ರಾಮನನ್ನು ವಿರೋಧಿಸಿದ್ದ ಸರ್ಕಾರದ ಸ್ಥಿತಿ ಈಗೇನಾಗಿದೆ ನೋಡಿ; ಯೋಗಿ ಆದಿತ್ಯಾನಾಥ್
ಕೋಲ್ಕತ್ತಾ, ಮಾರ್ಚ್ 03: ಮಾರ್ಚ್ 27ರಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿದೆ. ಕಣದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹಣಾಹಣಿಯಲ್ಲಿದೆ.
ಬಿಜೆಪಿ ಪರ ಪ್ರಚಾರದ ಸಲುವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿದ್ದು, ತೃಣಮೂಲ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮತದಾರ ಹೀಗೇಕೆ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸ ಮತ್ತು ಭವಿಷ್ಯ
ಇಲ್ಲಿನ ಮಾಲ್ಡಾದಲ್ಲಿ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅವರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಈಚೆಗೆ ಕಾರ್ಯಕ್ರಮವೊಂದರಲ್ಲಿ "ಜೈ ಶ್ರೀರಾಮ್" ಘೋಷಣೆ ಕೂಗಿದ್ದಕ್ಕೆ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು. ಅಯೋಧ್ಯೆಯಲ್ಲಿ ರಾಮ ಭಕ್ತರ ಮೇಲೆ ಗುಂಡು ಹಾರಿಸಿದ್ದ ಸರ್ಕಾರವಿತ್ತು. ಈಗ ಆ ಸರ್ಕಾರದ ಸ್ಥಿತಿಯನ್ನು ನೋಡುತ್ತಿದ್ದೀರಿ. ಮುಂದಿನ ಸರದಿ ತೃಣಮೂಲ ಕಾಂಗ್ರೆಸ್ನದ್ದು" ಎಂದು ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಲು ಅವಕಾಶವಿಲ್ಲ. ಆದರೆ ಇದು ಮುಂದುವರೆಯಲು ಜನ ಬಿಡುವುದಿಲ್ಲ. ಲವ್ ಜಿಹಾದ್, ಗೋವು ಕಳ್ಳಸಾಗಣೆ ಪ್ರಕರಣಗಳೂ ರಾಜ್ಯದಲ್ಲಿ ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಶ್ಚಿಮ ಬಂಗಾಳ ಕ್ರಾಂತಿಯ ನೆಲವಾಗಿತ್ತು. ಆದರೆ ಈಗಿನ ಸ್ಥಿತಿ ನೋಡಿದರೆ ಬೇಸರವಾಗುತ್ತದೆ ಎಂದರು. ಮೇ 2ರಂದು ಪಶ್ಚಿಮ ಬಂಗಾಳ ಜನರು ದೀಪೋತ್ಸವ ಆಚರಿಸಲಿದ್ದಾರೆ ಎಂದು ಬಿಜೆಪಿ ಗೆಲುವು ನಿಶ್ಚಿತ ಎಂಬುದರ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದೇ ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಎಂಟು ಹಂತಗಳಲ್ಲಿ 294 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.