ಪ್ರತಿದಿನವೂ ಹಿಂದೂ-ಮುಸ್ಲಿಂ ಎನ್ನುವ ಮೋದಿ ವಿರುದ್ಧ ಏಕೆ ದೂರು ದಾಖಲಾಗಿಲ್ಲ?
ಕೋಲ್ಕತ್ತಾ, ಏಪ್ರಿಲ್ 9: ಚುನಾವಣಾ ಆಯೋಗ ಹತ್ತು ನೋಟೀಸ್ಗಳನ್ನು ಬೇಕಾದರೂ ನೀಡಲಿ, ಹಿಂದೂ ಹಾಗೂ ಮುಸ್ಲಿಂ ಮತಗಳ ನಡುವೆ ವಿಭಜನೆ ಮಾಡುವುದರ ವಿರುದ್ಧ ಮಾತನಾಡುವುದನ್ನು ನಾನು ನಿಲ್ಲಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಟಿಎಂಸಿಗೆ ಮತ ಚಲಾಯಿಸುವಂತೆ ಮುಸ್ಲಿಂ ಸಮುದಾಯವನ್ನು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಮಮತಾ ಬ್ಯಾನರ್ಜಿಗೆ ನೋಟೀಸ್ ನೀಡಲಾಗಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನೀವು ನನಗೆ ಹತ್ತು ಶೋಕಾಸ್ ನೋಟೀಸ್ಗಳನ್ನು ನೀಡಿದರೂ ನನ್ನ ಉತ್ತರ ಒಂದೇ ಆಗಿರುತ್ತದೆ. ಹಿಂದೂ ಹಾಗೂ ಮುಸ್ಲಿಂ ಮತಗಳ ವಿಭಜನೆ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಆಯೋಗದ ನೋಟಿಸ್
ಪ್ರತಿದಿನವೂ ಹಿಂದೂ ಮುಸ್ಲಿಂ ಕುರಿತೇ ಮೋದಿ ಮಾತನಾಡುತ್ತಿರುತ್ತಾರೆ. ಅವರ ವಿರುದ್ಧ ಏಕೆ ದೂರು ದಾಖಲಾಗಿಲ್ಲ? ನಂದಿಗ್ರಾಮ ಪ್ರಚಾರದ ವೇಳೆ "ಮಿನಿ ಪಾಕಿಸ್ತಾನ" ಎಂಬ ಪದವನ್ನು ಉಚ್ಚರಿಸಿದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ? ಪ್ರತಿಯೊಬ್ಬರಿಗೂ ಅವರದ್ದೇ ಮಾತಿನ ಶೈಲಿ ಇರುತ್ತದೆ. ಅದು ಅವರವರ ವಾಕ್ಚಾತುರ್ಯ. ನಿಮಗೆ ಬೇಕಾದಷ್ಟು ಬಾರಿ ನನ್ನನ್ನು ಅಪಹಾಸ್ಯ ಮಾಡಿ ಪರವಾಗಿಲ್ಲ. ಆದರೆ ನೀವು ಆ ಲಕ್ಷ್ಮಣ ರೇಖೆಯನ್ನು ದಾಟಿದರೆ, ಅದು ನಿಮ್ಮ ವ್ಯಕ್ತಿತ್ವವನ್ನು ತೋರುತ್ತದೆ ಅಷ್ಟೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿಆರ್ಪಿಎಫ್ ಸಿಬ್ಬಂದಿ ಗೃಹ ಸಚಿವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮತ್ತೆ ಆರೋಪಿಸಿದ್ದಾರೆ. ಈಚೆಗಷ್ಟೆ ಮತದಾರರ ಮೇಲೆ ಸಿಆರ್ಪಿಎಫ್ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ದೂರಿದ್ದರು. ಅವರು ಹೀಗೆ ಆರೋಪ ಮಾಡುತ್ತಿರುವುದು ಮಮತಾ ಬ್ಯಾನರ್ಜಿ ಸೋಲೊಪ್ಪಿಕೊಂಡಿರುವುದನ್ನು ತೋರುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿತ್ತು.