ಕೋವಿಡ್ ಇಲ್ಲದಿದ್ದರೆ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತಿತ್ತು: ನಡ್ಡಾ
ಕೋಲ್ಕತ್ತಾ, ಜೂ. 10: "ಕೋವಿಡ್ನ ಎರಡನೇ ಅಲೆಯ ಹೊಡೆತ ಬೀಳದಿದ್ದರೆ ನಾವು ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆವು" ಎಂದು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ. ಪಿ. ನಡ್ಡಾ ಹೇಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಕಂಡ ಒಂದು ವರ್ಷದ ಬಳಿಕ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು.
ಜೂನ್ 8 ಮತ್ತು 9ರಂದು ಜೆ. ಪಿ. ನಡ್ಡಾ ಕೋಲ್ಕತ್ತಾ ಪ್ರವಾಸ ಕೈಗೊಂಡಿದ್ದರು. ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿ ಎಂದಿಗೂ ಬಂಗಾಳದ ಹೆಮ್ಮೆಯನ್ನು ಎತ್ತಿಹಿಡಿಯಲು ಮತ್ತು ರಾಜ್ಯದ ಜನರ ಅವಮಾನಕ್ಕೆ ಕಾರಣರಾದವರನ್ನು ಬಹಿರಂಗಪಡಿಸಲು ತನ್ನ ಹೋರಾಟವನ್ನು ಮುಂದುವರಿಸುತ್ತದೆ" ಎಂದು ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆ ಉಸ್ತುವಾರಿಗೆ 4 ಕೇಂದ್ರ ಸಚಿವರನ್ನು ನೇಮಿಸಿದ ಬಿಜೆಪಿ
"ಚುನಾವಣಾ ಪ್ರಚಾರದ ವೇಳೆ ನಾವು ವೇಗವಾಗಿಯೇ ಸಾಗುತ್ತಿದ್ದೆವು. ನಾವು ಅಧಿಕಾರಕ್ಕೆ ಬರುವುದು ಕೂಡ ಸ್ಪಷ್ಟವಾಗಿತ್ತು. ಆದರೆ ನಾಲ್ಕನೇ ಹಂತದ ಮತದಾನ ನಡೆಯುವ ಸಂದರ್ಭದಲ್ಲಿ ಕೋವಿಡ್ ಎರಡನೇ ಅಲೆಯು ಅಪ್ಪಳಿಸಿದ್ದರಿಂದ ಪ್ರಚಾರವು ರದ್ದಾಗಬೇಕಾಯಿತು" ಎಂದರು.
"4ನೇ ಹಂತದ ಪ್ರಚಾರದ ನಂತರ ನಮ್ಮ ಪ್ರಚಾರವನ್ನು ಕೋವಿಡ್ನಿಂದ ಬೇರೆ ವಿಧಿ ಇಲ್ಲದೆ ಸ್ಥಗಿತಗೊಳಿಸಬೇಕಾಯಿತು. ಉಳಿದ ಹಂತದ ಚುನಾವಣೆಗಳಲ್ಲಿ ನಾವು ಪ್ರಚಾರವನ್ನೇ ನಡೆಸಲಿಲ್ಲ. ಆದರೆ ಮುಂದಿನ ಬಾರಿ ನಾವು ಖಂಡಿತ ಅಧಿಕಾರಕ್ಕೆ ಬರುತ್ತೇವೆ. ಬ್ರಿಗೇಡ್ ಪೇರೆಡ್ ಮೈದಾನದಲ್ಲಿ ವಿಜಯೋತ್ಸವವನ್ನು ಆಚರಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಮತ್ತೊಂದು ರಾಜ್ಯದ ಮೇಲಿ ಕಣ್ಣಿಟ್ಟ ಬಿಜೆಪಿ
"ಕಳೆದ ಬಾರಿ ನಾನು ಬಂಗಾಳಕ್ಕೆ ಬಂದಾಗ ಇಲ್ಲಿಯ ಜನರು ಬದಲಾವಣೆ ಬಯಸಿದ್ದನ್ನು ಗಮನಿಸಿದ್ದೇ. ಭಾರತವು ಜೀವಂತ ಸಮಾಜವಾಗಿದ್ದು, ಅದು ಸರಿಯಾದ ಸಮಯದಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ. ನಾವು ನಮ್ಮ ಹೋರಾಟವನ್ನು ಪ್ರಜಾಸತ್ತಾತ್ಮಕವಾಗಿ ಮುಂದುವರಿಸತ್ತೇವೆ. ಅಲ್ಲದೆ ಟಿಎಂಸಿಯನ್ನು ಸೋಲಿಸುತ್ತೇವೆ" ಎಂದು ಹೇಳಿದ್ದಾರೆ.
ಸಾಹಿತ್ಯ ಕೃತಿಗಳಲ್ಲಿ ಬಂಗಾಳಿ ಹೆಮ್ಮೆ ಅಡಗಿಲ್ಲ
"ನಾವು ಬಂಗಾಳಿ ಹೆಮ್ಮೆಯನ್ನು ಉಳಿಸಿಕೊಳ್ಳಬೇಕು ಮತ್ತು ಎತ್ತಿಹಿಡಿಯಬೇಕು. ಅದಕ್ಕಾಗಿ ಹೋರಾಟವನ್ನು ಮುಂದುವರಿಸಬೇಕು. ಇದು ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಬಂಗಾಳಿ ಹೆಮ್ಮೆಯನ್ನು ಕೀಳಾಗಿ ಕಾಣುವ ಮತ್ತು ನೋಯಿಸಲು ಪ್ರಯತ್ನಿಸುವವರನ್ನು ನಾವು ತೋರಿಸಬೇಕು. ಸಾಹಿತ್ಯ ಕೃತಿಗಳಲ್ಲಿ ಬಂಗಾಳಿ ಹೆಮ್ಮೆ ಅಡಗಿಲ್ಲ. ಬದಲಾಗಿ ಸ್ವಾಮಿ ವಿವೇಕಾನಂದರ ಉಪದೇಶಗಳು ಹಾಗೂ ನಮ್ಮ ಚಟುವಟಿಕೆಗಳಲ್ಲಿದೆ" ಎಂದು ಜೆ. ಪಿ. ನಡ್ಡಾ ಹೇಳಿದ್ದಾರೆ.
ಇಂತಹದ್ದೇ ಘಟನೆ ನಡೆಯುವ ದಿನ ದೂರವಿಲ್ಲ
ಬಿಹಾರದಲ್ಲಿ ನಡೆದ ರಾಜಕೀಯ ಪ್ರಹಸನವನ್ನು ಒತ್ತಿಹೇಳಿದ ಜೆ. ಪಿ. ನಡ್ಡಾ, "ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಜೈಲಿಗೆ ಹೋಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಆದರೆ ಕಾನೂನು ತನ್ನ ಕಾರ್ಯ ಮಾಡಿತು. ಅದೇ ರೀತಿ ಇಲ್ಲಿಯೂ (ಪಶ್ಚಿಮ ಬಂಗಾಳ) ಇಂತಹದ್ದೇ ಘಟನೆ ನಡೆಯುವ ದಿನ ದೂರವಿಲ್ಲ" ಎಂದು ಹೇಳಿದರು.
ಇದಕ್ಕೆ ತಕ್ಷಣ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಇನ್ನೂ ತನಿಖೆಯಲ್ಲಿರುವ ಪ್ರಕರಣಗಳಲ್ಲಿ ಶಿಕ್ಷೆಯ ಬಗ್ಗೆ ನಡ್ಡಾ ಹೇಗೆ ಮಾತನಾಡಬಹುದು?. ಇದರ ಬಗ್ಗೆ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆಯೇ? ಎಂದು ಪ್ರಶ್ನೆ ಮಾಡಿದೆ.
ಸಿಬಿಐ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆಯೇ?
ಬಿಜೆಪಿ ಇಂಡಿಯಾ = ಸಿಬಿಐ ಎಂಬುದು ಈಗ ಸಾಬೀತಾಗಿದೆ. ರಾಜಕೀಯ ಸಮಾರಂಭದಲ್ಲಿ ಜೆ. ಪಿ. ನಡ್ಡಾ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಶಿಕ್ಷೆಯ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಯಾವ ಹಿನ್ನೆಲೆ ಈ ರೀತಿ ಹೇಳುತ್ತಿದ್ದಾರೆ?. ಸಿಬಿಐ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆಯೇ? ಅಥವಾ ಸಿಬಿಐಯೇ ಆಗಿದೆಯೇ? ಇಲ್ಲವೇ ನರೇಂದ್ರ ಮೋದಿಜಿಯವರ ಕೈಗೊಂಬೆಯೇ?" ಎಂದು ಟಿಎಂಸಿ ಟ್ವೀಟ್ ಮಾಡಿದೆ.
ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯವಾದಿ ಐಕಾನ್ಗಳಾದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಮತ್ತು ಸ್ವಾಮಿ ವಿವೇಕಾನಂದರನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದ್ದವು.
ಬಿಜೆಪಿ ಘಟಕದಲ್ಲಿ ಒಳಜಗಳ ಮತ್ತು ಪಕ್ಷಾಂತರ
ಬಿಜೆಪಿ ಭಾರೀ ಪ್ರಚಾರದ ಹೊರತಾಗಿಯೂ ಟಿಎಂಸಿಯನ್ನು ಸೋಲಿಸಲು ವಿಫಲವಾಯಿತು. 294 ಸದಸ್ಯರ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಬಾರಿಗೆ 213 ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದುಗೆಗೇರಿದೆ.
ವಿಧಾನಸಭಾ ಚುನಾವಣೆಯ ಸೋಲಿನ ನಂತರ ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಒಳಜಗಳ ಮತ್ತು ಪಕ್ಷಾಂತರದಿಂದ ಕಂಗೆಟ್ಟಿದೆ. ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ, ಪಕ್ಷದ ಸಂಸದ ಅರ್ಜುನ್ ಸಿಂಗ್ ಮತ್ತು ಅದರ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಸೇರಿದಂತೆ ಐವರು ಶಾಸಕರು ಕಳೆದ ವರ್ಷ ಮೇನಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಟಿಎಂಸಿಗೆ ಪಕ್ಷಾಂತರಗೊಂಡಿದ್ದಾರೆ.
Recommended Video