ನಕಲಿ ಬೀಜ ಮಾರಾಟಗಾರರ ಒತ್ತಡಕ್ಕೆ ಮಣಿದರೆ ತಾಯಿ ಮಗುವಿಗೆ ವಿಷವುಣಿಸಿದಂತೆ: ಬಿ.ಸಿ.ಪಾಟೀಲ್
ಕೊಪ್ಪಳ, ಜೂನ್ 19: ರೈತರಿಗೆ ಒಳ್ಳೆಯದು ಮಾಡುವುದೇ ನನ್ನ ಕರ್ತವ್ಯ. ನಕಲಿ ಕಳಪೆ ಬೀಜ ಗೊಬ್ಬರ ಮಾರಾಟಗಾರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒತ್ತಡಕ್ಕೆ ಮಣಿಯುವುದು ತಾಯಿಯೇ ಮಗುವಿಗೆ ವಿಷವುಣಿಸಿದಂತೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Recommended Video
ಕೊಪ್ಪಳದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, "ಕಳಪೆ ಬೀಜ ಮಾರಾಟ ಮಾಡುವ ದೊಡ್ಡ ಜಾಲವನ್ನು ನಾವು ಬೇಧಿಸಿದ್ದೇವೆ. ಇನ್ನೂ ಬೇಧಿಸುವುದು ಬಹಳಷ್ಟಿದೆ. ಕಳಪೆ ಬೀಜ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ. ಕಳಪೆ ಬೀಜ ಮಾರಾಟದವರ ಒತ್ತಡ ತಂತ್ರಗಳಿಗೆ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ" ಎಂದು ಹೇಳಿದರು.
''ಫೋನ್ನಲ್ಲಿ ಹಲೋ ಬದಲು ಜೈ ಕಿಸಾನ್ ಎನ್ನಿ''- ಬಿಸಿ ಪಾಟೀಲ್
"ಇಲ್ಲಿವರೆಗೂ 15 ಕೋಟಿ ಮೊತ್ತದ ಕಳಪೆ ಬೀಜ ಪತ್ತೆ"
ಕಳಪೆ ಬೀಜ ಮಾರಾಟವನ್ನು ನಾವೇ ಪತ್ತೆ ಮಾಡುತ್ತಿದ್ದೇವೆ. ಇಷ್ಟು ವರ್ಷ ಅದು ಪತ್ತೆಯಾಗಿದ್ದಿಲ್ಲ. ಕಳಪೆ ಬೀಜದ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ ಎಂದು ಹೇಳಿದರು. ಕೃಷಿ ಸಚಿವರಾದ ಬಳಿಕ ಖುದ್ದಾಗಿ ಇಂಥದ್ದೊಂದು ಡ್ರೈವ್ ಸ್ಟಾರ್ಟ್ ಮಾಡಲಾಗಿದ್ದು, ರಾಯಚೂರು, ಬೀದರ್, ಹಾವೇರಿ ಸೇರಿದಂತೆ ಇಲ್ಲಿಯವರೆಗೂ ಸುಮಾರು 15 ಕೋಟಿ ಮೊತ್ತದ ಕಳಪೆ ಬೀಜ ಪತ್ತೆ ಮಾಡಲಾಗಿದೆ ಎಂದರು.
"ಅನ್ನ ಕೊಡುವ ರೈತನಿಗೆ ಕಳಪೆ ಬೀಜ ನೀಡಬಾರದು"
ಅನ್ನ ಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಸಮಯದಲ್ಲಿ ಕಳಪೆ ಬೀಜ ಪೂರೈಕೆ ಆಗಬಾರದು. ಕಳಪೆ ಬೀಜದ ಜೊತೆಗೆ ಕಳಪೆ ನಕಲಿ ರಸ ಗೊಬ್ಬರ, ಔಷಧಿಯನ್ನು ಸೀಜ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಬೀಜ ಕಾಯಿದೆ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
"ಎಲ್ಲರೂ ನಿಯಮ ಅನುಸರಿಸಿ"
ಕೊರೊನಾ ವೈರಸ್ ಪಾಸಿಟಿವ್ ಬಂದವರು ತಮ್ಮೊಂದಿಗೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದರು, ಎಲ್ಲೆಲ್ಲಿ ಓಡಾಡಿದ್ದರೆಂಬ ಮಾಹಿತಿಯನ್ನು ಸ್ವತಃ ನೀಡಿದರೆ ಚಿಕಿತ್ಸೆಗೆ ಮತ್ತು ಇನ್ನಿತರರನ್ನು ಸೋಂಕಿನಿಂದ ತಪ್ಪಿಸಲು ಸಹಾಯವಾಗುತ್ತದೆ. ಈಗ ಪರೀಕ್ಷಾ ಕೇಂದ್ರಗಳು ಹೆಚ್ಚಾಗಿರುವ ಕಾರಣ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಮಾಡಲು ಅನುಕೂಲವಾಗುತ್ತಿದೆ. ಹೊರಗಿನಿಂದ ಬಂದವರಿಂದ ಸೋಂಕು ಹರಡುತ್ತಿದೆ. ಎಲ್ಲರೂ ತಪ್ಪದೇ ಸಾಮಾಜಿಕ ಅಂತರ, ಸರ್ಕಾರದ ನಿಯಮ ಪಾಲನೆ ಅನುಸರಿಸಬೇಕೆಂದು ಬಿ.ಸಿ.ಪಾಟೀಲ್ ಹೇಳಿದರು.
"ಸದ್ಯದಲ್ಲಿಯೇ ಇನ್ನೊಬ್ಬರಿಗೆ ಸ್ಥಾನ"
ಇದೇ ಸಂದರ್ಭದಲ್ಲಿ ಎಚ್.ವಿಶ್ವನಾಥ್ ಅವರಿಗೆ ಮೇಲ್ಮನೆ ಸ್ಥಾನ ಕೈ ಬಿಟ್ಟಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ಆರ್.ಶಂಕರ್, ಎಂಟಿಬಿ, ವಿಶ್ವನಾಥ್ ಮೂವರಿಗೂ ಮೇಲ್ಮನೆ ಸ್ಥಾನ ಸಿಗಲಿದೆ ಎಂಬ ಭರವಸೆಯಿತ್ತು. ಅದರಂತೀಗ ಇಬ್ಬರಿಗೆ ಸಿಕ್ಕಿದೆ. ಇನ್ನೂ ನಾಲ್ಕೈದು ಸ್ಥಾನಗಳಿವೆ. ಸದ್ಯದಲ್ಲಿಯೇ ಇನ್ನೊಬ್ಬರಿಗೂ ಕೊಡಬಹುದು ಎಂದು ಉತ್ತರಿಸಿದರು.