ಯೆಮನ್ ಪರದಾಟ: 15 ದಿನದಲ್ಲಿ ಕಂಡ ಕರಾಳ ಮುಖ
ಕೊಪ್ಪಳ, ಏ. 8: 'ಯೆಮನ್ ನಿಂದ ಜೀವಂತವಾಗಿ ಹಿಂದಕ್ಕೆ ಬರುತ್ತೇನೆ ಎಂಬ ಯಾವ ನಂಬಿಕೆಗಳು ನನಗಿರಲಿಲ್ಲ. ಭಾರತ ಸರ್ಕಾರ ಮತ್ತು ಸೇನೆಯ ಕಾರ್ಯವನ್ನು ನನ್ನ ಜೀವನದೂದ್ದಕ್ಕೂ ನೆನೆಯುತ್ತಿರಬೇಕಾಗಿದೆ' ಇದು ಯುದ್ಧ ಪೀಡಿತ ಯೆಮನ್ ನಿಂದ ಹಿಂದಿರುಗಿದ ಇಂಜಿನಿಯರ್ ಇಕ್ಬಾಲ್ ಬಾಷಾ ಅಬ್ದುಲ್ ಕುದ್ದುಸ್ ಅವರ ಮಾತು.
ಕೊಪ್ಪಳ ಮೂಲದ ಬಾಷಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ಕಳೆದ 16 ವರ್ಷದಿಂದ ಏಡನ್ ನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]
ಆಂತರಿಕ ಸಂಘರ್ಷದ ಪರಿಣಾಮ ಏಡನ್ ವಿಮಾನ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿತ್ತು. ಭಾರತಕ್ಕೆ ಹಿಂದಿರುಗಬೇಕು ಎಂದರೆ 280 ಕಿಮೀ ದೂರದ ಜಿಬೌಟಿಗೆ ಬರಲೇಬೇಕಿತ್ತು. ಆದರೆ ಯಾವ ವಾಹನದ ವ್ಯವಸ್ಥೆ ಅಲ್ಲಿರಲಿಲ್ಲ. ಅಂತೂ ಇಂತೂ ಒಂದು ಬೋಟಿನ ನೆರವಿನಲ್ಲಿ ವಿಮಾನ ನಿಲ್ದಾಣ ತಲುಪಿ ಮುಂಬೈಗೆ ಬಂದಿಳಿದಾಗ ಹೋದ ಪ್ರಾಣ ವಾಪಸ್ ಬಂದ ಹಾಗೆ ಆಗಿತ್ತು ಎಂದು ಹೇಳುವಾಗ ಬಾಷಾ ನಮ್ಮ ದೇಶವೇ ಸುರಕ್ಷಿತ ಎನ್ನಲು ಮರೆಯಲ್ಲ.
ಕಳೆದ 15 ದಿನಗಳಲ್ಲಿ ಮಾನವನ ಕರಾಳ ಮುಖ ದರ್ಶನವಾಗಿದೆ. ನಾವು ಯುದ್ಧ ಪ್ರದೇಶದಿಂದ 5 ಕಿಮೀ ದೂರದಲ್ಲಿ ಇದ್ದುದರಿಂದ ಸಾವಿನಿಂದ ಬಚಾವಾಗಿದ್ದೇನೆ. ಹಲವು ದಿನ ಆಹಾರ ಮತ್ತು ನೀರು ಇಲ್ಲದೇ ಕಳೆದಿದ್ದೇನೆ ಎಂದು ಯೆಮನ್ ನಲ್ಲಿ ಕಳೆದ ಕೆಟ್ಟ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.[ಸಿಕ್ಕಿಕೊಂಡಿದ್ದ ಭಾರತೀಯರ ಕತೆ ಹೇಗಿತ್ತು?]
ಇನ್ನು ಮುಂದೆ ಬಾಷಾ ಭಾರತದಲ್ಲೇ ನೆಲೆಸಲು ತೀರ್ಮಾನಿಸಿದ್ದೇನೆ. ಹಣ ಗಳಿಸಲು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸರಿಯೇ? ಎಂದು ಅವರು ಪ್ರಶ್ನೆ ಮಾಡುತ್ತಾರೆ.