ಸಿಎಎ ವಿರುದ್ಧ ಕವಿತೆ: ಕೊಪ್ಪಳ ಪತ್ರಕರ್ತನ ಮೇಲೆ ಎಫ್ಐಆರ್
ಕೊಪ್ಪಳ, ಜನವರಿ 26: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ಕವಿತೆ ಬರೆದ ಕೊಪ್ಪಳದ ಪತ್ರಕರ್ತ, ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ಕೊಪ್ಪಳದ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾಡಳಿತ ಸಹಯೋಗದಲ್ಲಿ ಜ. 9 ಮತ್ತು 10ರಂದು ನಡೆಸಿದ್ದ ಆನೆಗೊಂದಿ ಉತ್ಸವದ ವಿದ್ಯಾರಣ್ಯ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ವೇಳೆ ಸಿರಾಜ್ ಅವರು ಸಿಎಎ ಮತ್ತು ಎನ್ಆರ್ಸಿ ಕುರಿತಾಗಿ ಕವಿತೆ ವಾಚಿಸಿದ್ದರು. ಇದರಲ್ಲಿ ಅವರು ಪ್ರಧಾನಿ ಮತ್ತು ಕೇಂದ್ರ ಸಚಿವರನ್ನು ಅವಮಾನಿಸಿದ್ದಾರೆ. ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ದೇಶವಿರೋಧಿ ಕವಿತೆ ವಾಚಿಸಿದ್ದಾರೆ ಎಂದು ಗಂಗಾವತಿಯ ಬಿಜೆಪಿ ಮುಖಂಡರು ದೂರು ನೀಡಿದ್ದರು.
ಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡು
ಈ ಕವಿತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಜಾಭಕ್ಷಿ ಎಂಬುವವರ ವಿರುದ್ಧ ಕೂಡ ಬಿಜೆಪಿ ಮುಖಂಡ ಮಡ್ಡೇರ್ ಶಿವಕುಮಾರ್ ಅರಿಕೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸರ್ವಾಧಿಕಾರಿ ಧೋರಣೆ
ಕವಿತೆ ಬರೆದಿದ್ದಕ್ಕೆ ಎಫ್ಐಆರ್ ದಾಖಲು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ಕವಿಗಳು, ಹೋರಾಟಗಾರರ ಧ್ವನಿಯನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿರಾಜ್ ಅವರು ವಾಚಿಸಿದ್ದ ಕವಿತೆಯನ್ನು ತಮ್ಮ ಫೇಸ್ಬುಕ್ ವಾಲ್ಗಳಲ್ಲಿ ಹಂಚಿಕೊಳ್ಳುವ ಮೂಲಕ ಮತ್ತು ವಿಡಿಯೋ ರೂಪದಲ್ಲಿ ವಾಚಿಸುವ ಮೂಲಕ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ದೇಶವಿರೋಧಿ ಬರಹ
ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಅನೇಕರು ಸಮರ್ಥಿಸಿಕೊಂಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಧಾನಿ ಮತ್ತು ಸಚಿವರನ್ನು ಹೀಯಾಳಿಸುವುದು ಹಾಗೂ ದೇಶದ ಕಾನೂನನ್ನು ಅಣಕಿಸುವುದು ಸರಿಯಲ್ಲ. ಕೀಳು ಪದಗಳನ್ನು ಬಳಸುವ ಮೂಲಕ ದೇಶವನ್ನು ಅವಮಾನಿಸಿದ್ದಾರೆ. ಕಾನೂನಿನ ಪ್ರಕಾರ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಿರಾಜ್ಗೆ ಬೆಂಬಲ
ಪತ್ರಕರ್ತ, ಕವಿ ಕೊಪ್ಪಳದ ಗೆಳೆಯ ಸಿರಾಜ್ ಬಿಸರಳ್ಳಿ ಮೇಲೆ NRC ಕುರಿತು ಬರೆದ ಕವಿತೆಯ ಕಾರಣಕ್ಕೆ ಗಂಗಾವತಿ ಠಾಣೆಯಲ್ಲಿ ಬಿಜೆಪಿ ದೂರಿನ ಮೇರೆಗೆ FIR ದಾಖಲಾಗಿದೆ. ಈ ರೀತಿ ಪೊಲೀಸರನ್ನು ಛೂ ಬಿಟ್ಟು ಪತ್ರಕರ್ತ, ಬರಹಗಾರರ, ಕವಿಗಳ ಧ್ವನಿಯನ್ನು, ಹೋರಾಟವನ್ನು ಹತ್ತಿಕ್ಕುವುದು ಒಪ್ಪಲಾಗದು. ಇದು ಸರ್ವಾಧಿಕಾರಿ ಆಡಳಿತ. ಬಿಜೆಪಿ ಸರ್ಕಾರದ ಈ ನಿರ್ಲಜ್ಜ ನಡೆಯನ್ನು ಖಂಡಿಸಿ, ಸಿರಾಜ್ ಬಿಸರಳ್ಳಿಗೆ ಬೆಂಬಲ ಸೂಚಿಸಿ ಅದೇ ಕವಿತೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಕೇಸು ನನ್ನ ಮೇಲೆಯೂ ಹಾಕಿ ಎಂದು ಅನೇಕರು ಕವಿತೆ ಹಂಚಿಕೊಂಡಿದ್ದಾರೆ.
ಏನಿದು ಕವಿತೆ?
ಸಿರಾಜ್ ಬಿಸರಳ್ಳಿ ಬರೆದ ವಿವಾದಕ್ಕೀಡಾದ ಕವಿತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಪೂರ್ಣವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಕವಿತೆಯ ಆರಂಭದ ಕೆಲವು ಸಾಲುಗಳು ಹೀಗಿವೆ...
ಆಧಾರು,
ರೇಷನ್
ಕಾರ್ಡಗಳ
ಕ್ಯೂನಲ್ಲಿ
ಥಂಬಿನ,
ಸರ್ವರಿನ
ಮಂಗನಾಟದಲ್ಲಿ
ಬದುಕ
ಕಳೆದುಕೊಳ್ಳುತ್ತಿರುವವರ
ದಾಖಲೆ
ಕೇಳುವವನೇ
ನಿನ್ನ
ದಾಖಲೆ
ಯಾವಾಗ
ನೀಡುತ್ತಿ?