ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ
ಕೊಪ್ಪಳ, ಜುಲೈ 31 : ಪ್ರವೀಣ ನೆಟ್ಟಾರು ಕೊಲೆ ಪ್ರಕರಣದಿಂದ ಬಿಜೆಪಿ ಕಾರ್ಯಕರ್ತರು ಸ್ವಪಕ್ಷದ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದರಿಂದ ವಿಚಲಿತರಾಗಿರುವ ಸಿಎಂ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಿಎಂ ಅಂಜನಾದ್ರಿ ಬೆಟ್ಟಕ್ಕೆ ದಿಢೀರ್ ಭೇಟಿಗೆ ಮುಂದಾಗಿದ್ದಾರೆ. ಸಿಎಂ ಪ್ರವಾಸ ಹಿಂದೂ ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರ ಸಿಟ್ಟು ತಣಿಸಲು ಎಂದೇ ವಿಶ್ಲೇಷಿಸಲಾಗುತ್ತಿದ್ದು, ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಸಿದ್ದರಾಮೋತ್ಸವಕ್ಕೆ 495 ಬಸ್, 600 ಇತರ ವಾಹನಗಳ ವ್ಯವಸ್ಥೆ!
ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ಹಿನ್ನೆಲೆ ರಾಜ್ಯ ಸರ್ಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಈ ಎಲ್ಲಾ ಗದ್ದಲಗಳ ನಡುವೆ ಸಿಎಂ ಬಸವರಾಜ ಬೊಮ್ಮಾಯಿ, ಏಕಾಏಕಿ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಭೇಟಿ ನೀಡಿ, ಅಭಿವೃದ್ಧಿ ಕುರಿತು ಚರ್ಚಿಸಲು ಮುಂದಾಗಿದ್ದಾರೆ. ಆಗಸ್ಟ್ 1 ರಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಭೇಟಿ ನೀಡುವುದು ಖಚಿತವಾಗಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ಸಿದ್ದತೆ ನಡೆಯುತ್ತಿದೆ.
ಆಗಸ್ಟ್ 1ರ ಮಧ್ಯಾಹ್ನ 12ಕ್ಕೆ ಗಂಗಾವತಿ ತಾಲೂಕು ಆನೆಗೊಂದಿ ಬಳಿಯ ಹೆಲಿಪ್ಯಾಡ್ಗೆ ಬಂದಿಳಿಯುವ ಸಿಎಂ, ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶವನ್ನು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ಮಂಡಿ ನೋವಿನ ಹಿನ್ನೆಲೆಯಲ್ಲಿ ಸಿಎಂ ಬೆಟ್ಟ ಏರುತ್ತಿಲ್ಲ. ಬದಲಾಗಿ ಬೆಟ್ಟದ ಕೆಳಗೆಯೇ ಆಂಜನೇಯಮ ದರ್ಶನ ಪಡೆದು, ಅಧಿಕಾರಿಗಳ ಜೊತೆಗೆ ಅಂಜನಾದ್ರಿ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. ನಂತರ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ, ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆಯಲಿದ್ದಾರೆ.
ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ.
ಕಳೆದ ಮೂರು ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಬಗ್ಗೆ ಪ್ರಸ್ತಾಪಿಸಿದ್ದರು. ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದಾಗಿ ಘೋಷಿಸುವ ಮೂಲಕ ಈ ಬಾರಿಯ ಎಲೆಕ್ಷನ್ ಅಜೆಂಡಾವೇ ರಾಮ ಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಎಂಬುದನ್ನ ಸೂಚ್ಯವಾಗಿ ಹೇಳಿದ್ದರು. ಆ ನಂತರ ಸಾಕಷ್ಟು ಬಾರಿ ಸಿಎಂ ಬರುತ್ತಾರೆ ಎಂಬ ಮಾತು ಸುಳ್ಳಾಗಿದ್ದವು. ಬದಲಾಗಿ ರಾಜ್ಯ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಸೋಮವಾರ ಸಿಎಂ ಅಂಜನಾದ್ರಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಪೊಲೀಸರ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದೆ.
2.91 ಲಕ್ಷ ಹಣ ಹಿಂತಿರುಗಿಸಿದ ಭಕ್ತ; ಲಾಡು ಜೊತೆ ಹೋಗಿದ್ದ ದುಡ್ಡು ವಾಪಾಸ್!
ಹೆಲಿಪ್ಯಾಡ್ ನಿರ್ಮಾಣ
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಭೇಟಿ ನೀಡಿಲಿರುವ ಹಿನ್ನಲೆಯಲ್ಲಿ ಆನೆಗೊಂದಿ ಉತ್ಸವ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಜೆಸಿಬಿ, ರೋಲರ್, ಮೋಟರ್ ಗಾರ್ಡರ್ ಮೂಲಕ ಕಾಮಗಾರಿ ನಡೆಸಲಾಗಿದೆ. ತಾಲ್ಲೂಕು ಆಡಳಿತ ಒಂದೊಂದು ಇಲಾಖೆಗೆ ಒಂದೊಂದು ಜವಾಬ್ದಾರಿ ನೀಡಿದ್ದು, ಅದರಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈದಾನದಲ್ಲಿ ಹೆಲಿಪ್ಯಾಡ್ ಸ್ಥಳ ಗುರುತಿಸಿ, ಕೇಂದ್ರ ಬಿಂದು ರಚನೆ ಮಾಡಿ, ಮಣ್ಣುತೆಗೆದು, ಮಾರ್ಕ್ ಹಾಕಿ, ಎಚ್. ಪಾರ್ಕ್ ನಿರ್ಮಿಸುವ ಕೆಲಸ ನಡೆದಿದೆ. ಜೊತೆಗೆ ಸಿಎಂ ಸಂಚರಿಸುವ ರಸ್ತೆಯ ರಿಪೇರಿ ಕಾರ್ಯಗಳನ್ನು ನಡೆಸಲಾಗುತ್ತಿದೆ.
ರೋಪ್ ವೇ ನಿರ್ಮಾಣಕ್ಕೆ ಚಿಂತನೆ
ಅಂಜನಾದ್ರಿ ಬೆಟ್ಟ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನ್ಕಕೆ ಹೆಚ್ಚುತ್ತಿರುವುದರಿಂದ ಬಿಜೆಪಿ ಸರಕಾರ ಅಂಜನಾದ್ರಿ ಬೆಟ್ಟವನ್ನು ಪ್ರವಾಸಿತಾಣವಾಗಿಸಲು ಮತ್ತು ಆಧ್ಯಾತ್ಮದ ಕೇಂದ್ರವಾಗಿಸಲು ನೀಲನಕ್ಷೆ ರೂಪಿಸಿದೆ. ಅಂಜನಾದ್ರಿಯ ಕೆಳಗಡೆ ಮತ್ತು ಸುತ್ತಲಿನ ಭೂಮಿಯನ್ನು ರೈತರಿಂದ ವಶಕ್ಕೆ ಪಡೆದು ವಸತಿಗೃಹ, ಅತಿಥಿಗೃಹ, ಶುದ್ಧಕುಡಿಯುವ ನೀರು, ಸಾಮೂಹಿಕ ಶೌಚಾಲಯ ಮತ್ತು ಬೆಟ್ಟ ಹತ್ತಲು ಅನುಕೂಲವಾಗಲು ರೋಪ್ ವೇ, ಹಾಗೂ ಉತ್ತಮ ರಸ್ತೆಯನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಅದಕ್ಕಾಗಿ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ.
ವೀಕೆಂಡ್ನಲ್ಲಿ 25 ಸಾವಿರ ಪ್ರವಾಸಿಗರ ಭೇಟಿ
ಪ್ರತಿದಿನ ಸುಮಾರು 5 ಸಾವಿರ ಭಕ್ತರು ಹಾಗೂ ಪ್ರವಾಸಿಗರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದ ರಜೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಆಂಜನೇಯ ಜಯಂತಿ ಹಾಗೂ ಇತರೆ ವಿಶೇಷ ಹಬ್ಬ-ಹರಿದಿನಗಳಲ್ಲಿ 50 ಸಾವಿರದಿಂದ ಲಕ್ಷ ಜನ ಭೇಟಿ ನೀಡುತ್ತಾರೆ. ಇದೇ ಕಾರಣಕ್ಕಾಗಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಕೆಲವು ರೈತರು ಕೂಡ ಜಮೀನು ನೀಡಲು ಮುಂದೆ ಬಂದಿದ್ದಾರೆ. ಪ್ರತಿ ಎಕರೆಗೆ .42 ಲಕ್ಷ ಪರಿಹಾರ ನೋಡುವ ಬಗ್ಗೆ ಚಿಂತನೆ ನಡೆದಿದೆ. ಒಂದು ವೇಳೇ ರೈತರು ಇದಕ್ಕೆ ಒಪ್ಪಿಗೆ ನೀಡದೆ ಹೆಚ್ಚಿನ ಹಣಕ್ಕೆ ಭೇಟಿ ನೀಡಿದರೆ, ಅದರ ಬಗ್ಗೆ ಸಿಎಂ ಭೇಟಿ ವೇಳೆ ಚರ್ಚಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.