ಕೊಪ್ಪಳದಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ಅವಧಿ ಹೋರಾಟ
ಕೊಪ್ಪಳ, ಜುಲೈ 9: ಕೊಪ್ಪಳ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಕೌಶಲ್ಯ ಗೌಡ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರದೆ ಇರುವ ಕಾರಣ ಅಸಮಾಧಾನ ಹೊರ ಹಾಕಿದ್ದಾರೆ.
Recommended Video
ಜುಲೈ 10 ರಿಂದ ಅಂದರೆ, ನಾಳೆಯಿಂದ ತಮ್ಮ ಕೆಲಸವನ್ನು ನಿಲ್ಲಿಸಿ ಮನೆಯಲ್ಲಿಯೇ ಅನಿರ್ದಿಷ್ಟ ಅವಧಿ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊರೊನಾ ವಿರುದ್ದ ಜೀವದ ಹಂಗು ತೊರೆದು ನಾವು ಹೋರಾಟ ನಡೆಸುತ್ತಿದ್ದರೂ ಸರ್ಕಾರ ತಮ್ಮ ಕಡೆ ಗಮನ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
12 ಸಾವಿರ ರೂ ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಮನವಿ
ಆಶಾ ಕಾರ್ಯಕರ್ತೆಯರು ಮಾಸಿಕ ವೇತನ 12 ಸಾವಿರ ರೂಪಾಯಿ ನೀಡಬೇಕು ಎಂದು ಮನವಿ ಮಾಡಿದ್ದರು. ಹತ್ತಕ್ಕೂ ಹೆಚ್ಚು ಬಾರಿ ಸರ್ಕಾರದ ಮುಂದೆ ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿಯೇ ಈ ಬಗ್ಗೆ ಹೋರಾಟ ಸಹ ಮಾಡಲಾಗಿತ್ತು ಎಂದಿದ್ದಾರೆ.
''ನಮಗೆ ಎಲ್ಲೆಡೆ ಹೂವಿನ ಸುರಿಮಳೆ, ಚಪ್ಪಾಳೆ ತಟ್ಟಿ ಸನ್ಮಾನ ಮಾಡುತ್ತಿದ್ದಾರೆ. ಆದರೆ ಈ ಸನ್ಮಾನ, ಚಪ್ಪಾಳೆಯಿಂದ ಹೊಟ್ಟೆ ತುಂಬಲ್ಲ. ನಮ್ಮ ಬದುಕು ಸಹ ಕಷ್ಟದ ಸ್ಥಿತಿಯಲ್ಲಿದೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು'' ಎಂದು ಕೌಶಲ್ಯ ಗೌಡ ಮನವಿ ಮಾಡಿದ್ದಾರೆ.