ಕಾಶ್ಮೀರ ವಿಷಯದಲ್ಲಿ ಮಮತಾ ಬ್ಯಾನರ್ಜಿ ಮೌನಕ್ಕೆ ಅಸಲಿ ಕಾರಣ ಇದೇ...
Recommended Video
ಕೋಲ್ಕತ್ತಾ, ಆಗಸ್ಟ್ 06: ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವುದಕ್ಕೆ ಒಂದಿಲ್ಲೊಂದು ವಿಷಯ ಹುಡುಕುತ್ತಲೇ ಇರುತ್ತಿದ್ದ ಮಮತಾ ಬ್ಯಾನರ್ಜಿ 370 ನೇ ವಿಧಿ ರದ್ದತಿಯಂಥ ಮಹತ್ವದ ವಿಷಯದ ಬಗ್ಗೆಇದುವರೆಗೆ(ಈ ವರದಿ ಪ್ರಕಟವಾಗುವವರೆಗೆ) ಮೌನವಾಗಿಯೇ ಉಳಿದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಗಂಟಲವರೆಗೂ ಬಂದ ಟೀಕಾಸ್ತ್ರಗಳನ್ನೆಲ್ಲ ಎದೆಯಲ್ಲೇ ಹುದುಗಿಸಿಟ್ಟುಕೊಂಡು ಮಮತಾ ಬ್ಯಾನರ್ಜಿ ತಾಳ್ಮೆಯಿಂದಿರುವುದಕ್ಕೆ ಕಾರಣವಿದೆ...
ಕಳೆದ ಮಾರ್ಚ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಂತ್ರಿ ಮಮತಾ ಬ್ಯಾನರ್ಜಿ ಅವರು ಬಿಡುಗಡೆ ಮಾಡಿದ್ದ ತೃಣಮೂಲ ಕಾಂಗ್ರೆಸ್ ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅತೀ ಹೆಚ್ಚು ಗಮನ ಸೆಳೆದಿದ್ದು ಕಾಶ್ಮೀರ ಸಮಸ್ಯೆಯ ಇತ್ಯರ್ಥದ ಪ್ರಸ್ತಾಪ!
ಪಶ್ಚಿಮ ಬಂಗಾಳ ರಾಜ್ಯದ, ಪ್ರಾದೇಶಿಕ ಪಕ್ಷವೊಂದರ ನಾಯಕಿಯಾಗಿರುವ, ರಾಜ್ಯದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ರಾಜ್ಯದಲ್ಲೇ ನೂರಾರು ಸಮಸ್ಯೆ ಇಟ್ಟುಕೊಂಡು ಕಾಶ್ಮೀರದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಕಂಡಿದ್ದು, 'ಪ್ರಧಾನಿ ಪಟ್ಟದ ಮೇಲೆ ಬಿದ್ದಿದ್ದ ಕಣ್ಣು!' ಆದರೆ ಲೋಕಸಭೆ ಚುನಾವಣೆ ಮುಗಿದು, ನಿರೀಕ್ಷೆಗಳೆಲ್ಲ ತಲೆಕೆಳಗಾದ ಮೇಲೂ ಕೇಂದ್ರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇದ್ದ ದೀದಿ ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ.
ಜಮ್ಮು ಕಾಶ್ಮೀರದ ಇತಿಹಾಸ ನೆನಪಿಸಬೇಕಿದೆ, ಆಧುನಿಕ ಜಮ್ಮು ಕಾಶ್ಮೀರ ಹೇಗಾಯಿತು?
ಸೋಮವಾರ ಲೋಕಸಭೆಯಲ್ಲಿ ಕಾಶ್ಮೀರದ ಕುರಿತ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದರೆ ಟಿಎಂಸಿ ಪರವಾಗಿ ಸಂಸದ ಡೆರೆಕ್ ಒ ಬ್ರಿಯನ್ ಹೇಳಿಕೆ ನೀಡಿದ್ದು ಬಿಟ್ಟರೆ, ನಂತರ ಮಮತಾ ಬ್ಯಾನರ್ಜಿ ಅವರ ಬಾಯಿಂದ ಸೊಲ್ಲೇ ಬರಲಿಲ್ಲ! ಆರ್ಟಿಕಲ್ 370 ರದ್ದತಿಯನ್ನು ದೀದಿ ವಿರೋಧಿಸುತ್ತಾರೆ ಎಂದುಕೊಂಡಿದ್ದರೆ ಅವರು ವಿರೋಧಿಸುವ ಗೋಜಿಗೂ ಹೋಗದೆ, ಅದನ್ನು ಬೆಂಬಲಿಸುವ ಧೈರ್ಯವನ್ನೂ ತೋರದೆ ತಟಸ್ಥವಾಗುಳಿದು ತಮ್ಮ ನಡೆಯ ಬಗ್ಗೆ ವಿಚಿತ್ರ ಕುತೂಹಲ ಮೂಡಿಸಿದ್ದಾರೆ!
ಏನೂ ಆಗಿಯೇ ಇಲ್ಲ ಎಂಬಂತಿರುವ ದೀದಿ!
ಇತ್ತ ಸಂಸತ್ತಿನಲ್ಲಿ ಸೋಮವಾರ, 370 ನೇ ವಿಧಿಯ ಪ್ರಕಾರ ಸಂವಿಧಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮಮತಾ ಬ್ಯಾನರ್ಜಿ ಸರ್ಕಾರದ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏನೂ ಆಗಿಯೇ ಇಲ್ಲ ಎಂಬಂತೆ ತಟಸ್ಥವಾಗಿದ್ದರು. ಸದನಲ್ಲಿ ನಡೆಯುತ್ತಿರುವ ಚರ್ಚೆಗಳ ಅಪ್ಡೇಟ್ಸ್ ಸಿಗುತ್ತಿದ್ದರೂ ಅವರು ಆ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಂತಿರಲಿಲ್ಲ.
"ಕಲಂ 370ರದ್ದು; 'ಯುಗಪುರುಷ' ಮೋದಿಗೆ ಭಾರತರತ್ನ ಸಿಗಲಿ"
ಪ್ರಣಾಳಿಕೆಯಲ್ಲಿ ಕಾಶ್ಮೀರದ ಕುರಿತು ದನಿ ಎತ್ತಿದ್ದ ದೀದಿ!
ಮಾರ್ಚ್ ತಿಂಗಳಿನಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಡುಗಡೆಯಾದ ಟಿಎಂಸಿ ಪ್ರಣಾಳಿಕೆಯಲ್ಲಿ ಮಮತಾ ಬ್ಯಾನರ್ಜಿ ಅವರು ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿಕೊಡುವುದಾಗಿ ಹೇಳಿದ್ದರು. ಆ ಮೂಲಕ ತಮ್ಮ ಕಣ್ಣು ನೆಟ್ಟಿರುವುದು ಕೇಂದ್ರದ ರಾಜಕೀಯದ ಮೇಲೆ ಎಂಬುದನ್ನು ಸಾಬೀತುಪಡಿಸಿದ್ದರು. ಆದರೆ ಇದೀಗ ಕಾಶ್ಮೀರ ವಿಷಯದ ಕುರಿತು ಇಡೀ ದೇಶವೇ ಚರ್ಚಿಸುತ್ತಿದ್ದರೆ ದೀದಿ ಮೌನವಾಗಿದ್ದಾರೆ.
ಮೌನಕ್ಕೆ ಕಾರಣವೇನು?
ಅಷ್ಟಕ್ಕೂ ದೀದಿ ಮೌನಕ್ಕೆ ಕಾರಣವೇನು? ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೆಗೆಟಿವ್ ಪೊಲಿಟಿಕ್ಸ್ ಅನ್ನೇ ಅಸ್ತ್ರವಾಗಿ ಬಳಸಿದ್ದು ತಮಗೆ ಮುಳುವಾಗಿದೆ ಎಂಬುದು ದೀದಿಗೆ ತಿಳಿದಿದೆ. ಈಗಅಗಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಎದ್ದಿರುವುದಕ್ಕೆ ಲೋಕಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. 2021 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿರುವ ದೀದಿ ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದಿರಬೇಕು ಎಂಬ ಪಾಠವನ್ನು ಈಗಾಗಲೇ ಕಲಿತಿದ್ದಾರೆ. ಪಕ್ಶಃಕ್ಕೆ ಮಾರಣವಾಗುವಂಥ ಹೇಳಿಕೆ ನೀಡುವುದಕ್ಕಿಂತ ಸುಮ್ಮನಿದ್ದುಬಿಡುವುದೇ ಲೇಸು ಎಂಬ ನಿರ್ಧಾರಕ್ಕೆ ದೀದಿ ಬಂದಂತಿದೆ.
ಹಿಂದು ವೋಟ್ ಬ್ಯಾಂಕ್ !
ಕಳೆದ ಲೋಕಸಬೆ ಚುನಾವಣೆಯಲ್ಲಿ ಬಿಜೆಪಿ ಅನೂಹ್ಯ ರೀತಿಯಲ್ಲಿ 18(42) ಸ್ಥಾನಗಳನ್ನು ಗೆದ್ದು 2014 ರಲ್ಲಿ ಗೆದ್ದಿದ್ದ 2 ಸ್ಥಾನಗಳಲ್ಲಿ ಅದರ ಒಂಬತ್ತು ಪಟ್ಟಿನಷ್ಟು ಹೆಚ್ಚಿಸಿಕೊಂಡಿದ್ದು ದೀದಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಟಿಎಂಸಿಯ ಸಾಂಪ್ರದಾಯಿಕ ಮತದಾರರಾಗಿದ್ದವರೂ ಬಿಜೆಪಿಯತ್ತ ವಾಲಿದ್ದು ಮಮತಾ ಭವಿಷ್ಯವನ್ನೇ ಕತ್ತಲಾಗಿಸಿದೆ. ಒಬಿಸಿ, ಪರಿಶಿಷ್ಟಜಾತಿ-ಪಂಗಡದ ಮತದಾರರು ಮಾತ್ರವಲ್ಲದೆ, ಅಲ್ಪಸಂಖ್ಯಾತರೂ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಹಿಂದು ವೋಟ್ ಬ್ಯಾಂಕ್ ನ ಮಹತ್ವ ದೀದಿಗೆ ಅರ್ಥವಾಗಿದೆ. ಕಾಶ್ಮೀರ ಎಂಬುದು ಒಂದು ಭಾವನಾತ್ಮಕ ಸಂಗತಿ ಎಂಬುದನ್ನು ಬಲ್ಲ ದೀದಿ, ಈ ಹೊತ್ತಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಬೇಡ ಎಂದು ನಿರ್ಧರಿಸಿದಂತಿದೆ.
ಪ್ರಶಾಂತ್ ಕಿಶೋರ್ ಸಲಹೆ
ಮೂಲಗಳ ಪ್ರಕಾರ 2021 ರ ವಿಧಾನಸಭೆ ಚುನಾವಣೆಗೆ ಟಿಎಂಸಿಯ ರಾಜಕೀಯ ಸ್ಟ್ರಾಟಜಿಸ್ಟ್ ಆಗಿರುವ ಪ್ರಶಾಂತ್ ಕಿಶೋರ್ ಅವರೇ ಮಮತಾ ಬ್ಯಾನರ್ಜಿ ಅವರಿಗೆ ಮೌನವಾಗಿರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅತೀ ಸೂಕ್ಷ್ಮ ವಿಷಯವಾಗಿರುವುದರಿಂದ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೂ ಪಕ್ಷಕ್ಕೆ ಮಾರಕ ಎಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿರುವುದುದೇ ಮಮತಾ ಬ್ಯಾನರ್ಜಿ ಮೌನಕ್ಕೆ ಕಾರಣ ಎಂಬುದು ಅವರ ಆಪ್ತ ವಲಯದ ಮಾತು.
ಎನ್ ಡಿಎ ಗೆ ಪರೋಕ್ಷ ಬೆಂಬಲ?
ಕಾಶ್ಮೀರ ವಿಷಯದಲ್ಲಿ ಪ್ರತಿಕ್ರಿಯೆ ನೀಡದೆ ಉಳಿಯುವ ಮೂಲಕ ಮಮತಾ ಬ್ಯಾನರ್ಜಿ ಅವರು ಎನ್ ಡಿಎ ಸರ್ಕಾರದ ನಡೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.