ಸಂಪುಟ ವಿಸ್ತರಣೆ: ಇದ್ದಿದ್ದನ್ನು ಇದ್ದಂಗೆ ಒಪ್ಪಿಕೊಂಡ ಸಿಎಂ ಯಡಿಯೂರಪ್ಪ
ಕೊಪ್ಪಳ, ಜ 9: ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಮತ್ತೆ ತಮ್ಮ ಹಿಂದಿನ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪುನರಾವರ್ತಿಸಿದ್ದಾರೆ. ಜೊತೆಗೆ, ತಮ್ಮಿಂದ ದೃಢವಾದ ನಿಲುವನ್ನು ತಾಳಲು ಸಾಧ್ಯವಾಗಲಿಲ್ಲ ಎಂದೂ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ನನ್ನದೇನೂ ಇಲ್ಲಾ. ವರಿಷ್ಠರಿಂದ ಯಾವ ರೀತಿಯ ಆದೇಶ ಬರುತ್ತೋ ಹಾಗೇ ಮಾಡುತ್ತೇನೆ"ಎಂದು ಚೆಂಡನ್ನು ಹೈಕಮಾಂಡ್ ಅಂಗಣಕ್ಕೆ ಎಸೆದಿದ್ದಾರೆ.
ಸಂಪುಟ ವಿಸ್ತರಣೆ: ಬಿಎಸ್ವೈ ಮೇಲೆ ಇನ್ನೂ ಬಿಜೆಪಿ ವರಿಷ್ಠರ ಮೂಗುದಾರ?
"ನಾನು ಕೂಡಾ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಹಲವಾರು ಕಾರಣಗಳಿವೆ. ಕೊರೊನಾ, ಅತಿವೃಷ್ಟಿ, ಬಜೆಟ್ ನಲ್ಲಾದ ಖೋತಾದಿಂದಾಗಿ ನಾನು ಏನು ಗುರಿಯನ್ನು ಇಟ್ಟುಕೊಂಡಿದ್ದೇನೋ ಆ ರೀತಿ ಕಾರ್ಯಭಾರ ಮಾಡಲು ಆಗಲಿಲ್ಲ"ಎಂದು ಹೇಳಿದರು.
"ರಾಜ್ಯದ ಬಿಜೆಪಿ ಮುಖಂಡರು ಯುವರಾಜಸ್ವಾಮಿ ಜೊತೆಗೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ತಪ್ಪೇನಿದೆ. ಆತನ ವಿರುದ್ದದ ಪ್ರಕರಣ ತನಿಖೆಯಲ್ಲಿದೆ, ಹಾಗಾಗಿ ಈ ವಿಚಾರದ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ"ಎಂದು ಯಡಿಯೂರಪ್ಪ ಹೇಳಿದರು.
ರೈತರಿಗೆ 'ಸ್ವಾಭಿಮಾನಿ ರೈತ' ಗುರುತಿನ ಚೀಟಿಯನ್ನು ವಿತರಿಸುವ ಯೋಜನೆ ಮತ್ತು ಕೃಷಿ ಸಂಜೀವಿನಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಮಾತನಾಡಿದ ಯಡಿಯೂರಪ್ಪ, "ಅನ್ನದಾತ ರೈತರ ಏಳಿಗೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ರೈತರಿಗೆ ನೆರವಾಗುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ"ಎಂದು ಹೇಳಿದರು.
"ಆಟಿಕೆ ತಯಾರಿಕೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಕೊಪ್ಪಳದಲ್ಲಿ ಆಟಿಕೆ ಉದ್ಯಮಕ್ಕೆ ಸಮಗ್ರ ಪ್ರೋತ್ಸಾಹ ನೀಡುವ ದೇಶದ ಮೊದಲ ಆಟಿಕೆ ಕ್ಲಸ್ಟರ್ ಗೆ ಇಂದು ಭೂಮಿಪೂಜೆ ನೆರವೇರಿಸುತ್ತಿದ್ದೇನೆ. ಉದ್ಯಮ ಹಾಗೂ ಕೌಶಲ್ಯ ವೃದ್ಧಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಮೂಲಕ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಉದ್ದೇಶ"ಎಂದು ಸಿಎಂ ಬಿಎಸ್ವೈ ಹೇಳಿದರು.