ವಿಡಿಯೋ: ಗೃಹಪ್ರವೇಶದ ದಿನವೇ ಮನೆಗೆ ಬಂತು ಪತ್ನಿಯ ಪ್ರತಿಮೆ!
ಕೊಪ್ಪಳ, ಆಗಸ್ಟ್.11: ಮನೆ ಕಟ್ಟಬೇಕೆಂಬ ಆ ದಂಪತಿಯ ಕನಸಿಗೆ ಅಂದು ರೆಕ್ಕೆಪುಕ್ಕ ಬಂದಿತ್ತು. ಅಂದುಕೊಂಡಂತೆ ನೆತ್ತಿ ಮೇಲೆ ಸೂರು ನಿರ್ಮಿಸುವುದಕ್ಕೆ ಭೂಮಿ ಪೂಜೆಯೂ ನೆರವೇರಿತು. ಆದರೆ ಮನೆಯಲ್ಲಿ ಬಾಳಿ ಬದುಕಬೇಕಿದ್ದ ಮನೆಯ ಒಡತಿ ಇಂದು ಅದೇ ಹೊಸ ಮನೆಯಲ್ಲೇ ಪ್ರತಿಮೆಯ ರೂಪವನ್ನು ತೆಳೆದಿದ್ದಾರೆ.
Recommended Video
ಅಚ್ಚರಿ ಎನಿಸಿದರೂ ಇದೊಂದು ಸತ್ಯ ಘಟನೆ. ಕೊಪ್ಪಳದ ಭಾಗ್ಯ ನಗರದಲ್ಲಿ ನಿರ್ಮಾಣವಾಗಿರುವ ಮನೆಯಲ್ಲಿನ ಒಂದೇ ಒಂದು ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಪತ್ನಿಯ ಸಿಲಿಕಾನ್ ಪ್ರತಿಮೆ ನಿರ್ಮಿಸಿ ಮನೆಗೆ ತಂದ ಪತಿ ಇದೀಗ ಸಾಕಷ್ಟು ಸುದ್ದಿಯಾಗಿದ್ದಾರೆ.
ಪತ್ನಿಗೆ ಕೊರೊನಾವೈರಸ್, ಪ್ರೀತಿಸಿ ಮದುವೆಯಾದ ಪತಿರಾಯ ಜೂಟ್!
ಕೊಪ್ಪಳದ ಭಾಗ್ಯ ನಗರದಲ್ಲಿರುವ ಉದ್ಯಮಿ ಶ್ರೀನಿವಾಸ್ ಗುಪ್ತಾ ತಮ್ಮ ಮನೆಯ ಗೃಹ ಪ್ರವೇಶದ ದಿನವೇ ಪತ್ನಿಯ ಬೃಹತ್ ಪ್ರತಿಮೆಯನ್ನು ಮಾಡಿಸಿದ್ದಾರೆ. ತಂದೆಯ ಕಾರ್ಯವನ್ನು ಮಕ್ಕಳು ಸಹ ಮೆಚ್ಚಿಕೊಂಡಿದ್ದಾರೆ. ಪತ್ನಿಯ ಪ್ರತಿಮೆ ನಿರ್ಮಾಣಕ್ಕೆ ಕಾರಣ ಏನು ಎನ್ನುವುದರ ಕುರಿತು ವಿಸ್ತೃತ ವರದಿ ಇಲ್ಲಿದೆ ನೋಡಿ.
ಸೂರು ಕಟ್ಟಿಕೊಳ್ಳುವ ಕನಸು ಕಟ್ಟಿದ್ದ ದಂಪತಿ
ಮೂರು ವರ್ಷಗಳ ಹಿಂದೆಯೇ ಉದ್ಯಮಿ ಶ್ರೀನಿವಾಸ್ ಗುಪ್ತಾ ಮತ್ತು ಪತ್ನಿ ಮಾಧವಿ ಅವರು ಮನೆ ನಿರ್ಮಾಣದ ಕನಸು ಕಂಡಿದ್ದರು. ಮನೆ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲೇ ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರಿಗೆ ಆಘಾತವೊಂದು ಕಾದಿದ್ದು, ಪತ್ನಿ ಸಾವಿನ ಮನೆ ಸೇರಿದ್ದರು.
ಕಾರು ಅಪಘಾತದಲ್ಲಿ ಪತ್ನಿ ಮಾಧವಿ ಸಾವು
ಕಳೆದ 2017ರ ಜುಲೈ.05ರಂದು ತಿರುಪತಿಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೋಲಾರದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಾಧವಿ ಅವರು ಮೃತಪಟ್ಟಿದ್ದರು. ಈ ನೋವಿನಲ್ಲೇ ಶ್ರೀನಿವಾಸ್ ಗುಪ್ತಾ ಅವರು ಮನೆ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಅನಂತರದಲ್ಲಿ ಮಕ್ಕಳ ಒತ್ತಾಯದ ಮೇರೆಗೆ ಮನೆ ನಿರ್ಮಾಣ ಕಾರ್ಯವನ್ನು ಇತ್ತೀಚಿಗಷ್ಟೇ ಪುನಾರಂಭಗೊಳಿಸಿದ್ದರು.
ಮೇಣದ ಪ್ರತಿಮೆ ಬದಲು ಸಿಲಿಕಾನ್ ಪ್ರತಿಮೆ ನಿರ್ಮಾಣ
ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರು ತಾವು ನಿರ್ಮಿಸಿದ ಮನೆಯಲ್ಲಿ ಪತ್ನಿಯ ಜೊತೆಗೆ ಬದುಕುವ ಕನಸು ಕಟ್ಟಿದ್ದರು. ಈ ಕನಸು ಸಾಕಾರಗೊಳ್ಳದ ಹಿನ್ನೆಲೆ ಪತ್ನಿಯ ನೆನಪಿಗಾಗಿ ಏನನ್ನಾದರೂ ಮಾಡಬೇಕು ಎಂದು ಹಾತೊರೆಯುತ್ತಿದ್ದ ಶ್ರೀನಿವಾಸ್ ಗುಪ್ತಾ ಅವರಿಗೆ ಆರ್ಕಿಟೆಕ್ಚ್ ರಂಗಣ್ಣ ಎನ್ನುವವರು ಮೇಣದ ಪ್ರತಿಮೆ ನಿರ್ಮಿಸುವಂತೆ ಸಲಹೆ ನೀಡಿದ್ದರು. ಬೆಂಗಳೂರಿನ ಶ್ರೀಧರ್ ಮೂರ್ತಿಯವರ ಗೊಂಬೆಮನೆಗೆ ತೆರಳಿದ ಸಂದರ್ಭದಲ್ಲಿ ಮೇಣದ ಪ್ರತಿಮೆ ಬದಲು ಸಿಲಿಕಾನ್ ಪ್ರತಿಮೆ ಮಾಡಿಸುವುದಕ್ಕೆ ಶ್ರೀನಿವಾಸ್ ಗುಪ್ತಾ ತೀರ್ಮಾನಿಸಿದರು.
ಗೃಹ ಪ್ರವೇಶದ ದಿನವೇ ಮನೆಗೆ ಬಂತು ಪತ್ನಿಯ ಪ್ರತಿಮೆ
ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಮಾಧವಿ ಅವರ ಸಿಲಿಕಾನ್ ಪ್ರತಿಮೆ ನಿರ್ಮಾಣವು ತದ್ರೂಪ ಅವರನ್ನೇ ಹೋಲುವಂತಿದೆ. ಆಗಸ್ಟ್.08ರಂದು ನಡೆದ ಗೃಹ ಪ್ರವೇಶದ ದಿನವೇ ಮಾಧವಿಯವರನ್ನೇ ಹೋಲುವಂತಿರುವ ಸಿಲಿಕಾನ್ ಪ್ರತಿಮೆಯು ಮನೆಗೆ ಬಂದಿದೆ. ಮಾಧವಿ ಅವರ ಪ್ರತಿಮೆ ನಿರ್ಮಾಣಕ್ಕೆ ಗೊಂಬೆ ರಚನೆಕಾರರ ಶ್ರೀಧರ್ ಮೂರ್ತಿಯವರು ಒಂದು ವರ್ಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿದ್ದಾರೆ. ಮಾಧವಿಯವರಿಗೆ ಇಷ್ಟವಾಗಿದ್ದ ಬಣ್ಣದ ಸೀರೆ, ತೊಡುತ್ತಿದ್ದ ಆಭರಣ ಮತ್ತು ತಲೆಗೂದಲು ವಿನ್ಯಾಸವನ್ನು ಅದ್ಭುತವಾಗಿ ಮಾಡಲಾಗಿದೆ. ಪ್ರತಿಮೆಯ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು, ಸೀರೆ, ಆಭರಣ ಮತ್ತು ತಲೆಗೂದಲು ವಿನ್ಯಾಸ ಮತ್ತು ಬದಲಾವಣೆ ಮಾಡುವಂತಿದೆ.