ಬಿಜೆಪಿ ನಿಮ್ಮ ಖಾತೆಗೆ ಇನ್ನೂ 15 ಲಕ್ಷ ರೂ. ಹಾಕಿಲ್ಲ: ಮಮತಾ ಬ್ಯಾನರ್ಜಿ
ಪುರುಲಿಯಾ, ಮಾರ್ಚ್ 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಕನಸು ಮೂಡಿಸುವ ಭಾರತೀಯ ಜನತಾ ಪಕ್ಷದ ಸುಳ್ಳು ಭರವಸೆಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಪುರುಲಿಯಾ ಜಿಲ್ಲೆಯ ಕಾಶಿಪುರ್ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಅದನ್ನು ಮಾಡುತ್ತೇನೆ, ನಾವು ಇದನ್ನು ಮಾಡುತ್ತೇವೆ ಎಂದು ಅವರು ಮುಖಪುಟದಲ್ಲಿ ದೊಡ್ಡದಾಗಿ ಜಾಹೀರಾತುಗಳನ್ನು ನೀಡುತ್ತಾರೆ. ಅವೆಲ್ಲ ನೀವು ಕಾಣುವ ಕನಸುಗಳ ರೀತಿಯಲ್ಲೇ ಇರುತ್ತವೆ ಅಷ್ಟೇ ಎಂದರು.
ರೋಚಕ ಕಾರಣ: 2 ಮನೆ ಬಾಡಿಗೆ ಪಡೆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!
"ಅವರು ಆಶ್ವಾಸನೆ ನೀಡಿದಂತೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕಿದರೇ, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ನೆಚ್ಚಿಕೊಳ್ಳಬೇಡಿ. ಅವರದ್ದು ಸುಳ್ಳು ಭರವಸೆಗಳನ್ನು ನೀಡುವ ಪಕ್ಷ. ಅವರದ್ದು ಮೀರ್ ಜಾಫರ್ ಅಂತಹ ದೇಶದ್ರೋಹಿಗಳ ಪಕ್ಷ, ಅವರದ್ದು ರಾಕ್ಷಸರು ಮತ್ತು ಡಕಾಯತರ ಪಕ್ಷ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ಬುಡಕಟ್ಟು ಜನಾಂಗ ಭೂಹಕ್ಕುಗಳ ಬಗ್ಗೆ ಪ್ರಸ್ತಾಪ:
ಬುಡಕಟ್ಟು ಜನಾಂಗದವರ ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡರು. ಭಾರತೀಯ ಜನತಾ ಪಕ್ಷದ ಸರ್ಕಾರವು "ಜಾರ್ಖಂಡ್ನಲ್ಲಿ ಬುಡಕಟ್ಟು ಜನಾಂಗದ ಜನರಿಂದ ಭೂ ಹಕ್ಕುಗಳನ್ನು ಕಸಿದುಕೊಂಡಿದೆ. ಆದರೆ ನಮ್ಮ ಸರ್ಕಾರ ಬುಡಕಟ್ಟು ಜನಾಂಗದವರ ಭೂ ಹಕ್ಕುಗಳನ್ನು ಪುನಃಸ್ಥಾಪಿಸಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.