ಇಂಧನ ಬೆಲೆ ಕಡಿಮೆಯಾಗುವುದೇ?; ಪೆಟ್ರೋಲಿಯಂ ಸಚಿವರು ಹೇಳುವುದಿದು...
ಕೋಲ್ಕತ್ತಾ, ಸೆಪ್ಟೆಂಬರ್ 23: ರಾಜ್ಯಗಳು ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಯಸುತ್ತಿಲ್ಲವಾದ್ದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಿಲ್ಲ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ.
ಕೋಲ್ಕತ್ತಾ ಭೇಟಿ ಸಂದರ್ಭ ಸಂದರ್ಶನದಲ್ಲಿ ಮಾತನಾಡಿದ ಅವರು, 'ಪಶ್ಚಿಮ ಬಂಗಾಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಟಿಎಂಸಿ ಸರ್ಕಾರ ಇಂಧನದ ಮೇಲೆ ಭಾರೀ ತೆರಿಗೆ ವಿಧಿಸುತ್ತಿರುವುದರಿಂದ ಇಲ್ಲಿ ಪೆಟ್ರೋಲ್ ದರ ಲೀಟರಿಗೆ ನೂರು ರೂಪಾಯಿ ದಾಟಿದೆ' ಎಂದರು.
ಕಚ್ಚಾತೈಲ ಬೆಲೆ ಏರಿಕೆಯಾದರೂ ಪೆಟ್ರೋಲ್, ಡೀಸೆಲ್ ದರ ಸ್ಥಿರ
'ಪೆಟ್ರೋಲ್ ಬೆಲೆ ಇಳಿಕೆ ಮಾಡುತ್ತೀರಾ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಹೌದು ಎಂಬುದು ನಮ್ಮ ಉತ್ತರ. ಆದರೆ ಪೆಟ್ರೋಲ್ ಬೆಲೆ ಏಕೆ ಕಡಿಮೆಯಾಗುತ್ತಿಲ್ಲ ಎಂಬುದು ನಿಮ್ಮ ಪ್ರಶ್ನೆಯಾದರೆ, ರಾಜ್ಯಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದು ನಮ್ಮ ಉತ್ತರ. ರಾಜ್ಯಗಳು ಜಿಎಸ್ಟಿ ವ್ಯಾಪ್ತಿಯಲ್ಲಿ ಇಂಧನ ದರವನ್ನು ಸೇರಿಸುತ್ತಿಲ್ಲ. ಹೀಗಾಗಿ ಬೆಲೆ ಇಳಿಕೆ ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ.
ಕೇಂದ್ರವು ಪ್ರತಿ ಲೀಟರ್ ಪೆಟ್ರೋಲ್ಗೆ 32 ರೂ ವಿಧಿಸುತ್ತದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 19 ಡಾಲರ್ ಇದ್ದಾಗ ನಾವು 32 ರೂ ವಿಧಿಸುತ್ತಿದ್ದೆವು. ಅದೇ ಬೆಲೆ ಬ್ಯಾರೆಲ್ಗೆ 75 ಡಾಲರ್ಗೆ ಏರಿಕೆಯಾದರೂ ನಾವು ಹಿಂದಿನ ಬೆಲೆಯನ್ನು ಮುಂದುವರೆಸಿದ್ದೇವೆ. ಇದರ ಜೊತೆಗೆ, ಉಚಿತ ಪಡಿತರ, ವಸತಿ, ಉಜ್ವಲ ಹಾಗೂ ಇತರೆ ಯೋಜನೆಗಳನ್ನೂ ಜನರಿಗಾಗಿ ನೀಡುತ್ತಿದ್ದೇವೆ' ಎಂದು ಹೇಳಿದರು.
ಪಶ್ಚಿಮ ಬಂಗಾಳ ಸರ್ಕಾರ ಜುಲೈ ತಿಂಗಳಿನಲ್ಲಿ ಪ್ರತಿ ಲೀಟರ್ಗೆ 3.51 ರೂ ಬೆಲೆ ಏರಿಕೆ ಮಾಡಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆ ನೂರನ್ನು ದಾಟಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ ಇಂಧನ ತೆರಿಗೆ ಶೇ 40ರಷ್ಟಿದೆ. ಇಂಧನ ಬೆಲೆ ಕುರಿತು ಹೇಳಿಕೆಗಳನ್ನು ನೀಡುವುದು ತುಂಬಾ ಸುಲಭ. ನಿಮ್ಮ ರಾಜ್ಯ ಸರ್ಕಾರ ಬೆಲೆಯನ್ನು 3.51ರೂ ಹೆಚ್ಚಿಸದಿದ್ದರೆ ಪ್ರತಿ ಲೀಟರ್ ಬೆಲೆ 100ಕ್ಕಿಂತ ಕಡಿಮೆ ಇರುತ್ತಿತ್ತು ಎಂದು ಸಮರ್ಥನೆ ಮಾಡಿಕೊಂಡರು.
ಮಮತಾ ಬ್ಯಾನರ್ಜಿ ನಿವಾಸದ ಬಳಿ ಪ್ರಚಾರಕ್ಕೆ ಅಡ್ಡಿ; ಬಿಜೆಪಿ
ದೇಶದಲ್ಲಿ ಸತತ 18 ದಿನಗಳಿಂದ ಇಂಧನ ದರದಲ್ಲಿ ಬದಲಾವಣೆ ಮಾಡಿಲ್ಲ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ಗುರುವಾರ ಕೂಡ ಇಂಧನ ದರ ಪರಿಷ್ಕರಿಸಲಾಗಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಸೆ.5ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ತಮಿಳುನಾಡಿನ ಬಜೆಟ್ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿದ್ದು ಬಿಟ್ಟರೆ, ಉಳಿದೆಡೆ ಇಂಧನ ದರ ಪ್ರತಿ ಲೀಟರ್ ಮೇಲೆ 100 ರೂ ಬೆಲೆ ಇದ್ದೇ ಇದೆ.
ಉಳಿದ ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 100 ರೂ ಗಿಂತ ತಗ್ಗಿಲ್ಲ.
ಬುಧವಾರ ಕೋಲ್ಕತ್ತಾಗೆ ಭೇಟಿ ನೀಡಿದ್ದ ಸಚಿವ ಹರ್ದೀಪ್ ಸಿಂಗ್ ಪುರಿ ಭವಾನಿಪುರ ಉಪಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಪರ ಪ್ರಚಾರ ನಡೆಸಿದ್ದು, ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭವಾನಿಪುರ ಉಪಚುನಾವಣೆ ಫಲಿತಾಂಶ ಪೂರ್ವನಿರ್ಧರಿತವಾಗಿದ್ದರೆ ಇಡೀ ರಾಜ್ಯ ಕ್ಯಾಬಿನೆಟ್ ಏಕೆ ಪ್ರಚಾರ ನಡೆಸುತ್ತಿದೆ? ನಮಗೆ ನಮ್ಮ ವಿಜಯದ ಬಗ್ಗೆ ವಿಶ್ವಾಸವಿವೆ ಹಾಗೂ ಚುನಾವಣೆ ನಂತರದ ಹಿಂಸಾಚಾರವು ಇಲ್ಲಿ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು.
ಪಂಜಾಬ್ನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ನ ಅವನತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಟೀಕಿಸಿದರು.