ಕೊಪ್ಪಳದ ಹೊಸ ಆಕರ್ಷಣೆ: ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ
ಕೊಪ್ಪಳ, ಆಗಸ್ಟ್ 15 : ರಾಜ್ಯ ಅರಣ್ಯ ಇಲಾಖೆಯವರು ಕೊಪ್ಪಳ ತಾಲೂಕು ರುದ್ರಾಪುರ-ಕಾಸನಕಂಡಿ ಬಳಿ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿದರು.
ತಾಲೂಕಿನ ರುದ್ರಾಪುರ-ಕಾಸನಕಂಡಿ ಗ್ರಾಮ ಬಳಿ ಅರಣ್ಯ ಇಲಾಖೆಯು ಸುಮಾರು 125 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಆಕರ್ಷಕ ವೃಕ್ಷ ಉದ್ಯಾನವನ ನಿರ್ಮಿಸಿದ್ದು, ಇದಕ್ಕೆ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಎಂಬ ಹೆಸರಿಡಲಾಗಿದೆ.
ಪುಷ್ಪ ಕೃಷಿಯಿಂದ ಲಾಭಗಳಿಸಿದ ಕೊಪ್ಪಳ ರೈತ
ಪ್ರಾಕೃತಿಕ ಸೌಂದರ್ಯದೊಂದಿಗೆ ಆಕರ್ಷಕ ಕಲಾಕೃತಿಗಳನ್ನು ವೃಕ್ಷ ಉದ್ಯಾನವನದಲ್ಲಿ ನಿರ್ಮಿಸಿದ್ದು, ಗ್ರಾಮೀಣ ಬದುಕಿನ ಚಿತ್ರಣದ ಜೊತೆಗೆ ವನ್ಯ ಜೀವಿಗಳ ಬಗ್ಗೆ ಹಾಗೂ ಪರಿಸರ ಕಾಳಜಿಯ ಬಗ್ಗೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಅದ್ಭುತವಾಗಿದೆ.
ಕೊಪ್ಪಳದ ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ?
ವೃಕ್ಷ ಉದ್ಯಾನವನದಲ್ಲಿ ಆನೆ, ಕೋತಿ, ಮೊಲ, ಹುಲಿ, ಚಿರತೆ, ಜಿಂಕೆ, ಕರಡಿ, ಕಡವೆ, ಆಮೆ, ವಿವಿಧ ಪ್ರಬೇಧದ ಹಾವುಗಳು, ಪಕ್ಷಿಗಳು, ಮೊಸಳೆ ಮುಂತಾದ ಕಲಾಕೃತಿಗಳು ಕಲಾವಿದನ ಕೈಚಳಕದಿಂದ ಜೀವಂತಿಕೆ ಪಡೆದಿವೆ. ವನ್ಯ ಜೀವಿಗಳ ಕಲಾಕೃತಿಗಳಿಗೆ ಸೂಕ್ತ ಬಣ್ಣ ಬಳಸಿರುವುದರಿಂದ, ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.
ರಾಕ್ ಗಾರ್ಡನ್ ಮಾದರಿಯಲ್ಲಿ ಈ ವೃಕ್ಷ ಉದ್ಯಾನ
ಹಾವೇರಿ ಜಿಲ್ಲೆಯ ಗೋಟಗೋಡಿಯಲ್ಲಿ ನಿರ್ಮಾಣವಾಗಿರುವ ರಾಕ್ ಗಾರ್ಡನ್ ಮಾದರಿಯಲ್ಲಿ ಈ ವೃಕ್ಷ ಉದ್ಯಾನವನ್ನು ನಿರ್ಮಿಸಿದ್ದು, ಬರುವ ದಿನಗಳಲ್ಲಿ ಈ ಉದ್ಯಾನವನ ವೀಕ್ಷಿಸಲು ತಂಡೋಪತಂಡವಾಗಿ ಸಾರ್ವಜನಿಕರು, ಪ್ರವಾಸಿಗರು ಬರುವುದರಲ್ಲಿ ಅನುಮಾನವಿಲ್ಲ.
ರುದ್ರಾಪುರ-ಕಾಸನಕಂಡಿ ಬಳಿ ನಿರ್ಮಿಸಲಾಗಿರುವ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿದರು.
ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ
ವೃಕ್ಷ ಉದ್ಯಾನವನವ ವೀಕ್ಷಿಸುತ್ತ, ಒಂದು ಸುತ್ತು ಖುಷಿಯಾಗಿ ನೋಡಿಕೊಂಡು ಬಂದ ಅರಣ್ಯ ಸಚಿವರು, ಮಾತನಾಡಿ, ವೃಕ್ಷ ಉದ್ಯಾನವವನ್ನು ತುಂಬಾ ಆಕರ್ಷಕವಾಗಿ ನಿರ್ಮಿಸಿದ್ದಾರೆ. ಈ ಉದ್ಯಾನವನವನ್ನು ಇನ್ನೂ ಹೆಚ್ಚು ಆಕರ್ಷಕವಾಗಿಸಲು ಅಗತ್ಯ ನೆರವು ಒದಗಿಸಲಾಗುವುದು. ಇಲ್ಲಿ ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಸಿರು ಕರ್ನಾಟಕ ಕಾರ್ಯಕ್ರಮ
ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ವೃಕ್ಷ ಉದ್ಯಾನವನದಲ್ಲಿ ಅರಣ್ಯ ಸಚಿವರಾದ ಆರ್. ಶಂಕರ್ ಅವರು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಇವರ ಜೊತೆ ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಸೇರಿದಂತೆ ಎಲ್ಲ ಅಧಿಕಾರಿಗಳು, ಗಣ್ಯರು ಗಿಡಗಳನ್ನು ನೆಟ್ಟು, ಸಂತಸಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅರಣ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಂಕರಪ್ಪ, ಗಣ್ಯರಾದ ಕರಿಯಣ್ಣ ಸಂಗಟಿ, ವಿರೇಶ್ ಮಹಾಂತಯ್ಯನಮಠ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ವೃಕ್ಷ ಉದ್ಯಾನವನ ಪ್ರವೇಶಕ್ಕೆ ಶುಲ್ಕ
ಪ್ರವೇಶ ಶುಲ್ಕ : ವೃಕ್ಷ ಉದ್ಯಾನವನ ಪ್ರವೇಶಕ್ಕೆ ಅರಣ್ಯ ಇಲಾಖೆ ಶುಲ್ಕ ನಿಗದಿಪಡಿಸಿದ್ದು, ವಯಸ್ಕರಿಗೆ ರೂ. 20 ಹಾಗೂ ಮಕ್ಕಳಿಗೆ ರೂ. 10 ರಂತೆ ದರ ಇದೆ. ಉದ್ಯಾನವನ ವೀಕ್ಷಣೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 06 ರವರೆಗೆ ಅವಕಾಶವಿದೆ. ಸಾಹಸ ಕ್ರೀಡೆಗಳಿಗೆ ಪ್ರತಿ ಗಂಟೆಗೆ ರೂ. 10 ರಂತೆ ದರ ವಿಧಿಸಲಾಗುವುದು. ಉದ್ಯಾನವನದಲ್ಲಿ, ಮಕ್ಕಳ ಆಟಕ್ಕೆ, ಮನೋರಂಜನೆಗೂ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯದ ವ್ಯವಸ್ಥೆಯೂ ಇದೆ. ಕಿರು ಪ್ರವಾಸಕ್ಕೆ ವೃಕ್ಷ ಉದ್ಯಾನವನ ಉತ್ತಮ ಪ್ರವಾಸಿ ತಾಣವಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಎ.ಹೆಚ್. ಮುಲ್ಲಾ ಅವರು ತಿಳಿಸಿದರು.