ಭಾರತವನ್ನು ಮತ್ತೊಂದು ಪಾಕ್ ಅಥವಾ ತಾಲಿಬಾನ್ ಆಗಲು ಬಿಡುವುದಿಲ್ಲ; ದೀದಿ
ಕೋಲ್ಕತ್ತಾ, ಸೆಪ್ಟೆಂಬರ್ 17: 'ಭಾರತವನ್ನು ಪಾಕಿಸ್ತಾನ ಅಥವಾ ತಾಲಿಬಾನ್ ಆಗಲು ಬಿಡುವುದಿಲ್ಲ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
'ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯಿಸಿದರೆ ಭವಾನಿಪುರ ಕ್ಷೇತ್ರ ಪಾಕಿಸ್ತಾನ ಆಗಲಿದೆ' ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, 'ಬಿಜೆಪಿ ವಿಭಜಿಸಿ ಆಳುವ ರಾಜಕೀಯ ಮಾಡುತ್ತಿದೆ' ಎಂದು ಟೀಕಿಸಿದರು.
ಉಪಚುನಾವಣೆ: 'ಮಮತಾ ನಾಮಪತ್ರದಲ್ಲಿ 5 ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ': ಬಿಜೆಪಿ ಆರೋಪ
'ನನ್ನ ದೇಶ ಬಲಿಷ್ಠವಾಗಿರಬೇಕೆಂದು ನಾನು ಬಯಸುತ್ತೇನೆ. ನನ್ನೆಲ್ಲಾ ಶಕ್ತಿಯಿಂದ ನನ್ನ ತಾಯ್ನಾಡನ್ನು ರಕ್ಷಿಸುವ ಪ್ರಯತ್ನ ಮಾಡುತ್ತೇನೆ. ಭಾರತವನ್ನು ಮತ್ತೊಂದು ತಾಲಿಬಾನ್ ಅಥವಾ ಪಾಕ್ ಆಗಲು ಬಿಡುವುದಿಲ್ಲ' ಎಂದು ಪುನರುಚ್ಚರಿಸಿದ್ದಾರೆ.
'ಬಿಜೆಪಿಯ ನೀತಿ ಹಾಗೂ ರಾಜಕೀಯ ನನಗೆ ಇಷ್ಟವಾಗುವುದಿಲ್ಲ. ಅವರು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ನಡೆಸುತ್ತಿದ್ದಾರೆ. ಈ ಮುನ್ನ, ನಂದಿಗ್ರಾಮದಲ್ಲಿಯೂ ಟಿಎಂಸಿ ಗೆದ್ದರೆ ನಂದಿಗ್ರಾಮ ಪಾಕಿಸ್ತಾನ ಆಗಲಿದೆ ಎಂದಿದ್ದರು. ಈಗ ಭವಾನಿಪುರದಲ್ಲಿಯೂ ಅದನ್ನೇ ಹೇಳುತ್ತಿದ್ದಾರೆ. ಇದು ನಾಚಿಗೆಗೇಡಿನ ಸಂಗತಿ' ಎಂದು ದೂರಿದರು.
ಈಚೆಗೆ ಮಸೀದಿಗೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿಯನ್ನು ಬಿಜಿಪಿ ಟೀಕಿಸಿದ್ದು, ಇದಕ್ಕೆ ಉತ್ತರಿಸಿದ ಬ್ಯಾನರ್ಜಿ, ''ನಾನು ಮಸೀದಿಗೆ ಹೋಗುತ್ತೇನೆ. ಗುರುದ್ವಾರಕ್ಕೂ ಹೋಗುತ್ತೇನೆ. ನಾನು ಎಲ್ಲಿಗೆ ಹೋದರೂ ಬಿಜೆಪಿಗೆ ಸಮಸ್ಯೆ ಕಾಣಿಸುತ್ತದೆ. ನಾನು ಧರ್ಮವನ್ನು ರಾಜಕೀಯಕ್ಕೆ ಎಳೆಯುವುದಿಲ್ಲ. ಎಂದಿಗೂ ಸಮುದಾಯಗಳ ನಡುವೆ ಭಿನ್ನತೆ ಸೃಷ್ಟಿಸುವುದಿಲ್ಲ. ಆದರೆ ಬಿಜೆಪಿಗೆ ವಿಭಜಿಸಿ ಆಳುವ ಭಾಷೆಯೊಂದೇ ಅರ್ಥವಾಗುವುದು' ಎಂದು ಆರೋಪಿಸಿದರು.
ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್ ಪ್ಲ್ಯಾನ್
'ಬಿಜೆಪಿ ಸಮುದಾಯಗಳ ನಡುವಿನ ಸಹೋದರತ್ವ, ಸಾಮರಸ್ಯವನ್ನು ನಾಶಪಡಿಸುತ್ತಿದೆ' ಎಂದು ದೂರಿದರು.
'ಬಿಜೆಪಿ ಇಡೀ ದೇಶವನ್ನು ಮಾರಾಟ ಮಾಡಲು ಹೊರಟಿದೆ. ರೈಲು, ವಿಮಾನ ನಿಲ್ದಾಣ, ಬಂದರು.. ಎಲ್ಲವನ್ನೂ ಮಾರಾಟ ಮಾಡಿಕೊಂಡು ಬರುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ ಬ್ಯಾನರ್ಜಿ, 'ದೇಶದ ಮಣ್ಣನ್ನೂ ಮಾರಾಟ ಮಾಡುವಿರಾ' ಎಂದು ಪ್ರಶ್ನೆ ಮಾಡಿದ್ದಾರೆ.
ಈಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕೆಲವೇ ಮತಗಳಿಂದ ಮಮತಾ ಬ್ಯಾನರ್ಜಿ ಸೋತಿದ್ದು, ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಉಪಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದೆ.
ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಬಿಜೆಪಿಯು ವಕೀಲೆಯಾದ ಪ್ರಿಯಾಂಕ ಟಿಬ್ರೆವಾಲ್ರನ್ನು ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯ ಎದುರು ಕಣಕ್ಕೆ ಇಳಿಸಿದೆ. ತೃಣಮೂಲ ಕಾಂಗ್ರೆಸ್ ಹೊಸದಾಗಿ ಬಂಗಾಳಿಯೇತರರ ಮತಕ್ಕೂ ಕಣ್ಣು ಇಟ್ಟಿರುವ ನಡುವೆ ಬಿಜೆಪಿಯು ಭವಾನಿಪುರ ಕ್ಷೇತ್ರದಲ್ಲಿ ತನ್ನ ಪ್ರಚಾರ ಕಾರ್ಯ ಆರಂಭ ಮಾಡಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಲ್ಲಿ ಜಯ ಗಳಿಸಲು ಬೇಕಾದ ಎಲ್ಲಾ ಪ್ರಚಾರ, ಕಾರ್ಯತಂತ್ರಗಳನ್ನು ತೃಣಮೂಲ ಕಾಂಗ್ರೆಸ್ ಮಾಡುತ್ತಿದೆ. ಹಾಗೆಯೇ ಉಳಿದ ಎರಡು ಕ್ಷೇತ್ರಗಳಾದ ಮುರ್ಷಿದಾಬಾದ್ನ ಜಂಗೀಪುರ ಹಾಗೂ ಸಮ್ಸೇರ್ಗಂಜ್ ಕ್ಷೇತ್ರದಲ್ಲಿಯೂ ಟಿಎಂಸಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಭವಾನಿಪುರದಲ್ಲಿ ಬಂಗಾಳಿ ಜನರ ಮತ ಮಾತ್ರವಲ್ಲದೆ ಬಂಗಾಳಿಯೇತರರ ಮತಗಳನ್ನು ಪಡೆಯಲು ಕೂಡಾ ತೃಣಮೂಲ ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲನ್ನುಂಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಪಕ್ಷ ಮಮತಾ ಬ್ಯಾನರ್ಜಿಯನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇದೀಗ ತಮ್ಮ ಈ ಮುಖ್ಯಮಂತ್ರಿ ಸ್ಥಾನವನ್ನು ಮಮತಾ ಉಳಿಸಿಕೊಳ್ಳಬೇಕಾದರೆ ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದಾರೆ.
ಭವಾನಿಪುರದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆಗೆ ಇಳಿದಿದ್ದಾರೆ. ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಡೆಯಲಿದೆ.