ಮಮತಾ ಬ್ಯಾನರ್ಜಿ ಬುಡವನ್ನೇ ಅಲ್ಲಾಡಿಸಿರುವ ಅಮಿತ್ ಶಾ, ಮೋದಿ
Recommended Video
ಕೋಲ್ಕತಾ, ಮೇ 17 : ನಲವತ್ತೆರಡು ಸೀಟುಗಳಿರುವ ಪಶ್ಚಿಮ ಬಂಗಾಳದಲ್ಲಿ, ಕೇಂದ್ರದಲ್ಲಿ ತನ್ನ ಸರಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟನ್ನು ಗೆಲ್ಲದಿರಬಹುದು. ಆದರೆ, ನೈತಿಕ ಗೆಲುವನ್ನು ಸಾಧಿಸುವಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಟ್ಟಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆದರೆ, ಸಿಂಹ ಗುಹೆಯೊಳಗೇ ನುಗ್ಗಿ ಸಿಂಹಕ್ಕೇ ಸೆಡ್ಡು ಹೊಡೆಯುವುದಿದೆಯಲ್ಲ, ಅದು ಸಣ್ಣ ಮಾತಲ್ಲ. ದಶಕಗಳಿಂದ ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್ಸಿನ ಬಿಗಿಹಿಡಿತದಲ್ಲಿರುವ ಬಂಗಾಳಿ ಬಾಬುಗಳಿಗೆ ಕೇಸರಿ ರಂಗಿನ ಗುಂಗು ಹಿಡಿಸುವುದು ಕೂಡ ಸಣ್ಣ ಕೆಲಸವಲ್ಲ.
ಪಶ್ಚಿಮ ಬಂಗಾಳದ ಇತಿಹಾಸದಲ್ಲಿಯೇ ಎಂದೂ ಆಗದಿದ್ದದನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೊರಟಿದ್ದಾರೆ. ಇದರಲ್ಲಿ ಎಷ್ಟು ಯಶಸ್ವಿಯಾಗಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಿದೆ. ಆದರೆ, ಇದು ಪಶ್ಚಿಮ ಬಂಗಾಳದಲ್ಲಿ ಕೇಸರಿ ಧ್ವಜ ಹಾರಿಸುವಲ್ಲಿ ಕೊನೆಯಾಗುವುದಾ? ಕಾಲವೇ ಉದ್ದರ ನೀಡಲಿದೆ.
ಕರ್ನಾಟಕದಲ್ಲಿ ಬಿಜೆಪಿಗೆ 0 ಸ್ಥಾನ! ಮಮತಾ ಬ್ಯಾನರ್ಜಿ ಎಗ್ಸಿಟ್ ಪೋಲ್!
ಇದಕ್ಕಾಗಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಎದುರಿಸಿರುವ ಸಂಕಷ್ಟಗಳು ಒಂದೆರಡಲ್ಲ. ರೋಡ್ ಶೋಗಳಿಗೆ ಅನುಮತಿಗಾಗಿ ಬಡಿದಾಡುವುದರ ಜೊತೆಗೆ, ಬೃಹತ್ ಸಮಾವೇಶಗಳಲ್ಲಿ ಭಾರೀ ಹಿಂಸಾಚಾರ ಎದುರಿಸುವ ಮಟ್ಟಿನಲ್ಲಿ ತೊಂದರೆಗಳು ಎದುರಾಗಿವೆ. ತೂರಿಬಂದ ಮಾತಿನ ಈಟಿಗಳಿಗಂತೂ ಲೆಕ್ಕವೇ ಇಲ್ಲ. ಮಾತುಗಳು ಹದ್ದುಮೀರುತ್ತಿವೆ, ಬೆಂಕಿ ಉಗುಳುತ್ತಿವೆ. ರಾಜ್ಯದಲ್ಲಿ ಗೂಂಡಾಗಿರಿಯಂತೂ ಹಿಡಿತಕ್ಕೇ ಸಿಗುತ್ತಿಲ್ಲ.
ಅಮಿತ್ ಶಾ, ಮೋದಿಯಿಂದ ರೋಡ್ ಶೋ
ನರೇಂದ್ರ ಮೋದಿಯವರಿಂದ ಅಧಿಕಾರದ ಚುಕ್ಕಾಣಿ ಕಿತ್ತುಕೊಳ್ಳುವಲ್ಲಿ ಭರ್ಜರಿ ಹೋರಾಟ ನಡೆಸಿರುವ ರಾಹುಲ್ ಗಾಂಧಿ ಒಂದೇ ಒಂದು ಬೃಹತ್ ರೋಡ್ ಶೋ ನಡೆಸುವ ಬಗ್ಗೆಯೂ ವಿಚಾರ ಮಾಡಲಿಲ್ಲ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 4 ಸೀಟು ಗೆದ್ದಿದ್ದರೂ, ಹೆಚ್ಚು ಸೀಟು ಗೆಲ್ಲಲು ಅವರು ಯಾವುದೇ ವಿಶೇಷವಾದ ಪ್ರಯತ್ನವನ್ನೂ ಮಾಡಿಲ್ಲ. ಆದರೆ, ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಮಮತಾ ಬ್ಯಾನರ್ಜಿ ಅವರ ಬುಡವೇ ಅಲ್ಲಾಡುವಂತೆ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ, ಬಂಗಾಳಿಗಳ ಹೃದಯದ ಕದ ತಟ್ಟುವಂತೆ ರೋಡ್ ಶೋಗಳನ್ನು ನಡೆಸಿದ್ದಾರೆ. ರಾಜ್ಯದ ಎಲ್ಲೆಲ್ಲೂ ಕೇಸರಿ ಬಾವುಟ ಫಟಫಟಿಸುವಂತೆ ಮಾಡಿದ್ದಾರೆ, ಮತದಾರರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ವಿದ್ಯಾಸಾಗರ್ ಭವ್ಯ ಪ್ರತಿಮೆ ನಿರ್ಮಾಣ, ಮೋದಿ: ನಿಮ್ಮ ದುಡ್ಡು ಯಾರಿಗೆ ಬೇಕು, ಮಮತಾ
ಬಂಗಾಳಿಗಳ ಮನ ಗೆಲ್ಲುವುದೆ ಬಿಜೆಪಿ?
ಕಡೆಯ ಹಂತದ ಮತದಾನದಲ್ಲಿ, ಮೇ 19ರಂದು ಪಶ್ಚಿಮ ಬಂಗಾಳದಲ್ಲಿ 9 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಭಾರೀ ಪ್ರಚಾರದ ಫಲ ಸ್ವಲ್ಪ ಮಟ್ಟಿಗಾದರೂ ಮೇ 23ರಂದು ಸಿಗಲಿದೆ ಎಂದು ಭಾರತೀಯ ಜನತಾ ಪಕ್ಷ ಆಶಿಸುತ್ತಿದೆ. ಅಭಿವೃದ್ಧಿ ಪರ ಮತ್ತು ಭ್ರಷ್ಟಾಚಾರ ವಿರೋಧಿ ನೀತಿ ಒಂದಿಷ್ಟು ಮತಗಳನ್ನು ಕಬಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ಬಿಜೆಪಿ ನಂಬಿದೆ. ಭರ್ಜರಿ ಜಯ ಗಳಿಸಲಿದ್ದರೂ, ಗಣನೀಯ ಮತಗಳನ್ನು ಕಬಳಿಸಿ ಪಶ್ಚಿಮ ಬಂಗಾಳಿಗಳ ಮನದಲ್ಲಿ ಸ್ಥಾನ ಗಿಟ್ಟಿಸುವುದು ಭಾರತೀಯ ಜನತಾ ಪಕ್ಷದ ಸದ್ಯಕ್ಕಿನ ಅಜೆಂಡಾ.
ಸಂಕಷ್ಟದಲ್ಲಿ ಜೊತೆಯಾದ ವಿಪಕ್ಷಗಳಿಗೆ ಋಣಿ ಎಂದ ದೀದಿ
ಬಂಗಾಳಿ ಯುವಕರ ಸಿಟ್ಟು ನೆತ್ತಿಗೇರಿದೆ
ಈಶ್ವರ್ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದನ್ನೇ ತೆಗೆದುಕೊಂಡರೆ, ಇಲ್ಲಿ ಯಾವ ಪಕ್ಷದವರು ಇಂಥ ಹೀನ ಕೃತ್ಯ ಮಾಡಿದ್ದಾರೆ ಎನ್ನುವುದಕ್ಕಿಂತ ಪ್ರಮುಖವಾಗಿ ಕಾಣಿಸುವುದು ಜನ ರೊಚ್ಚಿಗೆದ್ದಿರುವುದು. ಇಂಥ ವಿಧ್ವಂಸಕ ಕೃತ್ಯಗಳು ಪಶ್ಚಿಮ ಬಂಗಾಳದಲ್ಲಿ ಹೊಸದಲ್ಲವಾದರೂ, ಪಶ್ಚಿಮ ಬಂಗಾಳದ ಖ್ಯಾತ ತತ್ತ್ವಜ್ಞಾನಿ, ಶಿಕ್ಷಣತಜ್ಞ, ಬರಹಗಾರ, ಪುಸ್ತಕ ಪ್ರಕಾಶಕ, ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಈಶ್ವರ ಚಂದ್ರ ವಿದ್ಯಾಸಾಗರ (ಬಂಡೋಪಾಧ್ಯಾಯ) ಅವರ ಪುತ್ಥಳಿಯ ಧ್ವಂಸ ಇಡೀ ರಾಜ್ಯದ ಇತಿಹಾಸಕ್ಕೆ ಕಪ್ಪುಚುಕ್ಕೆ ಆಗುವಂತೆ ಮಾಡಿದೆ. ಆಡಳಿತ ವಿರೋಧಿ ಅಲೆ, ಉದ್ಯೋಗ ಸೃಷ್ಟಿಯಾಗದಿರುವುದು, ರಾಜ್ಯ ಅಭಿವೃದ್ಧಿ ಕಾಣದಿರುವುದು ಜನರನ್ನು ಹಿಂಸಾಚಾರಕ್ಕೆ ಪ್ರೇರೇಪಿಸಿದೆ.
ಕ್ರಾಂತಿಕಾರಿ ಬದಲಾವಣೆ ತಂದಿದ್ದ ಮಮತಾ
ಮೂವತ್ನಾಲ್ಕು ವರ್ಷಗಳ ಕಾಲ ಕಮ್ಯೂನಿಸ್ಟ್ ಪಕ್ಷಗಳ ಹಿಡಿತದಲ್ಲಿ ನರಳಿದ್ದ ಪಶ್ಚಿಮ ಬಂಗಾಳ, ಅಂತಹ ಮಹತ್ತರ ಬದಲಾವಣೆ ಕಾಣದ ರಾಜ್ಯದಲ್ಲಿ ದಂಗೆ ಎದ್ದವರ ವಿರುದ್ಧವೇ ಹಲ್ಲೆಗಳಾಗಿವೆ. ಇಂತಹ ವಾತಾವರಣದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು 'ದೀದಿ' ಮಮತಾ ಬ್ಯಾನರ್ಜಿ. ಕಾಂಗ್ರೆಸ್ಸಿನ ಉಪಟಳದಿಂದ ಬೇಸತ್ತು, ಪಕ್ಷದಿಂದಲೇ ಹೊರಬಿದ್ದು, 'ಮಾ, ಮಾಟಿ, ಮಾನುಷ್' ಎಂಬ ಘೋಷಣೆಯನ್ನು ಹಿಡಿದುಕೊಂಡು ಜನಮನವನ್ನು ಗೆದ್ದರು. ತನ್ನದೇ ವೈಖರಿಯಲ್ಲಿ ಆಡಳಿತ ನಡೆಸಿ ಎಡ ಪಕ್ಷಗಳು ಮಿಸುಕಾಡದಂತೆ ಮಾಡಿದ್ದಾರೆ ಮಮತಾ ಬ್ಯಾನರ್ಜಿ.
ಮಮತಾರನ್ನು ಸದೆಬಡಿಯುವುದೆ ಬಿಜೆಪಿ?
ಈಶಾನ್ಯ ರಾಜ್ಯಗಳ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ, ಪಶ್ಚಿಮ ಬಂಗಾಳದಲ್ಲಿ ತನ್ನ ನೆಲೆ ಕಂಡುಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಈ ಅಭಿಯಾನ ಈಗ ಆರಂಭವಾಗಿಲ್ಲ, ಕಳೆದ ಚುನಾವಣೆಯ ನಂತರವೇ ಆರಂಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸೀಟು ಗೆದ್ದಿದ್ದ ಬಿಜೆಪಿ (ಎನ್ ಡಿಎ) 2018ರ ಪಂಚಾಯತ್ ಚುನಾವಣೆಯಲ್ಲಿ 806ರಲ್ಲಿ 329 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಭರ್ಜರಿ ಸಾಧನೆ ಮಾಡಿತ್ತು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿಯೂ ಪಶ್ಚಿಮ ಬಂಗಾಳದಲ್ಲಿಯೇ ಮಮತಾ ಬ್ಯಾನರ್ಜಿಯನ್ನು ಸದೆಬಡಿಯುವ ಉತ್ಸಾಹದಲ್ಲಿದೆ ಬಿಜೆಪಿ.
ಭಯದಿಂದ ಪತರಗುಟ್ಟುತ್ತಿರುವ ಮಮತಾ
ದೀದಿ ಮಮತಾ ಬ್ಯಾನರ್ಜಿ ನನಗೆ ಸಿಹಿ ಕಳಿಸುತ್ತಿದ್ದರು ಎಂದು ಪ್ರಧಾನಿ ಹೇಳಿದರೆ, ಇನ್ನು ಮುಂದೆ ಅದೇ ಸಿಹಿಯನ್ನು ಮಣ್ಣಿನಿಂದ ಮಾಡಿ, ಅದರಲ್ಲಿ ಕಲ್ಲು ನೆಟ್ಟು ಅವರ ಹಲ್ಲು ಮುರಿಯುತ್ತೇನೆ ಎಂದು ಮಮತಾ ಬ್ಯಾನರ್ಜಿ ಹಲ್ಲು ಕಡಿಯುತ್ತಾರೆ. ನೀವು ಕೆಡವಿದ ವಿದ್ಯಾಸಾಗರರ ಪ್ರತಿಮೆಯನ್ನು ಸ್ಥಾಪಿಸುತ್ತೇನೆ ಎಂದರೆ, ನನಗೆ ನಿಮ್ಮ ಭಿಕ್ಷೆ ಬೇಡ ಎಂದು ದೀದಿ ಹೂಂಕರಿಸುತ್ತಾರೆ. ಪ್ರಧಾನಿಯನ್ನು ಜೈಲಿಗಟ್ಟುತ್ತೇನೆ ಎಂದು ಅಬ್ಬರಿಸುತ್ತಾರೆ. ಬಿಜೆಪಿಗೆ ಬೇಕಾಗಿದ್ದುದೂ ಅದೇ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಬೀಳುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ದೀದಿ ಹೃದಯದಲ್ಲಿ ಏಕಿಷ್ಟು ಆಕ್ರೋಶ?
ಮಮತಾ ಅವರ ತಾಳ್ಮೆಗೆ ಬೆಂಕಿ ಬಿದ್ದಿದೆ
ಕೇಂದ್ರ ಸರಕಾರದ ವಿರುದ್ಧ ಮತ್ತು ಸಿಬಿಐ ವಿರುದ್ಧ ಹಠಕ್ಕೆ ಬಿದ್ದಿರುವ ಮಮತಾ ಬ್ಯಾನರ್ಜಿ ಅವರು, ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಕಮಿಷನರ್ ಗೆ ಬೆಂಬಲ ನೀಡುತ್ತಾರೆ, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳನ್ನೇ ಬಂಧನದಲ್ಲಿ ಇರಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ವಿಕೃತ ಫೋಟೋವನ್ನು ಹಾಕಿದ್ದಕ್ಕಾಗಿ ಓರ್ವ ಮಹಿಳೆಯನ್ನೇ ಜೈಲಿಗೆ ಕಳುಹಿಸುತ್ತಾರೆ. ವಿದ್ಯಾಸಾಗರ ಪುತ್ಥಳಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರದ ಬಿಜೆಪಿ ವಕ್ತಾರರನ್ನೂ ಬಂಧಿಸುತ್ತಾರೆ ಮಮತಾ ಬ್ಯಾನರ್ಜಿ. ಮಮತಾ ಅವರ ತಾಳ್ಮೆಗೆ ಬೆಂಕಿ ಬಿದ್ದಿದೆ, ಮಾತುಗಳು ತಾಳ ತಪ್ಪುತ್ತಿವೆ, ಮಾತುಗಳು ಕೆಂಡವನ್ನು ಉಗುಳುತ್ತಿವೆ. ಯಾರನ್ನೂ ನಂಬದ ಸ್ಥಿತಿಯಲ್ಲಿರುವ ಮಮತಾ ಪ್ರಜ್ಞಾವಂತಿಕೆಯಿಂದ ವರ್ತಿಸುತ್ತಾರಾ?