ಸರಳವಾಗಿ ನಡೆದು ಮಾದರಿಯಾದ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ
ಕೊಪ್ಪಳ, ಜನವರಿ 19: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವವು ಬುಧವಾರ ಬೆಳಗ್ಗೆ 4.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆದಿದೆ.
ಬುಧವಾರ ಸಂಜೆ 5.30ಕ್ಕೆ ರಥೋತ್ಸವ ನಡೆಯಬೇಕಿತ್ತು. ಆದರೆ, ಸಂಜೆ ಜಾತ್ರೆ ನಡೆದರೆ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇರುವುದರಿಂದ ಇಂದು ಬೆಳಿಗ್ಗೆ 4.30ಕ್ಕೆ ಜಾತ್ರೆ ನಡೆದಿದೆ. ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕವಾಗಿ ಜರುಗಿದೆ.
ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ರಥೋತ್ಸವದಂದು ಸುಮಾರು 5 ಲಕ್ಷ ಜನರು ಸೇರುತ್ತಿದ್ದರು. ಜಿಲ್ಲಾಡಳಿತ ನಿರ್ಬಂಧದ ಹಿನ್ನೆಲೆಯಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಗವಿಮಠ ರದ್ದು ಮಾಡಿತ್ತು. ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ ನಡೆದ ರಥೋತ್ಸವದಲ್ಲಿ ಕೆಲವೇ ಕೆಲವು ಭಕ್ತರು ರಥ ಎಳೆದಿದ್ದಾರೆ. ಕೊನೆ ಕ್ಷಣದವರೆಗೂ ರಥೋತ್ಸವದ ಸಮಯದ ಬಗ್ಗೆ ಗವಿಮಠ ಯಾವುದೇ ಮಾಹಿತಿ ನೀಡಿರಲಿಲ್ಲ.
ಗವಿಸಿದ್ದೇಶ್ವರ ರಥೋತ್ಸವದಂದು ಲಕ್ಷಾಂತರ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಗವಿಮಠ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದಾಗ್ಯೂ ರಥೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ.
ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವದಂದು ಲಕ್ಷಾಂತರ ಭಕ್ತರು ಸೇರುವದನ್ನು ತಡೆಯುವ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.