ಹತ್ರಾಸ್ ಅತ್ಯಾಚಾರದ ಬಗ್ಗೆ ಏಕೆ ಮಾತನಾಡಲಿಲ್ಲ ಅಮಿತ್ ಶಾ: ಮಮತಾ
ಕೋಲ್ಕತ್ತಾ, ಮಾರ್ಚ್ 29: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ 82 ವರ್ಷದ ತಾಯಿ ಸಾವಿನ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತನ ತಾಯಿ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಅವರು ಈ ಸಾವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇ ಬಿಜೆಪಿ ಆಡಳಿತದ ಸರ್ಕಾರ ಅಸ್ತಿತ್ವದಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆದ ದೌರ್ಜನ್ಯ ಮತ್ತು ಕೊಲೆ ಬಗ್ಗೆ ಏಕೆ ಮೌನ ವಹಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
"ಮಮತಾ ಬ್ಯಾನರ್ಜಿ ಗೆದ್ದರೆ ಪಶ್ಚಿಮ ಬಂಗಾಳವೇ ಮಿನಿ ಪಾಕಿಸ್ತಾನ"!
ಕಳೆದ ತಿಂಗಳು ಉತ್ತರ 24 ಪರಗಣ ಜಿಲ್ಲೆಯ ನಿಮ್ತಾ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ತಮ್ಮ ತಾಯಿ ಗಾಯಗೊಂಡಿದ್ದರು ಎಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಆರೋಪಿಸಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯವನ್ನು ಬೆಂಬಲಿಸುವುದಿಲ್ಲ:
"ಆ ಸಹೋದರಿ ಹೇಗೆ ಮೃತಪಟ್ಟರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ನಮ್ಮ ಸಹೋದರಿಯರು ಮತ್ತು ತಾಯಂದಿರ ಮೇಲಿನ ದೌರ್ಜನ್ಯವನ್ನು ಬೆಂಬಲಿಸುವುದಿಲ್ಲ. ಆದರೆ ಈ ವಿಷಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಬಂಗಾಳದ ಕಥೆ ಏನು ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಈಗ ಟ್ವೀಟ್ ಮಾಡುತ್ತಿದ್ದಾರೆ. ಅದೇ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಸಂದರ್ಭದಲ್ಲಿ ನೀವು ಏಕೆ ಮೌನವಾಗಿದ್ದಿರಿ" ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್:
ಟಿಎಂಸಿ ಕಾರ್ಯಕರ್ತರು ನಡೆಸಿದ ಹಲ್ಲೆಯಿಂದ ಮೃತಪಟ್ಟ ಬಂಗಾಳದ ಮಗಳು ಶೋವಾ ಮಜುಂದಾರ್ ಅವರ ಸಾವು ತುಂಬಾ ನೋವುಂಟು ಮಾಡಿದೆ. ಅವರ ಕುಟುಂಬದವರ ನೋವು ಮಮತಾ ಬ್ಯಾನರ್ಜಿ ಅವರನ್ನು ದೀರ್ಘಕಾಲದವರೆಗೂ ಕಾಡಲಿದೆ. ಹಿಂಸಾಚಾರ ಮುಕ್ತ ರಾಜ್ಯಕ್ಕಾಗಿ ಬಂಗಾಳ ಹೋರಾಡಲಿದೆ. ನಮ್ಮ ಸಹೋದರಿಯರು ಮತ್ತು ತಾಯಂದಿರ ರಕ್ಷಣೆಗಾಗಿ ಬಂಗಾಳದಲ್ಲಿ ಹೋರಾಟ ನಡೆಯಲಿದೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.