ಲ್ಯಾಪ್ ಟಾಪ್ ಹಗರಣದಲ್ಲಿ ಬಸವರಾಜ್ ರಾಯರೆಡ್ಡಿ ಭಾಗಿ: ಆರೋಪ
ಕೊಪ್ಪಳ, ಡಿಸೆಂಬರ್ 13 : ಲ್ಯಾಪ್ ಟಾಪ್ ಟೆಂಡರ್ ಅವ್ಯವಹಾರದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಆರೋಪಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಪನಿಗಳಿಂದ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ. ಇದೀಗ ಕರೆದಿರುವ ಟೆಂಡರ್ ಪ್ರಕ್ರಿಯೆ ತಕ್ಷಣವೇ ಕೈಬಿಡಬೇಕು. 30 ಸಾವಿರ ಲ್ಯಾಪ್ ಟಾಪ್ ಗಳು ಇದುವರೆಗೂ ವಿದ್ಯಾರ್ಥಿಗಳ ಕೈಸೇರಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ ಆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿಲ್ಲ ಎಂದರು.
ಐ3 ವರ್ಷನ್ ಲ್ಯಾಪ್ ಟಾಪ್ ಕೊಡಬೇಕಾಗಿತ್ತು. ಆದರೆ ನಿಯಮ ಉಲ್ಲಂಘನೆ ಮಾಡಿ ಟೆಂಡರ್ ಪ್ರಕ್ರಿಯೆ ಮಾಡುತ್ತಿದ್ದಾರೆ. ಇದರಲ್ಲಿ 300 ಕೋಟಿ ರೂ. ಹಗರಣವಾಗಿದೆ. ಇನ್ನೊಂದು ಟಿಎಪಿ ರಚನೆ ಮಾಡಿ ಟೆಂಡರ್ ಪ್ರಕ್ರಿಯೆ ಮಾಡಬೇಕು ಎಂದರು.
ಉತ್ತರಕನ್ನಡದಲ್ಲಿ ನಡೆದ ಗಲಭೆಗೆ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರಣವಲ್ಲ. ಅಲ್ಲಿನ ಜನರ ಹಿಂಸೆಯನ್ನು ಖಂಡಿಸಿ ಹೋರಾಟ ಮಾಡಿದ್ದಾರೆ. ಆವರಿಗೆ ನ್ಯಾಯ ಒದಗಿಸಲು ನಾವು ಜನರೊಂದಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.