"ದೀದಿ ಹೆಸರು ಬರೆದು ಆತ್ಮಹತ್ಯೆ, ದೂರು ವಾಪಸ್ ಪಡೆಯುತ್ತಿರುವುದೇಕೆ?"
ನವದೆಹಲಿ, ಮೇ 09: ಕಳೆದ ಫೆಬ್ರವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ನಿವೃತ್ತ ಐಪಿಎಸ್ ಅಧಿಕಾರಿ ಗೌರವ್ ದತ್ ಪ್ರಕರಣದಲ್ಲಿ ಅವರ ಪತ್ನಿಯೇ ದೂರನ್ನು ವಾಪಸ್ ಪಡೆದಿದ್ದು, ಅದಕ್ಕೆ ಕಾರಣ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
1986ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಗೌರವ್ ದತ್ ಅವರು ಫೆಬ್ರವರಿ 19 ರಂದು ಸಾವಿಗೀಡಾಗಿದ್ದರು. ಅವರ ದೇಹ ಮೊಣಕೈ ಕತ್ತರಿಸಿಕೊಂಡ ಸ್ಥಿತಿಯಲ್ಲಿ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಜೊತೆಗೆ ಅವರು ತಮ್ಮ ಸಾವಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ದೂರಿ ಡೆತ್ ನೋಟ್ ಬರೆದಿಟ್ಟಿದ್ದರು.
ಮಮತಾ ಬ್ಯಾನರ್ಜಿ ಹೆಸರು ಬರೆದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯೆ
ಅವರ ಸಾವಿನ ನಂತರ ಅವರ ಪತ್ನಿ ಶ್ರೇಯಸಿ ದತ್ ಅವರು, 'ಪತಿಯ ಸಾವಿನ ತನಿಖೆಯಾಗಬೇಕು. ತಮಗೆ ನ್ಯಾಯ ಸಿಗಬೇಕು' ಎಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಆದರೆ ಇದೀಗ ಅವರು ತಾವು ಸಲ್ಲಿಸಿದ ಅರ್ಜಿಯನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.
ದೂರು ದಾಖಲಿಸುವ ಸಮಯದಲ್ಲಿ ನನ್ನ ಮನಸ್ಥಿತಿ ಸರಿ ಇರಲಿಲ್ಲ. ದೂರು ನೀಡಿದೆ. ಇದೀಗ ವಾಪಸ್ ಪಡೆಯುತ್ತೇನೆ ಎಂದು ಅವರು ಹೇಳಿದ್ದರು. ಆದರೆ ಈ ಕುರಿತು ಸ್ಪಷ್ಟನೆ ನೀಡುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಶ್ರೇಯಸಿ ದತ್ ಅವರೊಂದಿಗೆ ತಾನು ಮಾತನಾಡಬೇಕು ಎಂದು ತಿಳಿಸಿದೆ.
"ಮಮತಾ ಬ್ಯಾನರ್ಜಿ ಅವರ ಬಗ್ಗೆ ನನಗೆ ಎಲ್ಲಾ ವಿಷಯಗಳೂ ತಿಳಿದಿದ್ದರಿಂದ ಅವರು ನನಗೆ ಹತ್ತು ವರ್ಷಗಳಿಂದಲೂ ಕಿರುಕುಳ ನೀಡುತ್ತಿದ್ದರು. ನಾನು ಸ್ವಯಂ ನಿವೃತ್ತಿ ತೆಗೆದುಕೊಂಡ ಮೇಲೂ ನನ್ನ ವಿರುದ್ಧ ಇದ್ದ ಕೇಸುಗಳನ್ನು ವಾಪಸ್ ಪಡೆಯಲು ಅವರು ನಿರಾಕರಿಸಿದ್ದರು. ಅವರ ನಿರಂತರ ಕಿರುಕುಳ ತಡೆಯಲಾರದೆ, ಗೌರವದಿಂದ ಬದುಕುವುದಕ್ಕೆ ಸಾಧ್ಯವಾಗದೆ, ಗೌರವದಿಂದ ಸಾಯಲು ಪ್ರಯತ್ನಿಸುತ್ತಿದ್ದೇನೆ" ಎಂದು ಗೌರವ್ ದತ್ ಅವರು ಪತ್ರದಲ್ಲಿ ಬರೆದಿದ್ದರು.