ಆತ್ಮಹತ್ಯೆ ಮಾಡಿಕೊಂಡಿದ್ದ ದಿನಗೂಲಿ ನೌಕರನ ಕುಟುಂಬಕ್ಕೆ ದಿನಗೂಲಿ ನೌಕರರ ಸಂಘದಿಂದ ಸಹಾಯಧನ
ಕೊಪ್ಪಳ, ಜನವರಿ 25: ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರನ ಕುಟುಂಬಕ್ಕೆ ಕರ್ನಾಟಕ ಸರ್ಕಾರಿ ದಿನಗೂಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಹಾಯ ಧನ ನೀಡಲಾಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ನೌಕರರಾದ ಟಿ. ಮಲ್ಲಿಕಾರ್ಜುನ ಇವರು ಮುಂದಿನ ನಿವೃತ್ತಿ ಜೀವನದ ಬಗ್ಗೆ ಹಾಗೂ ಕುಟುಂಬ ನಿರ್ವಹಣೆಯ ಬಗ್ಗೆ ಆತಂಕಗೊಂಡು ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಡೆತ್ ನೋಟ್ ಬರೆದು, ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರನ್ನು ಖಾಯಂಗೊಳಿಸುವಂತೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ನೀಡುವಂತೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಿ ದಿನಗೂಲಿ ನೌಕರರ ಮನವಿಗೆ ಸ್ಪಂದಿಸಿದ ಸಿಎಸ್ ರವಿಕುಮಾರ್
ಮೃತ ನೌಕರನ ಕುಟುಂಬದ ಮುಂದಿನ ಜೀವನ ನಿರ್ವಹಣೆಯ ಸಲುವಾಗಿ ಆ ಕುಂಟುಂಬಕ್ಕೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಿ ನ್ಯಾಯ ದೊರಕಿಸಿಕೊಡಲು ನೌಕರರ ಸಂಘದ ಪರವಾಗಿ ವಿನಂತಿಸಲಾಗಿದೆ. ಇದೇ ವೇಳೆ ಮೃತ ನೌಕರರ ಮನೆಗೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸಂಘದ ಪರವಾಗಿ 25,000 ರೂ.ಗಳನ್ನು ನೀಡಲಾಯಿತು.
Recommended Video
ದಿನಗೂಲಿ ನೌಕರರನ್ನು ಖಾಯಂಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಜನವರಿ 19, 2021 ರಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ಕೋಳಿ, ಕಾರ್ಯಾಧ್ಯಕ್ಷರು ಶೇಖ ಅಲಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಇವರುಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿತ್ತು.