ನಿಮ್ಮ ಹಾದಿಯನ್ನೇ ನಾವೂ ಹಿಡಿಯುತ್ತೇವೆ; ಬಿಜೆಪಿಗೆ ಎಚ್ಚರಿಕೆ ಕೊಟ್ಟ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜನವರಿ 19: ತೃಣಮೂಲ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿರುವ ಸಭೆಗಳಿಗೆ ಬಿಜೆಪಿ ಸುಮ್ಮನೆ ತೊಂದರೆ ಕೊಡುತ್ತಿದೆ. ಇದು ಮುಂದುವರೆದರೆ, ನಾವು ಕೂಡ ಅದೇ ಹಾದಿ ಹಿಡಿಯಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
"ಕೆಲವು ದಿನಗಳಿಂದ ನಾನು ನೋಡುತ್ತಿದ್ದೇನೆ. ನಮ್ಮ ಸಭೆಗಳಲ್ಲಿ ಗೊಂದಲ ಎಬ್ಬಿಸಲು ಬಿಜೆಪಿ ಕೆಲವರನ್ನು ಕಳುಹಿಸುತ್ತಿರುವುದು ಕಂಡುಬಂದಿದೆ. ಇದು ಮುಂದುವರೆದರೆ ನಾನೂ ಬಿಜೆಪಿ, ಸಿಪಿಎಂ ಸಭೆಗಳಿಗೆ ನಮ್ಮ ಜನರನ್ನು ಕಳುಹಿಸುತ್ತೇನೆ" ಎಂದಿದ್ದಾರೆ. ಪುರುಲಿಯಾದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
"ಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಬಂದಾಗ ದಲಿತರ ಮನೆಗಳಿಗೆ ಹೋಗಿ ಊಟ ಮಾಡುತ್ತಾರೆ. ಆದರೆ ಆ ಬಡ ಕುಟುಂಬಗಳಿಗೆ ಅದೇ ಕಷ್ಟವಾಗುತ್ತಿದೆ. "ಅವರು ಬಂದಾಗ ನಾವು ನಮ್ಮ ಹಣವನ್ನು ಖರ್ಚು ಮಾಡಿರುತ್ತೇವೆ. ನಮಗೆ ದುಡ್ಡು ಎಲ್ಲಿಂದ ಬರಬೇಕು" ಎಂದು ಕೆಲವು ಕುಟುಂಬಗಳು ನಮ್ಮ ಬಳಿ ಹೇಳಿಕೊಂಡಿವೆ. ಹೀಗಾಗಿ ಅಂಥವರನ್ನು ಕಂಡಾಗ ಅವರಿಗೆ ಹಣ ನೀಡಿ ಎಂದು ನನ್ನ ಕಾರ್ಯಕರ್ತರಿಗೆ ತಿಳಿಸಿದ್ದೇನೆ" ಎಂದು ತಿರುಗೇಟು ನೀಡಿದ್ದಾರೆ.
ಈಚೆಗೆ ಬಿಜೆಪಿ ಮುಖಂಡ ಹಾಗೂ ಗೃಹ ಸಚಿವ ಅಮಿತ್ ಶಾ ಬಿರ್ಭುಮ್ ಜಿಲ್ಲೆಯ ಜನಪದ ಗಾಯಕರೊಬ್ಬರ ಮನೆಗೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಇದೇ ಏಪ್ರಿಲ್- ಮೇ ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. 2011ರಿಂದಲೂ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿಗೆ ಈ ಚುನಾವಣೆ ಅತಿ ಮುಖ್ಯವಾಗಿದ್ದು, ಬಿಜೆಪಿಯಿಂದ ಈ ಬಾರಿ ಭಾರೀ ಪೈಪೋಟಿ ಎದುರಾಗಿದೆ. ಸುವೇಂದು ಅಧಿಕಾರಿಯಂಥ ಪ್ರಬಲ ನಾಯಕರು ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಟಿಎಂಸಿಗೆ ದೊಡ್ಡ ಸವಾಲನ್ನೇ ಮುಂದಿಟ್ಟಿದೆ.