ಕರ್ತವ್ಯಲೋಪ: ಕೊಪ್ಪಳದಲ್ಲಿ 8 ಪಿಡಿಒಗಳ ಅಮಾನತು
ಕೊಪ್ಪಳ, ಏಪ್ರಿಲ್ 21: ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ಸಭೆಗೆ ಗೈರು ಹಾಜರಾದ 5 ಪಿಡಿಒಗಳು ಮತ್ತು ಹಣಕಾಸು ವಹಿವಾಟಿನಲ್ಲಿ ಕರ್ತವ್ಯ ಲೋಪ ಎಸಗಿದ ಓರ್ವ ಹಾಗೂ ಸರ್ಕಾರದ ಆದೇಶ ಪಾಲಿಸದ ಇಬ್ಬರು ಪಿಡಿಒ ಸೇರಿದಂತೆ ಎಂಟು ಪಿಡಿಒಗಳನ್ನು ಕೊಪ್ಪಳ ಜಿ.ಪಂ ಸಿಇಒ ರಘುನಂದನ್ ಮೂರ್ತಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಎರಡನೇ ಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಡಿಸಿ ಹಾಗೂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಗ್ರಾ.ಪಂ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.
ಈ ಪೈಕಿ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾ.ಪಂ ಪಿಡಿಒ ಬಸವರಾಜ ಕಿರ್ದಿ, ಇಂದರಗಿ ಗ್ರಾ.ಪಂನ ಬಿ.ಕೃಷ್ಣಾರಡ್ಡಿ, ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಪಿಡಿಒ ಜುಮಾಲ್ ಸಾಬ, ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾ.ಪಂ ಪಿಡಿಒ ಮಹೇಶಗೌಡ, ಕುಷ್ಟಗಿ ತಾಲೂಕಿನ ಕೇಸೂರು ಗ್ರಾ.ಪಂ ಪಿಡಿಒ ನಾಗರತ್ನಾ ಅವರು ಸಭೆಗೆ ಗೈರು ಹಾಜರಾಗಿ ನಿರ್ಲಕ್ಷ ತೋರಿದ್ದರು.
ಅಲ್ಲದೇ ಸಭೆಗೆ ಗೈರು ಹಾಜರಾದ ಕುರಿತಂತೆ ಸಿಇಒ ನೋಟಿಸ್ ನೀಡಿದ್ದರೂ ಅದಕ್ಕೆ ಸಮರ್ಪಕ ಉತ್ತರ ಕೊಡದ ಹಿನ್ನೆಲೆಯಲ್ಲಿ ಐವರನ್ನು ಕರ್ತವ್ಯ ನಿರ್ಲಕ್ಷತನ ತೋರಿ ಅಮಾನತು ಮಾಡಲಾಗಿದೆ.
ಇನ್ನು ಗ್ರಾ.ಪಂ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ಗ್ರಾ.ಪಂನಿಂದ 9 ಮತ್ತು 11 ಫಾರಂ ನೀಡದೇ ಸರ್ಕಾರದ ಕರ್ತವ್ಯದಲ್ಲಿ ಲೋಪ ಎಸಗಿದ ಕೊಪ್ಪಳ ತಾಲೂಕಿನ ಮತ್ತೂರು ಗ್ರಾ.ಪಂನ ಸೋಮಶೇಖರ, ಕರ್ತವ್ಯಕ್ಕೆ ಅನಧಿಕೃತ ಗೈರಾದ ಹಾಸಗಲ್ ಗ್ರಾ.ಪಂನ ಪ್ರಕಾಶ ಸಜ್ಜನ್ ಹಾಗೂ 14 ಮತ್ತು 15 ನೇ ಹಣಕಾಸು ಯೋಜನೆಯಡಿ ಹಣ ದುರುಪಯೋಗ ಮಾಡಿಕೊಂಡ ಅಗಳಕೇರಾ ಗ್ರಾ.ಪಂ ಈ ಹಿಂದಿನ ಪಿಡಿಒ ಆಗಿದ್ದ ಗೌಸುಸಾಬ ಮುಲ್ಲಾ ಅವರನ್ನು ಅಮಾನತು ಮಾಡಲಾಗಿದೆ.
Recommended Video
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8 ಪಿಡಿಒಗಳನ್ನು ಜಿ.ಪಂ ಸಿಇಒ ಅವರು ಅಮಾನತು ಮಾಡುವುದರ ಮೂಲಕ ನಿರ್ಲಕ್ಷ್ಯತನ ತೋರುವ ಅಧಿಕಾರಿಗಳ ಮೇಲೆ ಅಮಾನತಿನ ಅಸ್ತ್ರ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ.