ಕೊಪ್ಪಳ ವಿಮಾನ ನಿಲ್ದಾಣ; ಸ್ಥಳ ಪರಿಶೀಲಿಸಿ ವರದಿ ತಯಾರಿಕೆಗೆ ಸೂಚನೆ
ಕೊಪ್ಪಳ, ಜನವರಿ 23; ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿದೆ. ಸುಮಾರು 669 ಎಕರೆ ಭೂ-ಸ್ವಾಧೀನಪಡಿಸಿಕೊಂಡು ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ದಾವಣಗೆರೆ ಏರ್ಪೋರ್ಟ್ ಬೇಡಿಕೆಗೆ ಮನ್ನಣೆ, ಅಧಿಕಾರಿಗಳ ಭೇಟಿ
ಸಭೆಯಲ್ಲಿ ಮಾತನಾಡಿದ ವಿ. ಸೋಮಣ್ಣ, "ಕೊಪ್ಪಳದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕುರಿತಂತೆ ಸ್ಥಳ ವೀಕ್ಷಣೆ ಮಾಡಿ, ವರದಿ ತಯಾರಿಸಲು ಕ್ರಮ ವಹಿಸಿ" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಪ್ಪಳ ನಗರಕ್ಕೆ ಸಮೀಪವಿರುವ ವಿಮಾನ ನಿಲ್ದಾಣ, ಕಾರ್ಯಾಚರಣೆಯಲ್ಲಿರುವ ಮತ್ತು ಅಭಿವೃದ್ಧಿ ಪಡಿಸುತ್ತಿರುವ ವಿಮಾನ ನಿಲ್ದಾಣಗಳ ಕುರಿತು ಸಭೆಯಲ್ಲಿ ಸಚಿವರಿಗೆ ವಿವರ ನೀಡಲಾಯಿತು.
ಉಡಾನ್ಗೆ ಶಿವಮೊಗ್ಗ ವಿಮಾನ ನಿಲ್ದಾಣ; ಎಲ್ಲೆಲ್ಲಿಗೆ ವಿಮಾನ ಹಾರಾಟ?
ಜಿಲ್ಲೆಯ ಹಟ್ಟಿ, ಕಲಕೇರಿ ಮತ್ತು ತಾಳಕನಕಾಪೂರ ಗ್ರಾಮಗಳಲ್ಲಿ ಗುರುತಿಸಿರುವ 669 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಕುರಿತು ಕೆ. ಎಸ್. ಐ. ಐ. ಡಿ. ಸಿ ನಿಗಮದಿಂದ ಸ್ಥಳ ಪರಿಶೀಲನೆ ನಡೆಸಿ, ನಂತರ ಎಎಐ ಸಂಸ್ಥೆಯಿಂದ ಪೂರ್ವ-ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮಾರ್ಕಿಂಗ್ ಕಾರ್ಯ ಆರಂಭ: ಆರ್.ಗಿರೀಶ್
ಕೊಪ್ಪಳ ಜಿಲ್ಲಾಧಿಕಾರಿ ಹೇಳಿಕೆ
ಸಭೆಯಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, "ಕೊಪ್ಪಳದಲ್ಲಿ ಭಲ್ಟೋಟ ವಿಮಾನ ನಿಲ್ದಾಣವು ಮೇ ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯ ಒಡೆತನದಲ್ಲಿದ್ದು, ಭಲ್ಟೋಟ ವಿಮಾನ ನಿಲ್ದಾಣವು ಪ್ರಾದೇಶಿಕ ವಾಯು ಸಂಪರ್ಕ (ಆರ್.ಸಿ.ಎಸ್) ಯೋಜನೆ- 2.0ರಲ್ಲಿ ಆಯ್ಕೆಯಾಗಿರುತ್ತದೆ" ಎಂದರು.
"ಕೇಂದ್ರ ವಿಮಾನಯಾನ ಸಚಿವಾಲಯದಿಂದ ಕೊಪ್ಪಳ ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ ಅನುಮೋದನೆಗಳನ್ನು ರಾಜ್ಯ ಸರ್ಕಾರವು ತೆಗೆದುಕೊಳ್ಳುವುದು. ತದನಂತರ ವಿಮಾನ ನಿಲ್ದಾಣಕ್ಕೆ ಗುರುತಿಸುವ ಜಮೀನುಗಳ ಭೂ-ಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ" ಸಚಿವ ವಿ. ಸೋಮಣ್ಣ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಸಂಸ್ಥೆ ಜೊತೆ ಮಾತುಕತೆ
ಭಲ್ಟೋಟ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸುವ ಕುರಿತು ಮೇ ಎಂ.ಎಸ್.ಪಿ.ಎಲ್ ಖಾಸಗಿ ಸಂಸ್ಥೆಯವರೊಂದಿಗೆ ಸರ್ಕಾರದ ವತಿಯಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿದ್ದರೂ ಸಹ ಆರ್.ಸಿ.ಎಸ್. ವಿಮಾನಗಳ ಕಾರ್ಯಾಚರಣೆಗೆ ಈ ಸಂಸ್ಥೆಯಿಂದ ಸಕಾರಾತ್ಮಕ ಪ್ರಕ್ರಿಯೆ ಸಿಕ್ಕಿಲ್ಲ.
ಎ.ಎ.ಐ.ನ ತಂಡವು ಫ್ರೆಬ್ರವರಿ 2021ರಲ್ಲಿ ಕೊಪ್ಪಳದಲ್ಲಿನ ಭಲ್ಟೋಟ ವಿಮಾನ ನಿಲ್ದಾಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಸ್ತುತ 1703 * 30 ಮೀ. ಉದ್ದದ ರನ್-ವೇ ಇರುವುದಾಗಿ ಹಾಗೂ ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 257 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ಹಾಗೂ ಎ-320 ಮಾದರಿಯ ವಿಮಾನಗಳ ಕಾರ್ಯಾಚರಣೆಗಾಗಿ ಸುಮಾರು 507 ಎಕರೆ ಹೆಚ್ಚುವರಿ ಜಮೀನು ಬೇಕಾಗುತ್ತದೆಂದು ವರದಿ ನೀಡಿದೆ.
ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ
ಕುಷ್ಟಗಿ ರಸ್ತೆಗೆ ಹೊಂದಿಕೊಂಡಿರುವ ಸುಮಾರು 669 ಎಕರೆ ಜಮೀನುಗಳನ್ನು ಭೂ-ಸ್ವಾಧೀನಪಡಿಸಿಕೊಂಡು ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಭಲ್ಡೋಟಾ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉಪಯೋಗಕ್ಕೆ ವಿಮಾನ ನಿಲ್ದಾಣದ ಮಾಲೀಕರಿಂದ ಅನುಮತಿ ದೊರೆಯದ ಕಾರಣ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪ್ರಸ್ತುತ ಕೊಪ್ಪಳ ನಗರಕ್ಕೆ ಸಮೀಪವಿರುವ ವಿಮಾನ ನಿಲ್ದಾಣಗಳು. ಕಾರ್ಯಾಚರಣೆಯಲ್ಲಿರುವ ಮತ್ತು ಅಭಿವೃದ್ಧಿ ಪಡಿಸುತ್ತಿರುವ ವಿಮಾನ ನಿಲ್ದಾಣಗಳ ವಿವರಗಳ ಕುರಿತು ಚರ್ಚೆ ನಡೆಸಲಾಯಿತು.
4 ಹೊಸ ವಿಮಾನ ನಿಲ್ದಾಣ ಸ್ಥಾಪನೆ
"ಬಾಗಲಕೋಟೆ, ರಾಯಚೂರು, ದಾವಣಗೆರೆ, ಹಾಸನ ಸೇರಿದಂತೆ ರಾಜ್ಯದಲ್ಲಿ ಒಟ್ಟು 4 ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ" ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
"ಸದ್ಯಕ್ಕೆ ರಾಜ್ಯದಲ್ಲಿ 8 ವಿಮಾನ ನಿಲ್ದಾಣಗಳಿವೆ. ಈ 4 ಹೊಸ ವಿಮಾನ ನಿಲ್ದಾಣಗಳು ಆರಂಭವಾದರೆ ಪ್ರತಿ 100 ಕಿ. ಮೀ. ವ್ಯಾಪ್ತಿಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ" ಎಂದು ಸಚಿವರು ತಿಳಿಸಿದ್ದಾರೆ.