ಪ್ರಜಾತಂತ್ರದ ಕಲ್ಪನೆ ಹುಟ್ಟು ಹಾಕಿದವರು ಬಸವಣ್ಣ : ಸಿದ್ದರಾಮಯ್ಯ
ಕೊಪ್ಪಳ, ಮಾರ್ಚ್ 20 : 'ನಮ್ಮ ನಾಡಿನಲ್ಲಿ 850 ವರ್ಷಗಳ ಹಿಂದೆಯೇ ಬಸವಾದಿ ಶರಣರು, ಸಾಮಾಜಿಕ ಅವ್ಯವಸ್ಥೆ, ಸಾಮಾಜಿಕ, ಆರ್ಥಿಕ ಅಸಮಾನತೆ, ಕಂದಾಚಾರಗಳ ಬದಲಾವಣೆಗಾಗಿ 12ನೇ ಶತಮಾನದಲ್ಲಿ ದೊಡ್ಡ ಕ್ರಾಂತಿ ಮಾಡಿದರು. ಪ್ರಜಾತಂತ್ರದ ಕಲ್ಪನೆಯನ್ನು ಹುಟ್ಟುಹಾಕಿದವರು ಬಸವಣ್ಣನವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಸಂಜೆ ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನ
'ಹನ್ನೆರಡನೆ ಶತಮಾನದಲ್ಲಿ ಬಸವಾದಿ ಶರಣರು ನಮ್ಮ ಸಾಮಾಜಿಕ ಅವ್ಯವಸ್ಥೆ, ಅಸಮಾನತೆ, ಆರ್ಥಿಕ ಅಸಮಾನತೆ, ಮೌಢ್ಯ ಕಂದಾಚಾರಗಳನ್ನು ತೊಡೆದುಹಾಕಿ ವ್ಯವಸ್ಥೆಯ ಬದಲಾವಣೆ ಸಲುವಾಗಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದರು' ಎಂದು ಸಿದ್ದರಾಮಯ್ಯ ಬಣ್ಣಿಸಿದರು'.
'ಶ್ರೀಮಂತ, ಬಡವ, ಮೇಲ್ಜಾತಿ, ಕೆಳ ಜಾತಿ, ಪುರುಷ ಮಹಿಳೆ ಎಂಬ ದೊಡ್ಡ ಕಂದಕ ಏರ್ಪಟ್ಟಿತ್ತು. ಈ ಕಂದಕ ತೊಡೆದುಹಾಕಿ, ಸಾಮಾಜಿಕ ಸಮಾನತೆ ನಿರ್ಮಾಣಗೊಂಡರೆ ಮನುಕುಲ ಉದ್ಧಾರವಾದೀತು. ಧರ್ಮ, ಜಾತಿ ಹೆಸರಿನಲ್ಲಿ ಮನುಷ್ಯರನ್ನು ವಿಭಜನೆ ಮಾಡಬಾರದು. ಮನುಕುಲ ಎಂದರೆ ಎಲ್ಲರೂ ಒಂದೆ' ಎಂದರು.
ಕ್ರಾಂತಿಯೋಗಿ ಅಣ್ಣ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ?
'ಸಮಾಜದಲ್ಲಿ ಶ್ರಮವಹಿಸಿ ದುಡಿಯುವುದು ಒಂದು ವರ್ಗವಾದರೆ, ಬೆವರು ಸುರಿಸದೆ ಕುಳಿತು ತಿನ್ನುವುದು ಇನ್ನೊಂದು ವರ್ಗ. ಇದನ್ನ ಹೋಗಲಾಡಿಸಲು ಬಸವೇಶ್ವರರು ಶ್ರಮಿಸಿದರು. ಪ್ರತಿಭೆ ಆಧಾರದಲ್ಲಿ ಮನುಷ್ಯನನ್ನು ಅಳೆಯಬೇಕೇ ಹೊರತು ಜಾತಿಯಿಂದಲ್ಲ. ಪ್ರತಿಯೊಬ್ಬರು ದುಡಿಯಬೇಕು. ಬಳಿಕ ಸಮನಾಗಿ ಹಂಚಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಕೊಪ್ಪಳ: ಸಿಎಂ ವಿರುದ್ಧ ಬಿಜೆಪಿಯ ಪ್ರತಿಭಟನೆಗೆ ಪೊಲೀಸರ ಅಡ್ಡಗಾಲು
'ಕೊಪ್ಪಳ ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗಿದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಇಚ್ಛಾಶಕ್ತಿಯ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಯೋಜನೆಗಳು ಕ್ಷೇತ್ರದಲ್ಲಿ ಜಾರಿಗೆ ಬಂದಿವೆ' ಎಂದು ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು 36 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿದ್ದು, ಅದನ್ನು ಅನಾವರಣಗೊಳಿಸಲಾಗಿದೆ. ಶೀಘ್ರದಲ್ಲಿಯೇ ಕನಕದಾಸರ ಪುತ್ಥಳಿಯನ್ನು ಕೂಡ ಪ್ರತಿಷ್ಠಾಪಿಸಲಾಗುತ್ತದೆ.
ಸಮಾರಂಭದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಬಳಗಾನೂರು ಶಿವಶಾಂತವೀರ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ, ಕನಕಗಿರಿ ಶಾಸಕ ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.