ಬಂಗಾಳಕ್ಕೆ ಅವಮಾನವಾಗುವುದನ್ನು ಸಹಿಸೋಲ್ಲ, ರಾಜ್ಯಪಾಲರಿಗೂ ದೀದಿ ಎಚ್ಚರಿಕೆ!
ಕೋಲ್ಕತ್ತಾ, ಜೂನ್ 11: "ಬಂಗಾಳಕ್ಕೆ ಯಾರೇ ಅವಮಾನ ಮಾಡಿದರೂ ನಾನು ಸಹಿಸುವುದಿಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಮಂಗಳವಾರ ಕೋಲ್ಕತ್ತಾದಲ್ಲಿ ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಮಮತಾ ಬ್ಯಾನರ್ಜಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು.
ಈಶ್ವರ ಚಂದ್ರ ವಿದ್ಯಾಸಾಗರ ಪ್ರತಿಮೆ ಅನಾವರಣಗೊಳಿಸಿದ ಮಮತಾ ಬ್ಯಾನರ್ಜಿ
"ನನಗೆ ರಾಜ್ಯಪಾಲರ ಹುದ್ದೆಯ ಬಗ್ಗೆ ಸಾಕಷ್ಟು ಗೌರವವಿದೆ. ಆದರೆ ಎಲ್ಲ ಹುದ್ದೆಗೂ ಅದರದೇ ಆದ ಸಾಂವಿಧಾನಿಕ ಮಿತಿಗಳಿವೆ. ಬಂಗಾಳಕ್ಕೆ ಅವಮಾನ ಮಾಡುವುದಕನ್ನು ನಾನು ಕ್ಷಮಿಸುವುದಿಲ್ಲ. ಬಂಗಾಳವನ್ನು ಗುಜರಾತ್ ಮಾಡಲು ತ್ರಿಪಾಠಿ ಹೊರಟಿದ್ದಾರೆ. ಆದರೆ ಬಂಗಾಳಕ್ಕೆ ಅದರದೇ ಆದ ಸಾಂಸ್ಕೃತಿಕ ಹಿರಿಮೆ ಇದೆ. ಅದು ಗುಜರಾತ್ ಆಗುವುದಕ್ಕೆ ನಾನು ಬಿಡುವುದಿಲ್ಲ" ಎಂದು ಮಮತಾ ಬ್ಯಾನರ್ಜ ಹೇಳಿದರು.
ಪಶ್ಚಿಮ ಬಂಗಾಳವನ್ನು ಗುಜರಾತ್ ಮಾಡಲು ಬಿಡುವುದಿಲ್ಲ: ಮಮತಾ ಗುಡುಗು
ಮೇ 14 ರಂದು ಲೋಕಸಭೆ ಚುನಾವನೆಗೂ ಮುನ್ನ ಕೋಲ್ಕತ್ತದಲ್ಲಿ ನಡೆಯುತ್ತಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮಾವೇಶದ ಸಮಯದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಇದಕ್ಕೆ ಬಿಜೆಪಿ ಹೊಣೆ ಎಂದು ಟಿಎಸಿ ದೂರಿದರೆ, ಟಿಎಂಸಿಯೇ ಹೊಣೆ ಎಂದು ಬಿಜೆಪಿ ದೂರಿತ್ತು. ಈ ಘಟನೆ ನಡೆದ ತಿಂಗಳೊಳಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.