ಕೊಪ್ಪಳ ಜಿಲ್ಲೆಗೆ 25 ವರ್ಷದ ಸಂಭ್ರಮ... ಅಭಿವೃದ್ಧಿಯ ನಿರೀಕ್ಷೆಯಲ್ಲಿ ಜನತೆ
ಕೊಪ್ಪಳ, ಆಗಸ್ಟ್ 25 : ಹೈದರಾಬಾದ್ ನಿಜಾಮರ ಸರ್ಕಾರದಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಕೊಪ್ಪಳ ಸ್ವಾತಂತ್ರ್ಯ ಭಾರತದಲ್ಲಿ ತಾಲೂಕು ಕೇಂದ್ರವಾಗಿತ್ತು. ಆದರೆ ಮತ್ತೆ ಜಿಲ್ಲೆಯಾಗಬೇಕೆಂಬ ನಿರಂತರ ಹೋರಾಟದ ಫಲವಾಗಿ ಕೊಪ್ಪಳ ಜಿಲ್ಲೆಯಾಗಿದೆ. ರಾಯಚೂರಿನಿಂದ ಬೇರ್ಪಟ್ಟು ಜಿಲ್ಲೆಯಾಗಿ ಆಗಸ್ಟ್ 24ಕ್ಕೆ 25 ವರ್ಷಗಳ ಪೂರ್ಣಗೊಂಡಿವೆ. ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ದಿಯಾಗಿಲ್ಲ. ಹೆಸರಿಗೆ ಜಿಲ್ಲೆಯಾಗಿದೆ. ಆದರೆ ಆರ್ಥಿಕ, ಸಾಮಾಜಿಕ ಸಬಲೀಕರಣವಾಗಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಐತಿಹಾಸಿಕ, ಧಾರ್ಮಿಕವಾಗಿ ಪ್ರಸಿದ್ದಿಯನ್ನು ಪಡೆದಿರುವ ಕೊಪ್ಪಳ ಜಿಲ್ಲೆಯು 1997 ಆಗಸ್ಟ್ 24 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರಿಂದ ಉದ್ಘಾಟನೆಗೊಂಡಿತು. ಅಂದರೆ, ಈಗ ಜಿಲ್ಲೆಯಾಗಿ ಕೊಪ್ಪಳಕ್ಕೆ 25 ವರ್ಷ. ಕೊಪ್ಪಳವು ಹೈದರಾಬಾದ್ ನಿಜಾಂ ಸರಕಾರದಲ್ಲಿ ಕೊಪ್ಪಳ ಹಾಗು ಯಲಬುರ್ಗಾ ತಾಲೂಕುಗಳನ್ನೊಳಗೊಂಡು ಜಿಲ್ಲಾ ಕೇಂದ್ರವಾಗಿತ್ತು.
ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ
ಆದರೆ ಸ್ವಾತಂತ್ರ್ಯ ಭಾರತದಲ್ಲಿ ಕೊಪ್ಪಳವನ್ನು ರಾಯಚೂರು ಜಿಲ್ಲೆಯ ತಾಲೂಕು ಕೇಂದ್ರವನ್ನಾಗಿ ಮಾಡಿಲಾಗಿತ್ತು. ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕಿನಿಂದ ರಾಯಚೂರಿಗೆ ಸುಮಾರು 200 ಕಿಮೀ ದೂರವಿತ್ತು. ಅಲ್ಲದೆ ಆಗ ಸಂಪರ್ಕ ವ್ಯವಸ್ಥೆಯು ಸರಿ ಇರಲಿಲ್ಲ. ಇದರಿಂದಾಗಿ ಈ ಭಾಗದ ಜನರು ರಾಯಚೂರಿಗೆ ಹೋಗಿ ಬರಲು ಪರದಾಡುವಂತಾಗಿತ್ತು. ಒಂದು ವೇಳೆ ಅಧಿಕಾರಿಗಳು ಸಿಗಲಿಲ್ಲವಾದರೆ ವಾಪಸ್ ಬರಿಗೈಯಲ್ಲಿ ಬರಬೇಕಿತ್ತು.
ಈ ಮಧ್ಯೆ ಜಿಲ್ಲೆಗಳ ರಚನೆಗಾಗಿ ರಾಜ್ಯ ಸರಕಾರ ಹುಂಡೇಕಾರ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ಕೊಪ್ಪಳ ಜಿಲ್ಲೆಯಾಗಬೇಕೆಂದು ಮನವಿ ಸಲ್ಲಿಸಿದ್ದರೂ, ಸಮಿತಿ ಗಮನ ಹರಿಸಿರಲಿಲ್ಲ. ಪಿ.ಸಿ ಗದ್ದಿಗೌಡರ ನೇತೃತ್ವದಲ್ಲಿ ಮತ್ತೊಂದು ಸಮಿತಿಯಲ್ಲಿ ಮೊದಲು ಕೊಪ್ಪಳವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಪ್ರಸ್ತಾಪಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಜಿಲ್ಲೆಯ ಜನತೆ ನಿರಂತರ ಹೋರಾಟ ಮಾಡಲಾಯಿತು. ಈ ಹೋರಾಟವು ಒಂದೆರಡು ಬಾರಿ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿತ್ತು. ಹೋರಾಟದ ಫಲವಾಗಿ ಕೊಪ್ಪಳವನ್ನು ಜಿಲ್ಲಾ ಕೇಂದ್ರವಾಗಿ ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲ ಘೋಷಣೆ ಮಾಡಿ ಉದ್ಘಾಟಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ರೋಪ್ವೇ: ಎರಡು ತಿಂಗಳಲ್ಲಿ ಟೆಂಡರ್ ಪೂರ್ಣಗೊಳಿಸಲು ಸೂಚನೆ
ಕೊಪ್ಪಳ, ಕುಷ್ಟಗಿ. ಗಂಗಾವತಿ ಯಲಬುರ್ಗಾ ನಾಲ್ಕು ಹೊಂದಿದ್ದ ಕೊಪ್ಪಳ ಜಿಲ್ಲೆಯಲ್ಲಿ ಈಗ ಮತ್ತೆ ಮೂರು ತಾಲೂಕುಗಳಾಗಿ ಕಾರಟಗಿ. ಕನಕಗಿರಿ ಹಾಗೂ ಕುಕನೂರು ರಚನೆಯಾಗಿ ಒಟ್ಟು 7 ತಾಲೂಕುಗಳ ಹೊಂದಿರುವ ಜಿಲ್ಲೆಯನ್ನಾಗಿ ಮಾಡಲಾಯಿತು.
ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಕನಸು ಮೊದಲಿನಿಂದಲೂ ಇದೆ. ಇಲ್ಲಿ ಈಗ ತುಂಗಭದ್ರಾ ಜಲಾಶಯದಿಂದ ಶೇ 30 ರಷ್ಟು ಮಾತ್ರ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಈ ಮಧ್ಯೆ ಕೃಷ್ಣಾ ಬಿ ಸ್ಕೀಂ ನಿಂದ ಜಿಲ್ಲೆಯಲ್ಲಿ 2.27 ಲಕ್ಷ ಎಕರೆ ಹಾಗು ಸಿಂಗಟಾಲೂರು ಏತ ನೀರಾವರಿಯಿಂದ 1.17 ಲಕ್ಷ ಎಕರೆ ನೀರಾವರಿಯಾಗಬೇಕು. ಆದರೆ ಈ ಯೋಜನೆಗಳು ದಶಕಗಳು ಕಳೆದರೂ ಆರಂಭವಾಗಿಲ್ಲ. ಇದರಿಂದಾಗಿ ಕೊಪ್ಪಳ ಜಿಲ್ಲೆಯು ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರ ಬಂದಿಲ್ಲ. ರಜತ ಮಹೋತ್ಸವದ ಸಂಭ್ರಮದಲ್ಲಿರುವ ಜಿಲ್ಲೆ ಇನ್ನು ಮುಂದಾದರೂ ಅಭಿವೃದ್ಧಿಯತ್ತಾ ಸಾಗುವ ಅಗತ್ಯವಿದೆ.
ಜಿಲ್ಲೆಯ ವಿವರ
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿ, ಕುಕನೂರ, ಕುಷ್ಟಗಿ, ಯಲಬುರ್ಗಾ. ಜಿಲ್ಲೆಯಲ್ಲಿ ಎರಡು ನಗರ ಸಭೆ, ಎರಡು ಪುರಸಭೆ, ಹಾಗೂ 5 ಪಟ್ಟಣ ಪಂಚಾಯಿತಿ ಹಾಗೂ ಒಟ್ಟು 629 ಹಳ್ಳಿಗಳಿವೆ. ಒಟ್ಟು ಜನಸಂಖ್ಯೆ 13,89,920.
ಕೊಪ್ಪಳದ ಕೋಟೆ, ಪಂಪಾ ಸರೋವರ, ಚಿಂತಾಮಣಿ ದೇವಾಸ್ಥಾನ ಆನೆಗುಂದಿ, ನವ ಬೃಂದಾವನ, ಕೃಷ್ಣ ದೇವರಾಯ ಸಮಾಧಿ, ಅಂಜನಾದ್ರಿ ಪರ್ವತ, ಹುಲಿಗೆಮ್ಮಾ ದೇವಾಲಯ, ಮಹಾದೇವ ದೇವಾಲಯ, ಕನಕಾಚಲಪತಿ ದೇವಾಲಯ ಇಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.
ಹೊಸ ತಾಲೂಕುಗಳಿಗೆ ಸ್ವಂತ ಕಚೇರಿಗಳಿಲ್ಲ
ಜಿಲ್ಲೆಯ ಆಡಳಿತದ ದೃಷ್ಟಿಯಿಂದ ನಾಲ್ಕು ವರ್ಷಗಳ ಹಿಂದೆ ಕನಕಗಿರಿ, ಕಾರಟಗಿ ಮತ್ತು ಕುಕನೂರುಗಳು ಮೂರು ಹೊಸ ತಾಲೂಕುಗಳಾಗಿ ಘೋಷಿಸಲಾಗಿದೆ. ಆದರೆ ಈ ತಾಲೂಕುಗಳಲ್ಲಿ ಈಗಲೂ ಹಲವು ಸರಕಾರಿ ಸಂಸ್ಥೆಗಳಿಗೆ ಸ್ವಂತ ಕಚೇರಿಗಳಿಲ್ಲ. ತೋಟಗಾರಿಕೆ, ಕೃಷಿ, ಉಪನೋಂದಣಿ ಹಾಗೂ ಇತರೆ ಕಚೇರಿಗಳು ಆರಂಭವಾಗದ ಕಾರಣ ಇನ್ನೂ ಇಲ್ಲಿನ ಜನತೆ ಗಂಗಾವತಿಗೆ ತೆರಳುತ್ತಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ.
ವಿಶ್ವವಿದ್ಯಾಲಯ ಬೇಕೆಂಬ ಬೇಡಿಕೆ
ಶೈಕ್ಷಣಿಕವಾಗಿಯೂ ತೀರಾ ಹಿಂದುಳಿದಿರುವ ಜಿಲ್ಲೆಯಲ್ಲಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯವಿದೆ, ಆದರೆ ಜಿಲ್ಲಾಸ್ಪತ್ರೆಯಲ್ಲಿರಬೇಕಾದ ಸೌಲಭ್ಯಗಳಿಲ್ಲ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇಲ್ಲಿಯ ಜನ ಆರೋಗ್ಯ ಸೇವೆಗಾಗಿ ಗದಗ ಹಾಗೂ ಹುಬ್ಬಳ್ಳಿಯನ್ನು ಆಶ್ರಯಿಸಬೇಕಾಗಿದೆ. ಇಲ್ಲಿಇಂಜಿನಿಯರಿಂಗ್ ಕಾಲೇಜುಗಳ ಆರಂಭವಾಗಿವೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯವಿಲ್ಲ. ಕೊಪ್ಪಳಕ್ಕೊಂದು ವಿಶ್ವವಿದ್ಯಾಲಯ ಬೇಕೆಂಬ ಬೇಡಿಕೆ ಇನ್ನೂ ಹಾಗೆಯೇ ಉಳಿದಿದೆ. ಇನ್ನು ಕೆಲವೊಂದು ಊರುಗಳಲ್ಲಿ ಮಕ್ಕಳು ಶಾಲೆಗಳಿಗೆ ಕಿಲೋ ಮೀಟರ್ಗಟ್ಟಲೆ ನಡೆದು ಹೋಗುವ ಸ್ಥಿತಿಯಿದೆ. ಸಾರಿಗೆ ವ್ಯವಸ್ಥೆ ಅಷ್ಟಕ್ಕಷ್ಟೇ. ಇನ್ನು ಗ್ರಾಮಾಂತರ ಪ್ರದೇಶಗಳಿಗೆ ಉತ್ತಮ ರಸ್ತೆ, ಶಾಲಾ ಕಟ್ಟಡಗಳು ನಿರ್ಮಾಣ ಮಾಡುವ ಅಗತ್ಯವಿದೆ. ಗ್ರಾಮಂತರ ಪ್ರದೇಶಕ್ಕೆ ವೈದ್ಯಕೀಯ ಸೌಲಭ್ಯ ವಿಸ್ತರಿಸಬೇಕಾಗಿದೆ.
ನಿರುದ್ಯೋಗ ತಾಂಡವ
ಜಿಲ್ಲೆಯಲ್ಲಿ ಬೃಹತ್ ಉಕ್ಕು ಕಾರ್ಖಾನೆಗಳು ಬಂದಿವೆ, ಆದರೆ ಅಲ್ಲಿ ಸ್ಥಳೀಯರಿಗೆ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ, ಕೇವಲ ಜಿಲ್ಲೆಯಾಗಿ ಕಚೇರಿಗಳು ಆರಂಭವಾದರೆ ಮಾತ್ರ ಸಾಲದು ಮೂಲಭೂತ ಸೌಲಭ್ಯಗಳ ದೊರೆಕಿಸಿಕೊಡಬೇಕು. ಇನ್ನು ಜಿಲ್ಲೆಯಾಗಿ 25 ವರ್ಷವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಕನಿಷ್ಠ ಒಂದು ಕಾರ್ಯಕ್ರಮವನ್ನು ಸಹ ಆಯೋಜಿಸಿಲ್ಲ ಎಂದು ಕೊಪ್ಪಳದ ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಪ್ರವಾಸೋಧ್ಯಮಕ್ಕೆ ಹೊಸ ಆಯಾಮ
ಅಭಿವೃದ್ಧಿ ವಂಚಿತವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡೆಸಲು ಸರಕಾರ ಮುಂದಾಗಿದೆ. ಈ ಮೂಲಕ ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಈ ಬಾರಿ ಬಜೆಟ್ನಲ್ಲಿ 100 ಕೋಟಿ ರೂ ಬಿಡುಗಡೆ ಮಾಡಿದೆ. ಅತಿಥಿ ಗೃಹಗಳು, ರೋಪ್ ವೇ, ಹಾಗೂ ಅಂಜನಾದ್ರಿ ಸುತ್ತಮುತ್ತಲಿನ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ಬೊಮ್ಮಾಯಿ ಸರಕಾರ ನಿರ್ಧರಿಸಿದೆ. ಇದು ಕೊಂಚ ಮಟ್ಟಿಗೆ ಕೊಪ್ಪಳ ಜಿಲ್ಲೆಯನ್ನು ಅಭಿವೃದ್ಧಿ ಪತದತ್ತ ಕೊಂಡಯ್ಯಲು ನೆರವಾಗಬಹುದು ಎನ್ನಲಾಗುತ್ತಿದೆ.