ಕುತ್ತಿಗೆ ಹಿಡಿದು ದಬ್ಬಿದರೂ ಎಚ್ಡಿಕೆ ಅಧಿಕಾರ ಬಿಡೊಲ್ಲ: ಈಶ್ವರಪ್ಪ
ಕೊಪ್ಪಳ, ಜನವರಿ 29: ಕಾಂಗ್ರೆಸ್ ಶಾಸಕರು ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ಬೆದರಿಕೆ ಹಾಕಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಕುತ್ತಿಗೆ ಹಿಡಿದು ದಬ್ಬಿದರೂ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ. ಅದು ಇಲ್ಲದಿದ್ದರೆ ಅಧಿಕಾರದಲ್ಲಿಯೇ ಇರಲಿ. ಅವರು ದಿನಕ್ಕೊಂದು ಹೇಳಿಕೆ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷವನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಮಾನ ಮರ್ಯಾದೆ ಇಲ್ಲದವರನ್ನು ಏನೆನ್ನಬೇಕು ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಅವರ ಹೇಳಿಕೆ ಅಧಿಕಾರದ ಹಪಾಹಪಿಯ ಪರಿಣಾಮ. ಕಾಂಗ್ರೆಸ್ನವರಿಗೆ ಬೇರೆ ಗತಿಯೂ ಇಲ್ಲ. ಇಂತಹ ಪರಿಸ್ಥಿತಿಯನ್ನು ನೋಡಿಯೇ ಅವರು ಆಟವಾಡುತ್ತಿದ್ದಾರೆ. ಇವರ ಅಧಿಕಾರದ ದಾಹ ಎಷ್ಟಿದೆ ಎಂಬುದನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಎಂದು ಹೇಳಿದರು.
ಎಚ್ಡಿಕೆ ರಾಜೀನಾಮೆ ಹೇಳಿಕೆಗೆ ಕಾರಣವಾಗಿದ್ದು 5 ನಾಯಕರು!
ತಾವು ಸಾಂದರ್ಭಿಕ ಶಿಶು ಎಂದು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ನವರಿಂದ ಇಷ್ಟೆಲ್ಲ ಅವಮಾನವಾದರೂ ರಾಜೀನಾಮೆ ನೀಡುವುದಾಗಿ ಹೇಳುತ್ತಾರೆಯೇ ಹೊರತು ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ನವರು ಸಿದ್ದರಾಮಯ್ಯ ಅವರೇ ತಮ್ಮ ಮುಖ್ಯಮಂತ್ರಿ ಎಂಬಂತೆ ಮಾತನಾಡುತ್ತಾರೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕುಂಟನ ಪರಿಸ್ಥಿತಿ ಬಂದಿದೆ. ಕುಂಟ ಒದೆಯುತ್ತೇನೆ, ಒದೆಯುತ್ತೇನೆ ಎಂದು ಹೇಳುವಂತೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತೀನಿ ಕೊಡ್ತೀನಿ ಎನ್ನುತ್ತಾರೆ. ಕಾಂಗ್ರೆಸ್ಸಿನವರೇ ಕುತ್ತಿಗೆ ಹಿಡಿದು ನೂಕಿದರೂ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ ಎಂದು ಲೇವಡಿ ಮಾಡಿದರು.