'ಮೋದಿ ಸಭೆಯಲ್ಲಿ ಭಾಗವಹಿಸಲ್ಲ' ಎಂದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಡಿಸೆಂಬರ್ 24: ಮುಂದಿನ ವರ್ಷ ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ನಾಯಕ ರಿಷಿ ಅರಬಿಂದೋ ಜನ್ಮದಿನವನ್ನು ಸ್ಮರಿಸುವ ಬಗ್ಗೆ ಚರ್ಚೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರವು ಡಿಸೆಂಬರ್ 24 ರಂದು ಸಭೆಯನ್ನು ಕರೆದಿದೆ. ಪ್ರಧಾನಿ ಮೋದಿಯ ಈ ಸಭೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಯಲ್ಲಿ ನಡೆದ ಮುಖ್ಯಮಂತ್ರಿಗಳ ವರ್ಚುವಲ್ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ. ಇದಾದ ಒಂದು ದಿನದ ಬಳಿಕ ಮಮತಾ ಬ್ಯಾನರ್ಜಿ ತಾನು ಪ್ರಧಾನಿ ಮೋದಿ ಸಭೆಯಲ್ಲಿ ಭಾಗಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
'ಮಮತಾರಿಂದ ವಿಪಕ್ಷ ಮುಖ್ಯಸ್ಥೆಯಾಗುವ ಯತ್ನ, ಆದರೆ ಸೋಲು ಖಂಡಿತ'
ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಿದರೆ ನಾನು ನನ್ನ ಸಲಹೆಯನ್ನು ನೀಡುತ್ತಿದ್ದೆ," ಎಂದು ಹೇಳಿದ್ದಾರೆ.
ಎಲ್ಲದರಲ್ಲೂ ರಾಜಕೀಯ ಸರಿಯಲ್ಲ ಎಂದ ಮಮತಾ
"ಎಲ್ಲದರಲ್ಲೂ ರಾಜಕೀಯ ಸರಿಯಲ್ಲ. ಎಲ್ಲಾ ವಿಚಾರವನ್ನು ರಾಜಕೀಯಗೊಳಿಸುವುದು ಸರಿಯಲ್ಲ. ನಾವು ಈಗಾಗಲೇ ರಿಷಿ ಅರಬಿಂದೋ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದ್ದೇವೆ. ಆದ್ದರಿಂದ ನಮಗೆ ನಾಳೆಯ ಸಭೆಗೆ ಹಾಜರು ಆಗಲು ಸಾಧ್ಯವಾಗುವುದಿಲ್ಲ. ನಾನು ಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿಸಲು ದಯವಿಟ್ಟು ಪತ್ರವೊಂದನ್ನು ಬರೆಯಿರಿ," ಎಂದು ಮುಖ್ಯ ಕಾರ್ಯದರ್ಶಿ ಎಚ್ಕೆ ದ್ವಿವೇದಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಸಭೆಯಲ್ಲಿ ಉಪಸ್ಥಿತರಿದ್ದ ಖ್ಯಾತ ಚಿತ್ರಕಲಾವಿದ ಜೋಗೆನ್ ಚೌಧರಿ, ಮುಖ್ಯಮಂತ್ರಿಗೆ ಮಾತನಾಡಲು ಅವಕಾಶ ನೀಡದ್ದನ್ನು ವಿರೋಧ ಮಾಡಿದರು. "ಇದು ಸ್ವಾತಂತ್ರ್ಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದ ಬಂಗಾಳಕ್ಕೆ ಅವಮಾನವಾಗಿದೆ," ಎಂದು ಖ್ಯಾತ ಚಿತ್ರಕಲಾವಿದ ಜೋಗೆನ್ ಚೌಧರಿ ಹೇಳಿದರು. ಹಾಗೆಯೇ ಕವಿ ಜಾಯ್ ಗೋಸ್ವಾಮಿ ಕೂಡಾ ಇದೇ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಓಮಿಕ್ರಾನ್ ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ಕೇಂದ್ರದ ತಂಡ ರವಾನಿಸಲು ಮೋದಿ ನಿರ್ದೇಶನ
ಇತಿಹಾಸ ತಿರುಚುವ ಯತ್ನ: ಮಮತಾ ಆರೋಪ
ಇನ್ನು ಇದು ಇತಿಹಾಸವನ್ನು ತಿರುಚುವ ಯತ್ನ ಎಂದು ಕೂಡಾ ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ಇತಿಹಾಸವನ್ನು ಹಲವು ಹಂತಗಳಲ್ಲಿ ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಯುವ ಪೀಳಿಗೆಯು ಸತ್ಯಗಳನ್ನು ತಿಳಿದುಕೊಳ್ಳಬೇಕು. ಒಬ್ಬರ ಸಿದ್ಧಾಂತ ಏನೇ ಇರಲಿ, ಇತಿಹಾಸವನ್ನು ಅವರಿಗೆ ತಕ್ಕಂತೆ ಬದಲಾವಣೆ ಮಾಡುವುದು ಸರಿಯಲ್ಲ," ಎಂದು ಟೀಕೆ ಮಾಡಿದ್ದಾರೆ.
"ನಮ್ಮ ಸ್ವಾತಂತ್ರ್ಯ ಹೋರಾಟದ ಎಲ್ಲಾ ಪ್ರಮುಖ ಘಟನೆಗಳನ್ನು ವಿವರಿಸುವ ಪ್ರತ್ಯೇಕ ಅಧ್ಯಾಯವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು," ಎಂದು ಹೇಳಿದ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವ ಬ್ರತ್ಯಾ ಬಸುರಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ ಮುಂದಿನ ತಿಂಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ, ಮಹಾತ್ಮ ಗಾಂಧಿ ಪುಣ್ಯತಿಥಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೂಡಾ ಟಿಎಂಸಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲ ಮಹತ್ವದ ಸ್ಥಳಗಳನ್ನು ಮೀಸಲಿಡುವ ಮತ್ತು ಪ್ರವಾಸೋದ್ಯಮ ಸರ್ಕ್ಯೂಟ್ ನಿರ್ಮಿಸುವ ಯೋಜನೆಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಅಧಿಕಾರಿಗಳಿಗೆ ಸೂಚಿಸಿದರು. ಭಾರತದ ಮಹಾನ್ ಪುರುಷ, ಮಹಿಳೆಯರಿಗೆ ಋಣಿಯಾಗಿರುವುದರಿಂದ ಯಾವುದೇ ಹಣಕಾಸಿನ ತೊಂದರೆ ಉಂಟಾಗಲಾರದು ಎಂದರು. (ಒನ್ಇಂಡಿಯಾ ಸುದ್ದಿ)