.
ಅಲ್ಲದೆ, ಹಲವು ಬಾರಿ ದೇಶದ ವಿವಿಧೆಡೆ ಸ್ವಚ್ಛತೆ ಹಾಗೂ ಆರೋಗ್ಯ ಕುರಿತ ಉಪನ್ಯಾಸ ಕಾರ್ಯಕ್ರಮಗಳಿಗೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತೆರಳಿ, ಉಪನ್ಯಾಸ ನೀಡಿಬಂದಿದ್ದಾರೆ.
ಇದರ ಮುಂದುವರಿದ ಭಾಗವಾಗಿ, ಇದೀಗ ಕೀನ್ಯಾದಲ್ಲಿ ಜು. 09 ರಿಂದ 13 ರವರೆಗೆ ಜರುಗುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಯಶಸ್ವಿ ಶೌಚಾಲಯ ನಿರ್ಮಾಣ ಹಾಗೂ ಸ್ವಚ್ಛತೆಯ ಕ್ರಾಂತಿ ಕುರಿತು ವಿಶೇಷ ಉಪನ್ಯಾಸ ನೀಡಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಭಾರತ ದೇಶದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಕೊಪ್ಪಳ ಜಿಲ್ಲೆಯ ಯಶೋಗಾಥೆ ವಿದೇಶಕ್ಕೂ ವ್ಯಾಪಿಸಿದಂತಾಗಿದೆ. ಕೀನ್ಯಾದಲ್ಲಿ ಜರುಗುವ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆ ಕುರಿತಂತೆ ವಿಷಯ ಮಂಡಿಸಲು ತೆರಳುತ್ತಿದ್ದು, ಜುಲೈ 09 ರಿಂದ 13 ರವರೆಗೆ ಐದು ದಿನಗಳ ಕಾಲ ಸಮ್ಮೇಳನ ನಡೆಯಲಿದೆ.
ವಿವಿಧ ದೇಶಗಳ ಜನರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಯಶೋಗಾಥೆ ಹಾಗೂ ಎದುರಾದ ಸಮಸ್ಯೆಗಳ ಕುರಿತು ವಿವರಣೆ ನೀಡಲು ಸಿದ್ಧತೆ ಕೈಗೊಂಡಿದ್ದೇನೆ ಎನ್ನುತ್ತಾರೆ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು.