ಆನೆಗೊಂದಿಯ ಬೃಂದಾವನ ಅಗೆತ: ಮಾಧ್ವರ ಭಾವನೆ ಕೆಣಕಿದ ಕಿಡಿಗೇಡಿಗಳು ಯಾರು?
ಕೊಪ್ಪಳ, ಜುಲೈ 19 : ಅದು ಕೊಪ್ಪಳ ಜಿಲ್ಲೆಯ ಪುಟ್ಟ ಊರು ಆನೆಗೊಂದಿ. ತುಂಗಭದ್ರಾ ನದಿ ತಟದಲ್ಲಿರುವ ಇದು ಸುತ್ತಲೂ ನೀರಿನಿಂದ ಆವೃತ್ತವಾಗಿದೆ. ಹೀಗಾಗಿ ಇದಕ್ಕೆ ನವ ಬೃಂದಾವನ ನಡುಗಡ್ಡೆ ಎಂದೂ ಕರೆಯಲಾಗುತ್ತದೆ. ರಾಜ್ಯದ ರಾಜಕಾರಣದ ಸದನ ಒಳಗೆ ಹಾಗೂ ಹೊರಗೆ ಸದ್ದು ಮಾಡುತ್ತಿದ್ದಾಗಲೇ, ಬುಧವಾರ ಆನೆಗೊಂದಿ ಸುದ್ದಿಕೇಂದ್ರಕ್ಕೆ ಬಂದಿದೆ.
ನಡೆದಿದ್ದೇನು?:
ಈ ನಡುಗಡ್ಡೆಯಲ್ಲಿ ಬ್ರಾಹ್ಮಣ ಸಮುದಾಯ ಉಪಪಂಗಡವೊಂದರಲ್ಲಿ ಒಂದಾದ ಮಾಧ್ವ ಪರಂಪರೆ ಭಕ್ತಿಯಿಂದ ಆರಾಧಿಸುವ ಒಟ್ಟು 9 ಯತಿಗಳ ಸ್ಮಾರಕವಿದೆ. ಇವುಗಳನ್ನು ಬೃಂದಾವನ ಅಥವಾ ವೃಂದಾವನ ಎಂದು ಕರೆಯುತ್ತಾರೆ. ಇವುಗಳ ಪೈಕಿ ಒಂದಾದ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.
ವೃಂದಾವನದ ಮುಂದೆ ಮಂತ್ರಾಲಯ ಶ್ರೀಗಳು ಕಣ್ಣೀರಿಟ್ಟಿದ್ದು ಯಾಕೆ?
ಪೂಜೆ- ನಂಬಿಕೆಗಳ ವಿಚಾರಕ್ಕೆ ಬಂದರೆ ಮಾಧ್ವ ಪರಂಪರೆಯನ್ನು ಪ್ರತಿನಿಧಿಸುವ ಈ ಯತಿಗಳ ಸ್ಮಾರಕ ಮೊದಲಿನಿಂದಲೂ ವಿವಾದ ಕೇಂದ್ರವಾಗಿದೆ. ಸುಮಾರು 23 ಎಕರೆ ಪ್ರದೇಶದಲ್ಲಿರುವ 9 ಯತಿಗಳ ಸ್ಮಾರಕಗಳನ್ನು ಪೂಜಿಸುವ ವಿಚಾರದಲ್ಲಿಯೇ ಮಾಧ್ವ ಮಠಗಳ ನಡುವೆಯೇ ಒಮ್ಮತವಿಲ್ಲ.
ಈ ಕುರಿತಾದ ಪ್ರಕರಣಗಳು ರಾಜ್ಯ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿವೆ. ಪ್ರತಿ ವರ್ಷ ಇಲ್ಲಿ ನಡೆಯುವ ಯತಿಗಳ ಆರಾಧನೆ ಮಾಧ್ವರ ನಡುವೆ ಇರುವ ಮುನಿಸುಗಳನ್ನು ಪ್ರತಿಬಿಂಬಿಸುತ್ತಲೇ ಬಂದಿದೆ. ಈ ಕಾರಣಕ್ಕೆ ಆನೆಗೊಂದಿ ಆಗಾಗ್ಗೆ ಸುದ್ದಿಯಲ್ಲಿರುತ್ತದೆ.
ನವ ಬೃಂದಾವನ ನಡುಗಡ್ಡೆಯ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ಇರುವುದು ಮಂತ್ರಾಲಯ ಮಠ ಮತ್ತು ಉತ್ತರಾಧಿ ಮಠ. ಈ ಎರಡೂ ಮಠಗಳ ನಡುವೆ ಹುಟ್ಟಿಕೊಂಡ ಭೂ ವಿವಾದಕ್ಕೆ ಸಂಬಂಧ ಪಟ್ಟಂತೆ 2016ರಲ್ಲಿ ಹೈಕೋರ್ಟ್ ಆದೇಶವೊಂದನ್ನು ನೀಡಿತ್ತು. ಇದರ ಪ್ರಕಾರ ಇಲ್ಲಿನ ಜಮೀನು ಉತ್ತರಾಧಿ ಮಠಕ್ಕೆ ಸೇರಿದ್ದು. ಇದರ ಬಗ್ಗೆಯೂ ಮೇಲ್ಮನವಿ ಸಲ್ಲಿಸಲಾಗಿದೆ.
ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ?
ಒಂದು ಕಡೆ ಭೂ ವಿವಾದ ಜೀವಂತವಾಗಿದ್ದರೆ, ಮತ್ತೊಂದೆಡೆ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ 'ಆರಾಧನೆ'ಗಳಿಗೂ ವಿವಾದ ತಳಕು ಹಾಕಿಕೊಂಡಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ 'ಆರಾಧನೆ'ಯನ್ನು ತಲಾ ಒಂದೂವರೆ ದಿನಗಳ ಕಾಲ ಎರಡೂ ಮಠಗಳು ಮುನ್ನಡೆಸಿಕೊಂಡು ಬಂದಿವೆ. ಒಬ್ಬರ ಪೂಜೆ ಮುಗಿಯುತ್ತಿದ್ದಂತೆ ಇನ್ನೊಬ್ಬರು ಯತಿಗಳ ಸ್ಮಾರಕಗಳನ್ನು 'ಶುದ್ಧೀಕರಿಸಿ' ತಮ್ಮ ಆಚರಣೆಯನ್ನು ಮುಂದುವರಿಸುತ್ತಾರೆ. ಇದಕ್ಕೆ ಪೊಲೀಸ್ ಭದ್ರತೆಯನ್ನೂ ನೀಡಿಕೊಂಡು ಬರಲಾಗುತ್ತಿದೆ.
ಇಲ್ಲಿನ 'ಆರಾಧನೆ'ಯ ವಿವಾದದ ಸ್ವರೂಪ ಹೇಗಿರುತ್ತದೆ ಎಂಬುದಕ್ಕೆ 2015ರಲ್ಲಿ ನಡೆದ ಘಟನೆಯೊಂದು ನಿದರ್ಶನವಾಗಿ ಕಾಣಿಸುತ್ತದೆ. ಪದ್ಮನಾಭ ತೀರ್ಥ ಯತಿಗಳ ವೃಂದಾವನದಲ್ಲಿ ಆರಾಧನೆ ಮಾಡಲು ಉತ್ತರಾದಿಮಠದವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಪಾರ ಶಿಷ್ಯರ ಜೊತೆ ಆಗಮಿಸಿದ ಮಂತ್ರಾಲಯ ಶ್ರೀ ಸುಬುದೇಂದ್ರ ತೀರ್ಥರು ಆರಾಧನೆ ಪೂಜೆ ಸಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಶಿಷ್ಯರೊಂದಿಗೆ ನಿರ್ಗಮಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ವ್ಯಾಸರಾಜರ ಮೂಲ ವೃಂದಾವನ ಪುನರ್ ನಿರ್ಮಾಣ: ಉತ್ತರಾದಿ ಮಠಾಧೀಶರ ಸಂದೇಶ
ಈ ಆರಾಧನೆ, ಪೂಜೆ ಸಲ್ಲಿಸುವ ವಿಚಾರದಲ್ಲಿ ಎರಡೂ ಮಠಗಳ ನಡುವೆ ಸಂಧಾನ ಸಭೆ ನಡೆದರೂ ಒಮ್ಮತ ಮೂಡದ ಕಾರಣ ಪೊಲೀಸರ ಮಧ್ಯಪ್ರವೇಶ ಪ್ರತಿವರ್ಷವೂ ಅನಿವಾರ್ಯ ಎಂಬಂತಾಗಿದೆ. ಈ ಕುರಿತು ಗಂಗಾವತಿಯ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯೂ ನಡೆದಿದೆ.
ನವ ಬೃಂದಾವನ ಗಡ್ಡೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಆರಾಧನೆ ಸಮಯದಲ್ಲಿ ರಕ್ಷಣೆ ನೀಡಬೇಕು ಎಂದು ಅರ್ಜಿಯಲ್ಲಿ ಎರಡೂ ಮಠಗಳು ಮನವಿ ಮಾಡಿಕೊಂಡಿದ್ದವು. ಬಳಿಕ ಇದೇ ಪ್ರಕರಣದ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತು.
ಮೂರು ದಿನಗಳ ಆರಾಧನೆಯಲ್ಲಿ ಒಂದೂವರೆ ದಿನ ಉತ್ತರಾಧಿ ಮಠ ಒಂದೂವರೆ ದಿನ ಮಂತ್ರಾಲಯ ಮಠ ಆರಾಧನೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.
ಇಂತಹದೊಂದು ಹಿನ್ನೆಲೆಯಿರುವ ಬ್ರಾಹ್ಮಣ ಪಂಗಡದ ಈ ಪವಿತ್ರ ಜಾಗ ಇದೀಗ ಮತ್ತೆ ಸುದ್ದಿಯಾಗಿದೆ. ಯತಿಗಳ ಬೃಂದಾವನದ ಅಗೆದು ಹಾಕಿರುವ ಪ್ರಕರಣವನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಮಾಧ್ವರ ಭಾವನೆ ಕೆಣಕಲು ಮುಂದಾದ ಕಿಡಿಗೇಡು ಯಾರು ಎಂಬುದನ್ನು ಆದಷ್ಟು ಬೇಗ ಪತ್ತೆ ಹಚ್ಚುವ ಮಾತುಗಳನ್ನಾಡಿದ್ದಾರೆ. ಅಲ್ಲೀವರೆಗೆ ಸಂಯಮದಿಂದ ನಡೆಸುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.